Tuesday, July 29, 2008

17. ಬೆನ್ನು ಹತ್ತಿದ ಭೂತ

ತನ್ನ ಪಾಲಿಗೆ ಮತ್ತೆ ಚಿಗುರಲಾರದಷ್ಟು ಗೊಡ್ಡಾಗಿರುವ ಮರ, ಹೊರನೋಟಕ್ಕೆ ಹಸಿರು ತುಂಬಿಕೊಂಡಂತೆ ಕಾಣಿಸುತ್ತದೆ. ಆದರೆ ಆ ಮರದಲ್ಲಿ ಗೂಡು ಕಟ್ಟಿರುವ ಹಕ್ಕಿಗಳಿಗೆ ಈ ಮರದ ಆಯಸ್ಸು ಮುಗಿಯುತ್ತಾ ಬಂದಿದೆ ಅಂತ ಮೊದಲೇ ಗೊತ್ತಾಗಿಬಿಡುತ್ತದೆ. ಅಂಥ ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟುವುದಿಲ್ಲ. ಪ್ರತಿವರ್ಷ ಗೂಡು ಕಟ್ಟುತ್ತಿದ್ದ ಗೀಜಗವೋ ಗಿಳಿಯೋ ಗೊರವಂಕವೋ ಅಲ್ಲಿ ಗೂಡು ಕಟ್ಟಿಲ್ಲ ಅಂದರೆ ಅದರ ಆಯಸ್ಸು ಮುಗಿಯಿತು ಅಂತಲೇ ಅರ್ಥ ಎಂದು ಅಜ್ಜ ಚಿಕ್ಕಂದಿನಲ್ಲಿ ಹೇಳಿದ್ದ ಮಾತು ಚಿರಾಯುವಿಗೆ ನೆನಪಾಯಿತು. ಚಿರಾಯುವಿಗೆ ಮರಗಳು ಸಾಯುತ್ತವೆ ಎಂಬ ನಂಬಿಕೆಯೂ ಇರಲಿಲ್ಲ. ಸಿಡಿಲು ಬಡಿಸಿಕೊಂಡ ಮನೆ ಮುಂದಿನ ಮಾವಿನ ಮರ ಒಂದೇ ತಿಂಗಳಿಗೆ ಒಣಗಿ ಎಲೆಯುದುರಿಸಿಕೊಂಡು ಬೋಳಾಗಿದ್ದನ್ನು ನೋಡಿದ್ದು ಬಿಟ್ಟರೆ ಸಹಜವಾಗಿ ಸತ್ತ ಮರಗಳನ್ನು ಅವನು ನೋಡಿರಲೇ ಇಲ್ಲ.
ಮರಗಳ ಹಾಗೆ ಚಿಗುರುವುದನ್ನು ಕಲಿಯಬೇಕು ಎಂದು ಅವನು ಅನೇಕ ಕಾದಂಬರಿಗಳಲ್ಲಿ ಬರೆದಿದ್ದ. ಲೇಖಕನೂ ಹಾಗೆ ಚಿಗುರುವುದಕ್ಕೆ ಸಾಧ್ಯವಾ? ಅದೊಂದು ಭ್ರಮೆ ಕಣೋ ಅಂದಿದ್ದಳು ಯಾಮಿನಿ. ಅವಳೊಬ್ಬಳೇ ಅವನ ಜೊತೆ ಹಾಗೆ ಏಕವಚನದಲ್ಲಿ ಮಾತಾಡುವುದು. ಬೇರೆಯವರ ಪಾಲಿಗೆ ಅವನು ಮಿಸ್ಟರ್ ಚಿರಾಯು, ಚಿರಾಯು ಸರ್, ಮೇಷ್ಟ್ರು, ಗುರುಗಳು. ದೊಡ್ಡ ಬರಹಗಾರ ಎಂಬ ಹೆಸರಿನಲ್ಲೇ ಲೇಖಕನ ಅರ್ಧ ಸಾಮರ್ಥ್ಯ ಸೋರಿಹೋಗುತ್ತದೆಯೇನೋ ಅನ್ನಿಸಿತು ಅವನಿಗೆ. ವಾಲಿಯ ಮುಂದೆ ನಿಂತು ಯುದ್ಧಮಾಡುವವನ ಅರ್ಧ ಶಕ್ತಿಯನ್ನು ಹೀರಿಕೊಳ್ಳುವಂಥ ಹಾರವೊಂದು ವಾಲಿಯ ಬಳಿ ಇತ್ತಂತೆ. ಹೊಗಳುಭಟರೂ ಹಾಗೇ, ಅರ್ಧ ಸೃಜನಶೀಲತೆಯನ್ನು ಕಸಿದುಕೊಂಡು ತನ್ನನ್ನು ಅದೇ ಪಂಜರದೊಳಗೆ ಬಂಧಿಯಾಗಿಸುತ್ತಾರೆ ಅನ್ನುವುದು ಚಿರಾಯುವಿಗೆ ಇದ್ದಕ್ಕಿದ್ದಂತೆ ಹೊಳೆಯಿತು.
ತನ್ನೊಳಗಿನ ತೀವ್ರತೆಯನ್ನು ಉಳಿಸಿದವಳು ಯಾಮಿನಿ ಮಾತ್ರ ಅನ್ನುವುದು ಚಿರಾಯುವಿಗೆ ನೆನಪಾಯಿತು. ಚಿರಾಯು ಬರೆದದ್ದನ್ನು ಅವಳು ಒಮ್ಮೊಮ್ಮೆ ನಿರಾಕರಿಸುತ್ತಿದ್ದಳು. ಅದೊಂದು ಅದ್ಭುತ ಚಿಂತನೆ ಎಂದು ಹೇಳಹೊರಟದ್ದನ್ನು ನಿಟ್ಟುಸಿರಲ್ಲಿ ಪಕ್ಕಕ್ಕೆ ಸರಿಸಿ, ಎಷ್ಟು ಜನ ಹೇಳಿಲ್ಲ ಇದನ್ನು. ನೀನೂ ಅದನ್ನೇ ಹೇಳಬೇಕಾ ಅನ್ನುತ್ತಿದ್ದಳು. ತನ್ನ ಮನಸ್ಸಿಗೆ ಹಿತವೆನಿಸುವಂತೆ ನಿರಾಕರಿಸಬಲ್ಲ ಶಕ್ತಿ ಅವಳೊಬ್ಬಳಿಗೇ ಇತ್ತಲ್ಲ ಅಂತ ಚಿರಾಯು ನೆನಪಿಸಿಕೊಂಡ.
ಚಿರಾಯು, ನೀನು ಯೋಚಿಸ್ತಾ ಇರೋ ರೀತೀನೇ ಸ್ಟೀರಿಯೋಟೈಪ್. ಅದರಲ್ಲೇನಿದೆ ಹೊಸತನ. ಹೊಸತನ ಇರಬೇಕು ಅಂತಲ್ಲ. ಆದರೆ ನೀನು ಹೇಳ್ತಿರೋದು ಎಷ್ಟು ಜನರಲ್ಲಿ ಆಸಕ್ತಿ ಮೂಡಿಸುತ್ತೆ ಯೋಚಿಸು ಎಂದು ತನ್ನ ಅಪೂರ್ವ ಸಿದ್ಧಾಂತಗಳನ್ನೆಲ್ಲ ಆಕೆ ತಳ್ಳಿಹಾಕಿದ್ದಳು. ಆಕೆ ಹಾಗೆ ಹೇಳಿದ ಮೇಲೂ ಅದೇ ಸಿದ್ಧಾಂತಗಳನ್ನು ಅವನು ತುಂಬಿದ ಸಭೆಯಲ್ಲಿ ಮಂಡಿಸುತ್ತಿದ್ದ. ಬಂದಿದ್ದವರು ಆದನ್ನೇ ಕೊಂಡಾಡುತ್ತಿದ್ದರು. ಆಗ ಅವನು ಅದನ್ನು ಯಾಮಿನಿಗೆ ಹೇಳಿ ಅವಳನ್ನು ರೇಗಿಸುತ್ತಿದ್ದ. ನೀನು ಬೇಡ ಅಂದಿದ್ದರ ಬಗ್ಗೆಯೇ ಮಾತಾಡಿದೆ. ಎಲ್ಲರೂ ಎಷ್ಟೊಂದು ಇಷ್ಟಪಟ್ರು ಗೊತ್ತಾ ಅನ್ನುತ್ತಿದ್ದ. ಯಾಮಿನಿ ಸುಮ್ಮನೆ ನಗುತ್ತಿದ್ದಳು.
ಆದರೆ ತಾನು ಏನು ಹೇಳಿದರೂ ಅವರು ಕೇಳಿಸಿಕೊಳ್ಳುತ್ತಾರೆ. ಏನು ಮಾತಾಡಿದರೂ ಮೆಚ್ಚಿಕೊಳ್ಳುತ್ತಾರೆ ಅನ್ನುವುದು ಅವನಿಗೆ ಗೊತ್ತಾದದ್ದು ಒಂದು ವಿಚಿತ್ರ ಸಂದರ್ಭದಲ್ಲಿ.
ಚಿರಾಯು ಶಿವಮೊಗ್ಗೆಯ ಹಳ್ಳಿಯೊಂದರ ಸ್ಕೂಲು ಉದ್ಘಾಟನೆಗೆ ಹೋಗಿದ್ದ. ಅಲ್ಲಿಗೆ ಹೋಗುವ ತನಕವೂ ತಾನೇನು ಮಾತಾಡಬೇಕು ಅನ್ನುವ ಬಗ್ಗೆ ಕಿಂಚಿತ್ತೂ ಕಲ್ಪನೆಯಿರಲಿಲ್ಲ ಅವನಿಗೆ. ಹಿಂದಿನ ರಾತ್ರಿ ಯಾಮಿನಿಗೆ ಫೋನ್ ಮಾಡಿ ಏನು ಮಾತಾಡ್ಲೇ ಎಂದು ಕೇಳಿದಾಗ ನಿನ್ನ ನೂರೆಂಟು ಸಿದ್ಧಾಂತಗಳಿವೆಯಲ್ಲ, ಅವುಗಳಲ್ಲಿ ಒಂದನ್ನು ಹೇಳು ಅಂದಿದ್ದಳು. ಆವತ್ತು ಯಾಮಿನಿಯ ಮೇಲೆ ಸಿಟ್ಟು ಬಂದಿತ್ತಾದರೂ ತೋರಿಸಿಕೊಳ್ಳದೇ ಫೋನಿಟ್ಟಿದ್ದ.
ಮಾರನೆಯ ದಿನ ಅವನು ಮಾತಾಡಿದ್ದು ಗುರುಕುಲ ಪದ್ಧತಿಯ ಬಗ್ಗೆ. ಶ್ರುತಿ ಮತ್ತು ಶ್ರೌತ್ರದ ಬಗ್ಗೆ. ಕೇಳುವುದು ಮತ್ತು ನೆನಪಿಟ್ಟುಕೊಳ್ಳುವುದರ ಬಗ್ಗೆ. ಹೇಗೆ ಮಾಹಿತಿ ಪೂರ್ಣವಾಗಿರಬೇಕು ಅನ್ನುವುದರ ಬಗ್ಗೆ. ಇನ್ ಫಾರ್ಮೇಷನ್ ಅನ್ನುವುದು ಮನುಷ್ಯನನ್ನು ಶಕ್ತಿಶಾಲಿಯನ್ನಾಗಿಸುತ್ತದೆ ಅನ್ನುವುದಕ್ಕೆ ಹಳೆಯ ಕತೆಯೊಂದನ್ನು ಉದಾಹರಿಸಿದ್ದ.
ಚಿರಾಯು ಯಾವತ್ತೋ ಓದಿದ ಕತೆ ಅದು. ಓದಿದ ಮನುಷ್ಯನೊಬ್ಬ ಕಾಡಿನಲ್ಲಿ ನರಭಕ್ಷಕರ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾನೆ. ನರಭಕ್ಷಕರು ಮಾರನೆಯ ದಿನ ಮುಂಜಾನೆ ಸೂರ್ಯೋದಯದ ನಂತರ ಅವನನ್ನು ಕಾಳಿಗೆ ಅರ್ಪಿಸಬೇಕು ಅಂದುಕೊಂಡಿರುತ್ತಾರೆ. ತಪ್ಪಿಸಿಕೊಳ್ಳಲು ಮಾರ್ಗಗಳನ್ನು ಹುಡುಕುತ್ತಾ ಕೂತವನಿಗೆ ಮಾರನೆಯ ದಿನ ಸೂರ್ಯಗ್ರಹಣ ಅನ್ನುವುದು ನೆನಪಾಗುತ್ತದೆ. ಆತ ಕಾಡುಮನುಷ್ಯನನ್ನು ಕರೆದು ಮಾರನೆಯ ಬೆಳಗ್ಗೆ ಸೂರ್ಯೋದಯ ತಡವಾಗಿ ಆಗುತ್ತದೆ. ಸೂರ್ಯದೇವನಿಗೆ ನನ್ನನ್ನು ಬಲಿಕೊಡುವುದು ಇಷ್ಟವಿಲ್ಲ ಅನ್ನುತ್ತಾನೆ. ಸೂರ್ಯಗ್ರಹಣವಾದ್ದರಿಂದ ಆತ ಹೇಳಿದಂತೆಯೇ ಆಗುತ್ತದೆ. ಕಾಡುಮನುಷ್ಯರು ಆತನ ಕಾಲಿಗೆ ಬಿದ್ದು ಅವನನ್ನು ದೈವ ಸ್ವರೂಪಿ ಎಂದು ಭಾವಿಸಿ ಬಿಟ್ಟುಬಿಡುತ್ತಾರೆ.
ಆತ ಭಾಷಣ ಮುಗಿಸಿದಾಗ ಚಪ್ಪಾಳೆಯ ಸುರಿಮಳೆ ಆಗಿತ್ತು. ಆದರೆ ಆವತ್ತು ರಾತ್ರಿ ಮಾತಾಡುತ್ತಾ ಕೂತಾಗ ಊರಿನ ಹಿರಿಯರೊಬ್ಬರು ಚಿರಾಯುವಿನ ಹತ್ತಿರ ಕೇಳಿದ್ದರು. `ಮಾಹಿತಿ ದೊಡ್ಡದು ಅಂತೀರೋ ತಿಳುವಳಿಕೆಯೋ'
ಆಗ ಚಿರಾಯುವಿಗೆ ಜ್ಞಾನೋದಯವಾಗಿತ್ತು. ಯಾಮಿನಿ ಅನೇಕ ಸಲ ಹೇಳಿದ್ದರೂ ಅದರ ಸ್ವಾರಸ್ಯ ಹೊಳೆದಿರಲಿಲ್ಲ. ಒಳಗಿನಿಂದ ಹುಟ್ಟುವ ತಿಳುವಳಿಕೆ ಕಲೆಯನ್ನು ಸೃಷ್ಟಿಸುತ್ತದೆ. ಮಾಹಿತಿ ಕೇವಲ ಮಾಹಿತಿಯಾಗಷ್ಟೇ ಉಳಿಯುತ್ತದೆ. ತಿಳುವಳಿಕೆಗೆ ಅರಿವಿಗೆ ಕಾಲದ ಮಿತಿಯಿಲ್ಲ. ಆದರೆ, ಮಾಹಿತಿ ಕಾಲಕಾಲಕ್ಕೆ ಬದಲಾಗುತ್ತಾ ಹೋಗುತ್ತದೆ.
ತನ್ನ ಮೊದಲ ಕಾದಂಬರಿ ತನ್ನ ಅಬೋಧ ಮುಗ್ಧತೆಯಲ್ಲಿ ಹುಟ್ಟಿದ್ದು. ಆ ನಂತರದ ಕಾದಂಬರಿಗಳೆಲ್ಲ ಮಾಹಿತಿಯಿಂದ ತುಂಬಿಕೊಂಡಿದ್ದವು ಅನ್ನುವುದು ಅವನಿಗೆ ಇದ್ದಕ್ಕಿದ್ದಂತೆ ನೆನಪಾಯಿತು. ತನ್ನನ್ನು ಮೆಚ್ಚುವ ವಿದೇಶೀ ಓದುಗರಿಗೆ ಬೇಕಾಗಿರುವುದು ತನ್ನ ದೇಶದ, ಭಾಷೆಯ, ಜನಾಂಗದ ಕುರಿತ ಮಾಹಿತಿಯಷ್ಟೇ ಅಲ್ಲವೇ. ಅವರಿಗೆ ಅದು ಹೊಸ ಅರಿವನ್ನು ಕೊಡಬೇಕಾಗಿಲ್ಲವಲ್ಲ. ಅರಿವಿನಿಂದ ಸೃಷ್ಟಿಸುವುದು ಈ ಕ್ಷಣದಲ್ಲಿ ತನ್ನಿಂದ ಸಾಧ್ಯವಾ.
ಯಾಮಿನಿಯ ಜೊತೆ ಚರ್ಚಿಸದೇ ತಾನೇನನ್ನೂ ಬರೆಯುವುದೇ ಸಾಧ್ಯವಿಲ್ಲ ಅಂತನ್ನಿಸಿ ಚಿರಾಯು ಕುರ್ಚಿಯಿಂದ ಎದ್ದು ನೆಲದ ಮೇಲೆ ಕೂತ. ತಾನು ಕೂತಲ್ಲಿಂದಲೇ ಕಾಣಿಸುತ್ತಿದ್ದ ಹಲಸಿನ ಮರವನ್ನು ನೋಡಿದ. ಮರ ಸೊಂಟದ ತುಂಬ ಪುಟ್ಟ ಪುಟ್ಟ ಹಲಸಿನ ಕಾಯಿಗಳನ್ನು ಹೊತ್ತುಕೊಂಡು, ಸೊಂಟಕ್ಕೆ ಗೆಜ್ಜೆಯ ಉಡಿದಾರ ಕಟ್ಟಿಕೊಂಡ ಮಗುವಿನ ಹಾಗೆ ಕಂಡಿತು.
ತನ್ನ ಇದುವರೆಗಿನ ಕಲಿಕೆಯನ್ನೆಲ್ಲ ಮರೆತು ಮತ್ತೆ ಅಜ್ಞಾನಿಯಾಗಬೇಕು. ಮತ್ತೆ ಹೊಸದಾಗಿ ಬರೆಯಬೇಕು ಅನ್ನಿಸಿತು. ಅಂಥ ಅನ್ನಿಸಿಕೆಯೂ ತನ್ನ ಕಲಿಕೆಯಿಂದಲೇ ಹುಟ್ಟಿದ್ದಲ್ಲವೇ ಅನ್ನಿಸಿ ಹೇಸಿಕೆ ಎನ್ನಿಸಿತು.
ತಾನು ಸದ್ಯ ಕೂತಿದ್ದ ಊರನ್ನು ಗವ್ವನೆ ಕವಿದ ಮೋಡಖಚಿತ ಆಕಾಶದ ಹಾಗೆ, ತನ್ನನ್ನೂ ಅನುಭವ, ಜಾಣ್ಮೆ, ಬುದ್ಧಿವಂತಿಕೆ, ಅಹಂಕಾರ ಮತ್ತು ಏನು ಬೇಕಾದರೂ ಬರೆಯಬಲ್ಲೆ ಎಂಬ ಹಮ್ಮು ಕವಿದುಕೊಂಡಿದೆ ಅನ್ನಿಸಿತು. ಬೆಂಗಳೂರಲ್ಲಿ ಕೂತು ಬರೆಯಲಾರೆ, ಇಲ್ಲಿಗೆ ಬಂದು ಬರೆಯುತ್ತೇನೆ ಅನ್ನಿಸಿದ್ದು ಕೂಡ ಹುಂಬತನ ಅನ್ನಿಸಿತು.
ಇಲ್ಲ, ನಾನೇನೂ ಬರೆಯುವುದಿಲ್ಲ, ಬರೆದರೂ ಅದನ್ನು ಬರೆಯುವ ಮುಂಚೆಯೇ ಜಗಜ್ಜಾಹೀರುಗೊಳಿಸುವುದಿಲ್ಲ. ಬರೆಯುವುದಕ್ಕೆ ಮುಂಚೆಯೇ ಅದನ್ನು ಮಾರಾಟ ಮಾಡುವ ವ್ಯಾಪಾರಿ ಆಗುವುದಿಲ್ಲ..
ಹಾಗನ್ನಿಸಿದ್ದೇ ತಡ, ತನಗೆ ಕಾದಂಬರಿ ಬರೆಯುವುದಕ್ಕೆ ಪ್ರಕಾಶನ ಸಂಸ್ಥೆ ಕೊಟ್ಟಿದ್ದ ಹಣವನ್ನು ತಕ್ಷಣವೇ ಮರಳಿಸಬೇಕು ಅನ್ನಿಸಿತು. ಅವರಿಗೆ ಫೋನ್ ಮಾಡಲೆಂದು ಫೋನ್ ಕೈಗೆತ್ತಿಕೊಂಡ.
ತಾನು ನೆಟ್ ವರ್ಕ್ ಸಿಗದ ಜಾಗದಲ್ಲಿದ್ದೇನೆ ಅನ್ನುವುದು ಆಗ ನೆನಪಾಯಿತು.

Friday, May 23, 2008

ಅವಳು ಹಾಗಿರಲಿಲ್ಲ

ಚಿರಾಯುವಿಗೆ ನೆನಪಿಸಿಕೊಳ್ಳುತ್ತಾ ಹೋದಂತೆಲ್ಲ ರೇಜಿಗೆಯಾಯಿತು.
ಅವಳು ಹಾಗಿರಲಿಲ್ಲ ಅನ್ನುವುದು ಅವನಿಗೆ ಬರೆಯುತ್ತಾ ಹೋದಾಗಲೇ ಗೊತ್ತಾಗಿತ್ತು. ಆದರೆ, ನಿಜದಲ್ಲಿ ಕಂಡ ಪಾತ್ರಗಳು ಲೇಖಕನ ಭಾವಲೋಕದಲ್ಲಿ ಮತ್ತೊಂದಷ್ಟು ಆಯಾಮಗಳೊಂದಿಗೆ ಪಡಿಮೂಡುವುದು ಸಹಜ ಎಂದು ಚಿರಾಯು ನಂಬಿದ್ದ. ಕಂಡದ್ದನ್ನು ಕಂಡ ಹಾಗೇ ಯಾಕೆ ಬರೆಯಬೇಕು. ಕಂಡದ್ದನ್ನು ಕಂಡ ಹಾಗೆ ಬರೆಯುವುದಕ್ಕೆ ತನಗೆ ಸಾಧ್ಯೇ ಇಲ್ಲ ಅನ್ನುವುದು ಕಾಲೇಜು ದಿನಗಳಲ್ಲೇ ಅವನಿಗೆ ಗೊತ್ತಾಗಿಹೋಗಿತ್ತು. ಅದು ನಿನ್ನ ಶಕ್ತಿ ಅಂತ ಇಂಗ್ಲಿಷ್ ಮೇಷ್ಟ್ರು ಹೊಗಳಿದ್ದರು.
ಆದರೆ ಲೇಖಕನ ಭಾವಲೋಕದ ವಿಸ್ತಾರ ಎಷ್ಟು ಅನ್ನುವ ಪ್ರಶ್ನೆ ಅವನನ್ನು ಮತ್ತೆ ಮತ್ತೆ ಕಾಡತೊಡಗಿದ್ದು ಇತ್ತೀಚೆಗೆ. ಶಿವರಾಮ ಕಾರಂತರ ಅಷ್ಟೂ ಕಾದಂಬರಿಗಳನ್ನು ತರಿಸಿಕೊಂಡು ಚಿರಾಯು ಅಷ್ಟನ್ನೂ ಓದಿದ. ಅವರ ಕಾದಂಬರಿಗಳಲ್ಲಿ ಬರುವ ಪಾತ್ರಗಳಲ್ಲಿ ಅಂಥ ವಿಶೇಷವೇನೂ ಕಾಣಿಸಲಿಲ್ಲ. ಆರಂಭದಿಂದಲೂ ಅವನಿಗೆ ಶಿವರಾಮ ಕಾರಂತರ ಕಾದಂಬರಿಗಳೆಂದರೆ ಅಷ್ಟಕ್ಕಷ್ಟೇ. ಅವರು ಕಂಡಿದ್ದನ್ನು ಕಂಡ ಹಾಗೆ ಬರೆಯುತ್ತಾ ಹೋಗುತ್ತಾರೆ. ಅವರ ಛಾಪು ಆ ಕಾದಂಬರಿಗಳಲ್ಲಿ ಕಾಣಿಸುವುದಿಲ್ಲ ಎಂದು ಚಿರಾಯು ವಾದಿಸುತ್ತಿದ್ದ. ಹಾಗಾದಾಗ, ಕಾದಂಬರಿ ಡಾಕ್ಯುಮೆಂಟರಿ ಆಗುತ್ತದೆ ಎಂದಿದ್ದ. ಆ ಮಾತಿಗೆ ಪ್ರಬಲ ವಿರೋಧಗಳು ವ್ಯಕ್ತವಾಗಿದ್ದವು. ಆದರೆ, ಮತ್ತೆ ಮತ್ತೆ ಓದಿದಾಗಲೂ ಕಾರಂತರ ಕಾದಂಬರಿಗಳಲ್ಲಿ ಮೆಚ್ಚಿಕೊಳ್ಳಬಹುದಾದ ಅಂಶಗಳು ಅವನಿಗೆ ಕಾಣಿಸಿರಲೇ ಇಲ್ಲ. ಕುವೆಂಪು ಕಾದಂಬರಿಗಳಲ್ಲಿ ಕಾಣಿಸುವ ಬೆರಗು, ಅನಂತಮೂರ್ತಿಯವರಲ್ಲಿ ಕಾಣಿಸುವ ಒಳನೋಟ, ಲಂಕೇಶರ ಕಾದಂಬರಿಗಳಲ್ಲಿ ಕಾಣುವ ಹೊಳಹುಗಳು ಕಾರಂತರಲ್ಲಿ ಅವನಿಗೆ ಕಾಣಿಸಲೇ ಇಲ್ಲ.
ಆದರೆ, ಅವಳು ಬಂದು ನಾನು ಹಾಗಿದ್ದೆನಾ ಎಂದು ಕೇಳಿಹೋದ ಮೇಲೆ ಚಿರಾಯು ನಿಜಕ್ಕೂ ಗೊಂದಲಕ್ಕೆ ಬಿದ್ದ. ಅವಳನ್ನು ಹೇಗಿದ್ದಳೋ ಹಾಗೆ ಚಿತ್ರಿಸಿದರೆ ತಾನು ವಂಚಕನಂತೆ ಕಾಣಿಸುತ್ತಿದ್ದೆನಾ, ಕಾಮಿಯಂತೆ ಗೋಚರಿಸುತ್ತಿದ್ದೆನಾ, ತನಗಿಂತ ವಯಸ್ಸಾದ ಅಸಹಾಯಕ ಹೆಣ್ಣನ್ನು ಬಳಸಿಕೊಂಡವನಂತೆ ಕಾಣುತ್ತಿದ್ದೆನಾ ಅನ್ನುವ ಪ್ರಶ್ನೆಗಳಿಗೆ ಅವನಲ್ಲೇ ಉತ್ತರ ಇರಲಿಲ್ಲ. ಕಿಣಿಗೂ ತನಗೂ ವ್ಯತ್ಯಾಸವೇ ಇರುತ್ತಿರಲಿಲ್ಲ. ಕಿಣಿ ಸುಮ್ಮನೆ ಅವಳೊಂದಿಗೆ ಬದುಕುತ್ತಾ ಹೋದರು. ಅವಳಿಗೊಂದು ಕೆಲಸ ಕೊಟ್ಟಿದ್ದರು. ಕೈ ತುಂಬ ಸಂಬಳ ಕೊಡುತ್ತಿದ್ದರು. ತಾನು ಅವಳಿಗೇನೂ ಕೊಟ್ಟಿರಲಿಲ್ಲ. ಅವಳು ಏನನ್ನೂ ನಿರೀಕ್ಷಿಸಿರಲೂ ಇಲ್ಲ. ಆದರೆ ತಾನು ತುಂಬ ಪ್ರೀತಿಸಬೇಕು ಅಂದುಕೊಂಡಿದ್ದಳಲ್ಲ ಅವಳು. ಆ ಪ್ರೀತಿಯನ್ನೂ ತಾನು ಕೊಟ್ಟಿರಲಿಲ್ಲ. ಅವಳನ್ನು ಒಂದೇ ಒಂದು ಗಳಿಗೆ ಪ್ರೀತಿಸುವುದಕ್ಕೂ ತನ್ನಿಂದ ಸಾಧ್ಯವಾಗಿರಲಿಲ್ಲ. ಆ ಹೊತ್ತಲ್ಲಿ, ಅವಳ ಜೊತೆಗಿರಬೇಕು ಅನ್ನಿಸುತ್ತಿತ್ತು. ಅಲ್ಲಿ ಮಾತಿಗೆ ಜಾಗವಿರಲಿಲ್ಲ. ಎತ್ತಲೋ ನೋಡುತ್ತಾ, ಅನ್ಯಮನಸ್ಕ ಸ್ಥಿತಿಯಲ್ಲಿ ಬೆರಳುಗಳು ಮಾತಾಡುತ್ತಿದ್ದವು. ಆ ಸ್ಪರ್ಶದಲ್ಲಿ ಪ್ರೀತಿಯ ಬಣ್ಣ ಇರಲಿಲ್ಲ. ಅವಳೇನಾದರೂ ನನ್ನನ್ನು ಮದುವೆ ಆಗುತ್ತೀಯಾ ಎಂದು ಕೇಳಿ ಮುಜುಗರಕ್ಕೆ ಸಿಕ್ಕಿಸಿದ್ದರೆ ತಾನೇನು ಮಾಡುತ್ತಿದ್ದೆ. ಆದರೆ ಅಂಥ ಮುಜುಗರದ ಪ್ರಶ್ನೆಗಳನ್ನು ಅವಳು ಕೇಳಲೇ ಇಲ್ಲ. ತನ್ನನ್ನು ಒಬ್ಬ ಪರಿಣಿತ ವೈದ್ಯನಿಗೆ ಒಪ್ಪಿಸಿಕೊಂಡ ರೋಗಿಯ ಹಾಗೆ ಅವಳು ತನ್ನ ದೇಹವನ್ನು ಚಿರಾಯುವಿನ ಕೈಗಿತ್ತು ಸುಮ್ಮನಾಗುತ್ತಿದ್ದಳು.
ಅವಳ ಲಾಲಸೆಗಳು ತೀರುತ್ತಿದ್ದುವಲ್ಲ ಅಂತಲೂ ಅನೇಕ ಸಲ ಅನ್ನಿಸುತ್ತಿತ್ತು ಚಿರಾಯುವಿಗೆ. ಆದರೆ ಆಕೆಯದು ಲೋಲುಪತೆ ಅಷ್ಟೇ ಆಗಿರಲಿಲ್ಲ ಅನ್ನುವುದೂ ಅವನಿಗೆ ಗೊತ್ತಿತ್ತು. ಇಲ್ಲದೇ ಹೋಗಿದ್ದರೆ ಅವಳು ಆವತ್ತು ತನ್ನನ್ನು ಕಾಪಾಡಬೇಕಾಗಿರಲಿಲ್ಲ. ಅಷ್ಟಕ್ಕೂ ಅವಳು ಕಾಪಾಡಿದ್ದು ತನ್ನನ್ನಾ ಅಥವಾ ಅವಳನ್ನೇ ಅವಳು ಕಾಪಾಡಿಕೊಂಡಿದ್ದಳಾ.
ಸಂಬಂಧಗಳನ್ನು ಚಿರಾಯು ಹೀಗೆ ವಿಶ್ಲೇಷಿಸುತ್ತಾ ಕಂಗಾಲಾಗುತ್ತಾನೆ. ಹಾಗೆ ವಿಶ್ಲೇಷಿಸಿದಾಗೆಲ್ಲ ಅದು ಕಾಮಕೇಂದ್ರಿತ ದೃಷ್ಟಿಕೋನ ಎಂದು ವಿಮರ್ಶಕರು ಟೀಕಿಸಿದ್ದಾರೆ. ಹೆಣ್ಣಿನ ಅಂತರಂಗದ ತೊಳಲಾಟ, ಹೋರಾಟ ಮತ್ತು ತಲ್ಲಣಗಳನ್ನು ಧಿಕ್ಕರಿಸಿದ ಬರಹ ಎಂದು ವಿಮರ್ಶಕಿಯರು ಬರೆದು ಚಿರಾಯುವನ್ನು ಅನೇಕ ಸೆಮಿನಾರುಗಳಲ್ಲಿ ಟೀಕಿಸಿದ್ದಾರೆ.
ಅಂಥ ಟೀಕೆಯೂ ತನಗೆ ನೆರವಾಗಿದೆಯಲ್ಲ ಅಂದುಕೊಂಡ ಚಿರಾಯು. ಅದರಿಂದಲೇ ತನಗೆ ಓದುಗರು ಹುಟ್ಟಿಕೊಂಡದ್ದು. ತನ್ನ ಕಾದಂಬರಿಗಳಲ್ಲಿ ಬರುವ ರೋಚಕ ವಿವರಗಳಿಂದಲೇ ತನಗೊಂದು ಪ್ರಭಾವಳಿ ಬಂದದ್ದು. ಅಂಥ ಪ್ರಭಾವಳಿಯಿಂದ ಹೊರಗೆ ಬರುವುದು ಸಾಧ್ಯವಾ. ಹೊರಗೆ ಬರಬೇಕಾ. ಮತ್ತೂ ಅದನ್ನೇ ಅದನ್ನೇ ಬರೆಯುತ್ತಾ ಜಡ್ಡಾಗುತ್ತಿದ್ದೇನಾ.

Monday, April 28, 2008

14.ಹೇಗಿದ್ದರೇನಂತೆ, ನಿನ್ನನೊಲಿಯದೆ ಮಾಣೆ..

ಬರೆಯುವುದಕ್ಕೆ ಕುಳಿತಾಗ ತಾನು ಕಂಡಿರುವ ಅಷ್ಟೂ ಪಾತ್ರಗಳು ಒಂದರ ಹಿಂದೊಂದರಂತೆ ಅಟ್ಟಿಸಿಕೊಂಡು ಬರುವುದು ಚಿರಾಯು ಆರಂಭದಿಂದ ಎದುರಿಸಿಕೊಂಡು ಬಂದಿರುವ ಸಮಸ್ಯೆಗಳಲ್ಲಿ ಒಂದು. ಅವರ ಪೈಕಿ ಯಾರೊಬ್ಬರ ಬಗ್ಗೆ ಬರೆದರೂ ಸಾಕು ಎಂದು ಅವನಿಗೆ ಅನೇಕ ಸಲ ಅನ್ನಿಸಿದೆ. ಆದರೆ ಒಂದು ನೆನಪಿನ ಜೊತೆ ಇನ್ನೊಂದು ಕತೆ ತಳಕು ಹಾಕಿಕೊಂಡಿರುತ್ತಿತ್ತು. ತನ್ನನ್ನು ನಲವತ್ತನೆಯ ವಯಸ್ಸಿನಲ್ಲಿ ಆಕರ್ಷಿಸಿದ ಯಾಮಿನಿಯ ಜೊತೆಗೇ, ತಾನು ಐದನೇ ತರಗತಿಯಲ್ಲಿ ಓದುತ್ತಿದ್ದಾಗ ಹತ್ತಿರವಾದ ಜಾಯ್ಸ್ ನೆನಪಾಗುತ್ತಿದ್ದಳು. ಜಾಯ್ಸ್‌ಳ ಮತ್ತೊಂದು ರೂಪ ಯಾಮಿನಿ ಅನ್ನಿಸುತ್ತಿತ್ತು. ಅವಳೀಗ ತನ್ನ ಜೊತೆಗಿದ್ದಿದ್ದರೇ ಯಾಮಿನಿಯಷ್ಟೇ ಆಪ್ತಳಾಗುತ್ತಿದ್ದಳೋ ಏನೋ?
ಬಾಲ್ಯದಲ್ಲಿ ಕಂಡ, ಮೆಚ್ಚಿಕೊಂಡ, ಆತುಕೊಂಡ ವ್ಯಕ್ತಿಗಳನ್ನೇ ನಾವು ಜೀವನದ ಉದ್ದಕ್ಕೂ ಹುಡುಕುತ್ತಿರುತ್ತೇವೆ ಅನ್ನುತ್ತಾನೆ ಚಿರಾಯುವಿನ ಅವ್ಯಕ್ತ ಕಾದಂಬರಿಯಲ್ಲಿ ಬರುವ ಸದಾಶಿವ. ಬಾಲ್ಯದಲ್ಲಿ ಕಂಡವರು ಮತ್ತೆ ಮತ್ತೆ ಬೇರೆ ಬೇರೆ ರೂಪಗಳಲ್ಲಿ ಎದುರಾಗುತ್ತಾರೋ ಅಥವಾ ಅವರನ್ನೇ ತಾನು ಹುಡುಕಿಕೊಂಡು ಅಲೆಯುತ್ತಿದ್ದೇನಾ ಎಂದೂ ಚಿರಾಯು ಅನೇಕ ಸಲ ಯೋಚಿಸಿದ್ದಾನೆ. ಚಿಕ್ಕಂದಿನಲ್ಲಿ ಪೆಪ್ಪರಮಿಂಟು ತಂದುಕೊಟ್ಟ ಚಿಕ್ಕಮ್ಮ, ಮಳೆಯಲ್ಲಿ ನೆನೆಯುತ್ತಾ ನಿಂತಿದ್ದಾಗ ಮನೆಯೊಳಗೆ ಕರೆದುಕೊಂಡು ಹೋಗಿ ತಲೆಯೊರೆಸಿ ಕೋಡುಬಳೆ ಕೊಟ್ಟ ಭಾಗ್ಯಲಕ್ಷ್ಮಿ, ರಾತ್ರಿ ಯಕ್ಷಗಾನ ಬಯಲಾಟಕ್ಕೆ ಎತ್ತಿನ ಗಾಡಿಯಲ್ಲಿ ಕರೆದುಕೊಂಡು ಹೋಗುತ್ತಿದ್ದ ಬಾಬಣ್ಣ, ನಿನ್ನನ್ನು ಹುಗಿದು ಬಿಡುತ್ತೇನೆ ಎಂದು ಅಬ್ಬರಿಸಿದ ವಿಕ್ಟರ್‌ನ ಅಪ್ಪ ಜರ್ಮಿ- ಇವರನ್ನೆಲ್ಲ ಚಿರಾಯು ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಭೇಟಿಯಾಗುತ್ತಾ ಬಂದಿದ್ದಾನೆ. ತನ್ನ ಕಾರೋಡಿಸುವ ಶೇಷು ಥೇಟ್ ಗಾಡಿ ಬಾಬಣ್ಣ ಅನ್ನಿಸುತ್ತಾನೆ. ಜ್ವರ ಬಂದು ಮಲಗಿದಾಗ ಆರೈಕೆ ಮಾಡಿದ ಅನ್ನಪೂರ್ಣೆಯಲ್ಲಿ ಭಾಗ್ಯಲಕ್ಷ್ಮಿಯೇ ಕಾಣಿಸಿದ್ದಳು. ಜ್ವರದ ಅಮಲಲ್ಲಿ ತಾನು ಅನ್ನಪೂರ್ಣೆಯನ್ನೂ ಭಾಗ್ಯಲಕ್ಷ್ಮಿ ಎಂದು ಕರೆದಿದ್ದೆ ಎಂದು ಅನ್ನಪೂರ್ಣೆ ಹೇಳಿದ್ದು ನೆನಪಾಗುತ್ತದೆ. ಯಾರೋ ಅದು ಭಾಗ್ಯಲಕ್ಷ್ಮಿ. ನಾನು ಕೇಳೇ ಇಲ್ಲವಲ್ಲೋ’ ಅಂದಿದ್ದಳು ಅನ್ನಪೂರ್ಣೆ. ಭಾಗ್ಯಲಕ್ಷ್ಮಿ ಯಾರೆನ್ನುವುದು ಚಿರಾಯುವಿಗೂ ಥಟ್ಟನೆ ಹೊಳೆದಿರಲಿಲ್ಲ. ಹೊಳೆದಾಗ ಆಕೆ ಸುಮಾರು ಮೂವತ್ತು ವರುಷಗಳ ಕಾಲ ತನ್ನೊಳಗೇ ಅವಿತು ಕುಳಿತಿದ್ದಳಲ್ಲ ಅಂತ ಅಚ್ಚರಿಯಾಗಿತ್ತು ಅವನಿಗೆ.
ತನ್ನ ಕಾದಂಬರಿಗಳಲ್ಲಿ ಸಣ್ಣ ಕತೆಯಲ್ಲಿ, ತಮಾಷೆಗೆಂದು ಪ್ರಯೋಗಕ್ಕೆಂದು ಬರೆದ ನಾಟಕದಲ್ಲಿ, ಆಗೀಗ ಬರೆದ ಕವಿತೆಗಳಲ್ಲಿ ಕಾಣಿಸಿಕೊಳ್ಳುವವರು ತಾನು ಎದುರಾದವರೇ ಅನ್ನುವುದು ಚಿರಾಯುವಿಗೆ ಸ್ಪಷ್ಟವಾದದ್ದು ಮಹಾಪ್ರಸ್ಥಾನ’ ಬರೆಯುವ ಹೊತ್ತಿಗೆ. ಆದರೆ ಅವರೆಲ್ಲ ಯಥಾವತ್ತಾಗಿ ತನ್ನ ಕಾದಂಬರಿಯೊಳಗೆ ಪ್ರವೇಶ ಪಡೆದಿಲ್ಲ ಎನ್ನುವುದು ಚಿರಾಯುವಿಗೆ ಗೊತ್ತಿತ್ತು. ಅವರನ್ನು ತನ್ನ ಉದ್ದೇಶಗಳಿಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದೇನೆ ಎನ್ನಿಸತೊಡಗಿತ್ತು. ಅದು ಸ್ಪಷ್ಟವಾದದ್ದು ನಿರ್ಮಲ ಬಂದು ರಾದ್ಧಾಂತ ಮಾಡಿದಾಗಲೇ.
ನಿರ್ಮಲನಿಗೂ ಚಿರಾಯುವಿಗೂ ಎಂಟು ವರುಷ ವ್ಯತ್ಯಾಸ. ನಿರ್ಮಲೆ ಅವನಿಗಿಂತ ದೊಡ್ಡವಳು. ಚಿರಾಯು ಕಾಲೇಜು ಮುಗಿಸಿ ಕೆಲಸ ಹುಡುಕುತ್ತಿದ್ದ. ಆರಂಭದ ದಿನದಲ್ಲಿ ಸಿಕ್ಕಿದ್ದು ಗುಮಾಸ್ತನ ಕೆಲಸ. ಆ ಸಂಸ್ಥೆಯಲ್ಲೇ ತುಂಬ ವರುಷಗಳಿಂದ ಕೆಲಸಕ್ಕಿದ್ದವಳು ನಿರ್ಮಲೆ.
ಅಲ್ಲಿ ಕೆಲಸ ಮಾಡುತ್ತಿದ್ದ ದಿನಗಳಲ್ಲೇ ಅವಳು ಹತ್ತಿರವಾದದ್ದು. ಅವಳ ಕತೆ ಗೊತ್ತಾದದ್ದು. ಅವಳು ಬಡ ಕುಟುಂಬದ ಹುಡುಗಿ. ಗೋವಾದಿಂದ ಮಂಗಳೂರಿಗೆ ಬಂದಿದ್ದಳು. ಅವಳ ಸಂಬಳವನ್ನು ಸಂಸ್ಥೆಯ ಯಜಮಾನ ವಾಸುದೇವ ಕಿಣಿ ಪ್ರತಿತಿಂಗಳೂ ಅವಳ ಮನೆಗೆ ಕಳುಹಿಸಿಬಿಡುತ್ತಿದ್ದ. ಅವಳ ವಾಸಕ್ಕೊಂದು ಮನೆಯನ್ನೂ ಗೊತ್ತು ಮಾಡಿದ್ದ. ಆಗಲೇ ವಾಸುದೇವನಿಗೆ ಅರುವತ್ತೋ ಅರುವತ್ತೆರಡೋ.
ಕ್ರಮೇಣ ವಾಸುದೇವನಿಗೂ ನಿರ್ಮಲೆಗೂ ಇರುವ ಸಂಬಂಧದ ಸ್ವರೂಪ ಚಿರಾಯುವಿಗೂ ಅರ್ಥವಾಯಿತು. ಆಕೆಗೆ ಎಲ್ಲರೂ ಅಂಜುವುದೇಕೆ ಅನ್ನುವುದೂ ತಿಳಿಯಿತು. ಅದರ ಬಗ್ಗೆ ಕೀಳಾಗಿ ಮಾತಾಡುವವರೂ ಸಿಕ್ಕಿದರು. ಅವಳೆದುರು ಬಾಲಮುದುರಿಕೊಂಡಿದ್ದು ಅವಳು ಅತ್ತ ಹೋದೊಡನೆ ಟೀಕಿಸುತ್ತಿದ್ದವರ ನಡುವೆ ಅವಳ ಬಗ್ಗೆ ಒಂದು ಕುತೂಹಲ ಉಳಿಸಿಕೊಂಡೇ ಇದ್ದ ಚಿರಾಯು.
ಒಂದು ವಿಚಿತ್ರ ಸನ್ನಿವೇಶದಲ್ಲಿ ಚಿರಾಯು ಅವಳಿಗೆ ಹತ್ತಿರಾಗಿಬಿಟ್ಟ. ಒಂದು ಮಧ್ಯಾಹ್ನ ಚಿರಾಯುವಿಗೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಶುರುವಾಯಿತು. ಮಧ್ಯಾಹ್ನ ಊಟದ ಹೊತ್ತಲ್ಲಿ ಯಾರೂ ಕಛೇರಿಯಲ್ಲಿ ಇರಕೂಡದು ಅನ್ನುವುದು ಆ ಆಫೀಸಿನ ನಿಯಮ. ಒಂದು ಗಂಟೆಯಿಂದ ಎರಡು ಗಂಟೆ ಆಫೀಸಿಗೆ ವಿರಾಮ. ಆವತ್ತು ನೋವಿನಿಂದ ಒಂದು ಹೆಜ್ಜೆಯನ್ನೂ ಇಡಲಾರದೆ ಆಫೀಸಿನಲ್ಲಿ ನರಳುತ್ತಾ ಬಿದ್ದಿದ್ದ ಚಿರಾಯುವಿನ ಬಳಿಗೆ ಬಂದಿದ್ದಳು ನಿರ್ಮಲೆ. ಹೊಟ್ಟೆನೋವಿನಿಂದ ನರಳುವವನನ್ನು ಸಂತೈಸುವ ಮಾತಾಡಿದ್ದಳು. ತಾನೇ ಡಾಕ್ಟರಿಗೆ ಫೋನ್ ಮಾಡಿ ಕರೆಸಿದ್ದಳು. ಚಿರಾಯುವಿಗೆ ಸರ್ಪಸುತ್ತು ಆಗಿತ್ತು. ಡಾಕ್ಟರ್ ಔಷಧಿ ಕೊಟ್ಟು ಒಂದು ತಿಂಗಳು ಹೊಟೆಲಿನ ಊಟ ತಿನ್ನಬಾರದು ಎಂದು ತಾಕೀತು ಮಾಡಿದ್ದರು.
ಆ ಒಂದು ತಿಂಗಳು ತನ್ನ ಮನೆಯಿಂದ ಊಟ ತಂದುಕೊಟ್ಟವಳು ನಿರ್ಮಲೆ. ಅವಳಿಗೆ ಚಿರಾಯು ಹತ್ತಿರವಾದದ್ದೂ ಆಗಲೇ. ಅವಳ ಮಡಿಲಲ್ಲಿ ಮಲಗಿಕೊಂಡು, ಅವಳ ಹೊಟ್ಟೆಗೆ ಮುಖ ಒತ್ತಿಕೊಂಡು, ಅವಳ ಎದೆಗೊರಗಿಕೊಂಡು ಚಿರಾಯು ಆರಂಭದಲ್ಲಿ ಸುಮ್ಮನೆ ತುಂಬಾ ಹೊತ್ತು ಕೂತಿರುತ್ತಿದ್ದ. ಕ್ರಮೇಣ ಸ್ಪರ್ಶಕ್ಕೆ ಹೊಸ ಅರ್ಥ ಸಿಕ್ಕಿತು. ಹುಡುಕಾಟ ಶುರುವಾಯಿತು. ಸರ್ಪಸುತ್ತಿನ ಹಾಗೆ ಅವಳೂ ಚಿರಾಯುವನ್ನು ಮೈತುಂಬ ಮೂಡಿದಳು.
ಅಂಥ ಒಂದು ಸುಡು ಮಧ್ಯಾಹ್ನವೇ ಚಿರಾಯು ಸಿಕ್ಕಿಬೀಳುವ ಸ್ಥಿತಿ ತಲುಪಿದ್ದು. ಚಿರಾಯು ಮತ್ತು ನಿರ್ಮಲೆ ಆಫೀಸಿನ ಬಾಗಿಲು ಹಾಕಿಕೊಂಡು ಮೈಮರೆತಿರುವ ಹೊತ್ತಲ್ಲೇ ವಾಸುದೇವ ಕಿಣಿ ಬಂದುಬಿಟ್ಟಿದ್ದರು. ಅವರು ಸಾಮಾನ್ಯವಾಗಿ ಹಿಂಬಾಗಿಲಿನಿಂದ ಬಂದು ತಮ್ಮ ಪೀಠದಲ್ಲಿ ಆಸೀನರಾಗಿ ಒಂದೆರಡು ಗೇರುಬೀಜ ತಿಂದು, ಬಾದಾಮಿ ಹಾಲು ಕುಡಿದ ನಂತರ ಆಫೀಸು ತೆರೆದುಕೊಳ್ಳುತ್ತಿತ್ತು. ಆವತ್ತು ಅವರು ಹೊತ್ತಿಗೆ ಮುಂಚೆಯೇ ಬಂದು ಆಫೀಸಿನ ಹಿಂಬಾಗಿಲು ಬಡಿಯುವ ಹೊತ್ತಿಗೆ ಗಾಬರಿ ಬಿದ್ದದ್ದು ಚಿರಾಯು. ಹಾಗೆ ನೋಡಿದ್ದರೆ ಭಯಬೀಳಬೇಕಾಗಿದ್ದವಳು ನಿರ್ಮಲೆ. ಅವಳಿಗೆ ಆ ಉದ್ಯೋಗ ಅನಿವಾರ್ಯವಾಗಿತ್ತು. ಅವರ ಕೈಗೆ ಸಿಕ್ಕಿಬಿದ್ದಿದ್ದರೆ ಉದ್ಯೋಗ ಕಳಕೊಳ್ಳುವ ಭೀತಿಯಿತ್ತು.
ಆದರೆ ಚಿರಾಯು ಮಾತ್ರ ಥರ ಥರ ನಡುಗಿದ್ದ. ಅವಳು ಏನೂ ಆಗದವಳ ಹಾಗೆ, ರವಕೆಯ ಗುಂಡಿ ಹಾಕಿಕೊಂಡು ತಲೆಬಾಚಿಕೊಂಡು ಹೋಗಿ ಬಾಗಿಲು ತೆರೆಯಲು ಹೋದಳು. ಅವಳನ್ನು ಬಿಗಿಯಾಗಿ ಹಿಡಿದುಕೊಂಡು ಬೇಡ ಅಂತ ತಲೆಯಾಡಿಸಿದ್ದ ಚಿರಾಯು. ಅವಳು ಥಟ್ಟನೆ ಪಕ್ಕದ್ದ ಬ್ಲೇಡು ಕೈಗೆತ್ತಿಕೊಂಡು ಚಿರಾಯುವಿನ ಮುಂಗೈ ಸೀಳಿದ್ದಳು. ಅದಕ್ಕೆ ತನ್ನ ಕರ್ಚೀಫು ಸುತ್ತಿ ಹೋಗಿ ಬಾಗಿಲು ತೆರೆದಿದ್ದಳು.
ವಾಸುದೇವ ಕಿಣಿಯವರು ಬರುವ ಹೊತ್ತಿಗೆ ಚಿರಾಯು ನೋಯುತ್ತಿರುವ ಕೈಯನ್ನು ಒತ್ತಿ ಹಿಡಿದುಕೊಂಡು ಕೂತಿದ್ದ. ರಕ್ತ ಇನ್ನೂ ಸುರಿಯುತ್ತಲೇ ಇತ್ತು. ಕಿಣಿಯವರು ಅವನನ್ನು ಅಕ್ಕರೆಯಿಂದ ಮಾತಾಡಿಸಿ, ನಿರ್ಮಲೆಯ ಜೊತೆಗೇ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಚಿರಾಯು ಆ ಗಾಯದ ಗುರುತು ಶಾಶ್ವತವಾಗಿರುವ ಮುಂಗೈ ನೋಡಿಕೊಂಡ. ನಿರ್ಮಲೆ ತನ್ನ ಕಾದಂಬರಿಯಲ್ಲಿ ವಾಸುದೇವ ಕಿಣಿಯನ್ನು ತನ್ನ ಯೌವನದ ಬಲೆಯೊಳಗೆ ಬಂಧಿಸಿರುವ ಹೆಣ್ಣಾಗಿ ಚಿತ್ರಿತವಾಗಿದ್ದಳು. ಅವಳು ಅದೆಲ್ಲಿ ಓದಿದಳೋ, ಅದು ಹೇಗೆ ತನ್ನನ್ನು ಹುಡುಕಿದಳೋ, ನೇರವಾಗಿ ಚಿರಾಯುವಿನ ಮನೆಗೆ ಬಂದು ನಾನು ಹಾಗಿದ್ದೆನಾ?’ ಎಂದು ನೇರವಾಗಿ ಕೇಳಿದ್ದಳು. ಹಾಗೆ ಕೇಳಿಸಿಕೊಳ್ಳುವ ಹೊತ್ತಿಗೆ ಮನೆಯಲ್ಲಿ ಸ್ಮಿತಾಳೂ ಇದ್ದಳು.

Saturday, April 26, 2008

13. ತುಂಗೆಯ ತೆನೆ ಬಳುಕಿನಲ್ಲಿ..

ಆವತ್ತು ರಾತ್ರಿ ಅಕಾಲ ಮಳೆ ಸುರಿಯಿತು. ಜೊತೆಗೆ ತಂದಿದ್ದ ಮೂರು ಪೆಗ್ ವಿಸ್ಕಿಯ ಜೊತೆ ಮಳೆಯ ಅಬ್ಬರಕ್ಕೆ ತನ್ನನ್ನು ಒಪ್ಪಿಸಿಕೊಂಡು ಬಿಟ್ಟ ಚಿರಾಯು. ಚಿರಾಯುವಿಗೆ ಜ್ಞಾನಪೀಠ ತಂದುಕೊಟ್ಟ ಕಾದಂಬರಿಯ ಹೆಸರು ಮೇಘ ಮಲ್ಹಾರ’. ಆ ಕಾದಂಬರಿ ಮಳೆಯಲ್ಲೇ ಶುರುವಾಗುತ್ತದೆ, ಮಳೆಯಲ್ಲೇ ಕೊನೆಯಾಗುತ್ತದೆ. ಮಳೆಯನ್ನು ಕಾದಂಬರಿಯ ನಾಯಕಿ ತುಂಗಮ್ಮನ ವಿಷಾದವನ್ನು ಹೇಳುವುದಕ್ಕೆ ಬಳಸಿಕೊಂಡಿರುವುದು ವಿಶೇಷ ಎಂದು ವಿಮರ್ಶಕರು ಮೆಚ್ಚಿಕೊಂಡಿದ್ದರು.
ತುಂಗಮ್ಮನನ್ನು ನೆನಪಿಸಿಕೊಳ್ಳಲು ಯತ್ನಿಸಿದ ಚಿರಾಯು. ಆಕೆಯನ್ನು ಚಿರಾಯು ಮೊದಲ ಸಲ ನೋಡಿದ್ದು ಅಪ್ಪನ ಜೊತೆಗೆ. ಆಕೆಯ ಬಗ್ಗೆ ಅಪ್ಪನಿಗೂ ಅತೀವ ಕುತೂಹಲ ಇದ್ದಂತಿತ್ತು. ಅಮ್ಮ ಅನೇಕ ಸಾರಿ ಅಪ್ಪನ ಹತ್ತಿರ ತುಂಗೆಯ ಬಗ್ಗೆ ಸಿಟ್ಟಿನಿಂದ ಮಾತಾಡುವುದನ್ನು ಕೇಳಿಸಿಕೊಂಡಿದ್ದ. ಆದರೆ ತುಂಗೆ ಮನೆಗೆ ಬಂದಾಗ ಅಮ್ಮ ಅವರನ್ನು ಗೌರವಯುತವಾಗಿಯೇ ನಡೆಸಿಕೊಂಡಿದ್ದಳು. ಅಪ್ಪ ಅವಳ ಮುಂದೆ ಅತೀವ ಸಜ್ಜನನಂತೆ ಓಡಾಡಿದ್ದರು.
ತುಂಗೆಗೆ ಮದುವೆ ಆಗಿರಲಿಲ್ಲ. ಮದುವೆ ಎಂಬ ವ್ಯವಸ್ಥೆಯನ್ನು ಅವರು ಖಂಡಿಸಿ ಮಾತಾಡಿದ್ದನ್ನು ಚಿರಾಯು ಅವರಿವರಿಂದ ಕೇಳಿಸಿಕೊಂಡಿದ್ದ. ಆಕೆಯನ್ನು ಬಸರೂರು ಮಠದ ಸ್ವಾಮೀಜಿ ಶಿಷ್ಯೆಯನ್ನಾಗಿ ಸ್ವೀಕರಿಸಿದ್ದರು. ಅವರಿಬ್ಬರ ಮಧ್ಯೆ ಗುರು-ಶಿಷ್ಯೆಯರ ಸಂಬಂಧವಷ್ಟೇ ಇರಲಿಲ್ಲ ಅಂತ ಜನ ಮಾತಾಡಿಕೊಳ್ಳುತ್ತಿದ್ದರು. ಬಸರೂರಿನ ಸ್ವಾಮಿಗಳನ್ನು ಬುಟ್ಟಿಗೆ ಹಾಕಿಕೊಂಡವಳು ಎಂದೆಲ್ಲ ಸುತ್ತೂರಿನಲ್ಲಿ ಸುದ್ದಿಯಾಗಿತ್ತು.
ಆದರೆ ತುಂಗೆಯನ್ನು ನೋಡಿದಾಕ್ಷಣ ಚಿರಾಯುವಿಗೆ ಹಾಗೇನೂ ಅನ್ನಿಸಿರಲಿಲ್ಲ. ಅವರ ಕಣ್ಣುಗಳಲ್ಲಿ ಎಂದೂ ಕಾಣದ ಯಾರಲ್ಲೂ ಕಾಣದ ಅಭಯವನ್ನು ಚಿರಾಯು ಗುರುತಿಸಿದ. ಅವರೊಂದಿಗೆ ಯಾರೇ ಇದ್ದರೂ ತುಂಬ ನಿರ್ಭಯದಿಂದ ಇರಬಹುದು ಅನ್ನಿಸಿತ್ತು. ಆಮೇಲಾಮೇಲೆ ತುಂಬ ಭಯವಾದಾಗ, ಮಳೆಗಾಲದಲ್ಲಿ ಎದೆ ಝಲ್ಲನಿಸುವಂತೆ ಸಿಡಿಲು ಆರ್ಭಟಿಸಿದಾಗ, ಕಟ್ಟಿರುಳಲ್ಲಿ ಒಬ್ಬನೇ ಗದ್ದೆ ಹಾದಿಯಲ್ಲಿ ನಡೆದುಕೊಂಡು ಬರುತ್ತಿದ್ದಾಗ ತುಂಗೆ ನೆನಪಾಗುತ್ತಿದ್ದರು. ಅವರ ಅಭಯ ಹಸ್ತ ತನ್ನನ್ನು ಸದಾ ಕಾಪಾಡುತ್ತದೆ ಅನ್ನಿಸುತ್ತಿತ್ತು. ಎಲ್ಲ ಭಯವನ್ನು ಹೊಡೆದೋಡಿಸುವ ಶಕ್ತಿ ಅವರಿಗಷ್ಟೇ ಇದೆ ಅನ್ನಿಸುತ್ತಿತ್ತು.
ಆಮೇಲೆ ಅವರನ್ನು ಚಿರಾಯು ಒಂದೆರಡು ಸಾರಿ ನೋಡಿದ್ದ ಅಷ್ಟೇ. ಅವರ ಜೊತೆಗೆ ಮಾತಾಡಬೇಕು ಅಂತಾಗಲೀ, ಅವರ ಬಗ್ಗೆ ತಿಳಿದುಕೊಳ್ಳಬೇಕು ಎಂದಾಗಲೀ ಅವನಿಗೆ ಅನ್ನಿಸಿರಲೇ ಇಲ್ಲ. ಅವರ ಬಗ್ಗೆ ಯಾರಾದರೂ ಕೀಳಾಗಿ ಮಾತಾಡಿದಾಗ ಮಾತ್ರ ಚಿರಾಯುವಿಗೆ ಸಿಟ್ಟು ಬರುತ್ತಿತ್ತು. ಅವರು ಸರೀಕರಾಗಿದ್ದರೆ ರೇಗುತ್ತಿದ್ದ. ಹಿರಿಯರಾಗಿದ್ದರೆ ಅಲ್ಲಿಂದ ಎದ್ದು ಹೋಗುತ್ತಿದ್ದ.
ಆಗಲೂ ಚಿರಾಯುವಿಗೆ ತುಂಗೆ ತನ್ನ ಕಾದಂಬರಿಯ ಪಾತ್ರವಾಗಬಹುದು ಅನ್ನಿಸಿರಲಿಲ್ಲ. ಚಿರಾಯು ಲಂಡನ್ನಿಗೆ ಹೋಗಿ, ಅಲ್ಲಿಂದ ಜರ್ಮನಿಗೆ ಹೋಗಿ ಬೆಂಗಳೂರಿಗೆ ಮರಳಿ ಸಾಹಿತ್ಯದಲ್ಲಿ ದೊಡ್ಡ ಹೆಸರಾಗಿ ಪತ್ರಿಕೆಗಳಲ್ಲಿ ಟೀವಿಯಲ್ಲಿ ಕಾಣಿಸತೊಡಗಿದ ನಂತರದ ದಿನಗಳಲ್ಲಿ ಬಸರೂರು ಮಠಕ್ಕೆ ಹೋಗಿದ್ದ. ಆಗ ಅವನಿಗೆ ಮತ್ತೆ ತುಂಗೆ ನೆನಪಾಗಿದ್ದರು. ತನ್ನನ್ನು ಜೊತೆಗೆ ಕರೆದೊಯ್ದ ಮೊಕ್ತೇಸರ ಶಂಕರನಾರಾಯಣ ನಾವಡರ ಹತ್ತಿರ ತುಂಗೆಯ ಬಗ್ಗೆ ಕೇಳಿದ್ದ ಚಿರಾಯು. ಅವರು ಅತ್ಯಂತ ತಿರಸ್ಕಾರದಿಂದ ಹೇಳಿದ ಮಾತು ಚಿರಾಯುವಿಗೆ ಇನ್ನೂ ನೆನಪಿದೆ;
ಮಠದ ಮಾನ ತೆಗೆದಳು ಮಾಟಗಾತಿ. ಬಸರೂರು ಸ್ವಾಮೀಜಿಗಳನ್ನು ಕೊನೆಯ ದಿನದ ತನಕವೂ ಹತೋಟಿಯಲ್ಲಿಟ್ಟುಕೊಂಡಿದ್ದಳು. ಮಠದ ಬೀಗದ ಕೈಯನ್ನೇ ಅವಳ ಕೈಗೆ ಕೊಟ್ಟುಬಿಟ್ಟಿದ್ದರು ಸ್ವಾಮೀಜಿ. ಯಾವಾಗ ಅವಳ ಆಡಳಿತ ಶುರುವಾಗಿತೋ, ಭಕ್ತಾದಿಗಳೆಲ್ಲ ಮಠಕ್ಕೆ ಕಾಲಿಡುವುದನ್ನೂ ಬಿಟ್ಟುಬಿಟ್ಟರು. ದಿನಾ ಅನ್ನಸಂತರ್ಪಣೆ ನಡೆಯುತ್ತಿದ್ದದ್ದು ನಿಂತೇ ಹೋಯ್ತು. ಸ್ವಾಮೀಜಿಗಳು ಕಾಲವಶರಾದಾಗ ಐವತ್ತು ಜನ ಇರಲಿಲ್ಲ ಗೊತ್ತುಂಟಾ? ಆವತ್ತು ಬಿದ್ದುಹೋದ ಮರ್ಯಾದೆಯನ್ನು ಮರಳಿ ತರೋದಕ್ಕೆ ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಇವತ್ತಿಗೂ ಜನ ಅದರ ಬಗ್ಗೆ ಮಾತಾಡಿಕೊಳ್ತಾರೆ. ನಾನು ಉತ್ತರ ಭಾರತ ಪ್ರವಾಸ ಹೋದಾಗ ಬಸರೂರು ಮಠ ಅಂದಾಕ್ಷಣ ಒಂದಷ್ಟು ಮಂದಿ ಮುಸಿಮುಸಿ ನಕ್ಕಿದ್ದರು’.
ತುಂಗಮ್ಮ ಈಗೆಲ್ಲಿದ್ದಾರೆ’ ಕೇಳಿದ್ದ ಚಿರಾಯು.
ಮಾಡಿದ ಪಾಪ ತೊಳೀತಾ ಬಿದ್ದಿದ್ದಾಳೆ ನೋಡಿ’ ಅಂತ ನಾವಡರು ಬೊಟ್ಟು ಮಾಡಿ ತೋರಿಸಿದ್ದ ತುಂಗಮ್ಮನ ಮನೆಗೆ ಹೋಗಿ ಬಂದಿದ್ದ ಚಿರಾಯು. ಅಲ್ಲಿಗೆ ಹೋಗಿ ಅವರನ್ನು ಆ ಸ್ಥಿತಿಯಲ್ಲಿ ನೋಡಬಾರದಿತ್ತು ಅನ್ನಿಸಿತ್ತು. ತುಂಗಮ್ಮ ಒಂಬತ್ತು ತಿಂಗಳಿಂದ ಹಾಸಿಗೆ ಹಿಡಿದಿದ್ದರು. ಬೆನ್ನು ಹುಣ್ಣಾಗಿ ಎದ್ದು ಕೂಡಿಸುವವರಿಲ್ಲದೆ, ಸ್ನಾನ ಮಾಡಿಸುವವರಿಲ್ಲದೆ ಇಡೀ ಮನೆ ನಾರುತ್ತಿತ್ತು. ಮಠದಿಂದ ಲಪಟಾಯಿಸಿದ ಆಸ್ತಿಯನ್ನೆಲ್ಲ ಆಕೆ ಎಲ್ಲೋ ಕೂಡಿಟ್ಟಿದ್ದಾಳೆ ಅನ್ನುವ ಗುಮಾನಿಯಿಂದ ನರಸಿಂಹ ಭಟ್ಟರ ಕುಟುಂಬ ತುಂಗಮ್ಮನ ಆರೈಕೆ ಮಾಡುತ್ತಾ ಬಂದಿತ್ತಂತೆ. ಆದರೆ ತುಂಗಮ್ಮ ಆ ಸಂಪತ್ತನ್ನೂ ಬಂಗಾರವನ್ನೂ ಎಲ್ಲಿ ಬಚ್ಚಿಟ್ಟಿದ್ದೇನೆ ಅಂತ ಬಾಯಿಬಿಟ್ಟಿರಲಿಲ್ಲ. ಚಿರಾಯು ಹೋಗುವ ಹೊತ್ತಿಗೆ ಅವರೂ ತುಂಗಮ್ಮನ ಕೈ ಬಿಟ್ಟಿದ್ದರು.
ಆ ಸ್ಥಿತಿಯಲ್ಲಿದ್ದ ತುಂಗಮ್ಮನನ್ನು ಚಿರಾಯು ಆಸ್ಪತ್ರೆಗೆ ಸೇರಿಸಿದ್ದ. ಅವರ ಅಷ್ಟೂ ಖರ್ಚನ್ನು ತಾನೇ ನೋಡಿಕೊಳ್ಳುವುದಾಗಿ ಹೇಳಿದ್ದ. ಅಷ್ಟು ಹೊತ್ತಿಗಾಗಲೇ ರೋಗ ಉಲ್ಬಣಿಸಿದ್ದರಿಂದ ಆಸ್ಪತ್ರೆ ಸೇರಿದ ನಾಲ್ಕೇ ದಿನಕ್ಕೆ ತುಂಗಮ್ಮ ತೀರಿಕೊಂಡಿದ್ದಳು. ಆದರೆ, ಕೊನೆಯ ದಿನಗಳಲ್ಲಿ ಏನನ್ನೋ ಹುಡುಕಾಡುವಂತೆ ಅತ್ತಿತ್ತ ಚಲಿಸುತ್ತಿದ್ದ ಅವಳ ಕಣ್ಣುಗಳನ್ನು ಆ ನೋವಿನಲ್ಲೂ ಬದುಕುವ ಆಸೆಯನ್ನು ಹಿಡಿದಿಟ್ಟಂತಿದ್ದ ಅವಳ ದೇಹದ ಮೊಂಡು ಹಠವನ್ನೂ ಚಿರಾಯುವಿಗೆ ಮರೆಯುವುದಕ್ಕಾಗಿರಲಿಲ್ಲ.
ತುಂಗೆಯನ್ನು ಸುಡುವುದಕ್ಕೆ ವ್ಯವಸ್ಥೆ ಮಾಡಿಸಿದ ದಿನ ಧಾರಾಕಾರ ಮಳೆಯಾಗಿತ್ತು. ಮೂರು ದಿನವಾದರೂ ಮಳೆ ನಿಲ್ಲಲಿಲ್ಲ. ಅರ್ಧಂಬರ್ಧ ಸುಟ್ಟಿದ್ದ ಶವವನ್ನು ಕೊನೆಗೆ ಹೂಳಬೇಕಾಗಿ ಬಂತು. ಅವಳು ಹೀಗೆ ಸಾಯುತ್ತಾಳೆ ಅಂತ ನಾನು ಆವತ್ತೇ ಹೇಳಿದ್ದೆ ಎಂದ ನಾವಡರ ದನಿಯಲ್ಲಿದ್ದ ರೋಷವನ್ನು ಚಿರಾಯುವಿಗೆ ತಡೆದುಕೊಳ್ಳುವುದಕ್ಕೆ ಸಾಧ್ಯವೇ ಆಗಿರಲಿಲ್ಲ.
ಅದೇ ರಾತ್ರಿ ಚಿರಾಯು ಬರೆಯುವುದಕ್ಕೆ ಆರಂಭಿಸಿದ ಕಾದಂಬರಿ ಅದು. ಅದರಲ್ಲಿ ನಾವಡರು ಖಳನಾಯಕನಾಗಿ ಚಿತ್ರಿತವಾಗಿದ್ದರು. ಬಸರೂರು ಸ್ವಾಮಿಗಳ ದೈವ ಸಾಕ್ಷಾತ್ಕಾರಕ್ಕೆ ಸೊಗಸಾಗಿ ಹಾಡಬಲ್ಲ ತುಂಗೆ ಸಾಥಿಯಾಗಿದ್ದಳು. ಆಕೆ ಹಾಡುವುದನ್ನು ನಿಲ್ಲಿಸಿದ ಕ್ಷಣ ಬಸರೂರು ಸ್ವಾಮಿಗಳು ಕಣ್ಮುಚ್ಚುತ್ತಾರೆ. ಆಕೆಯನ್ನು ತನ್ನ ಹಾಡಿನಿಂದ ಅವರನ್ನು ಮತ್ತೆ ಬದುಕಿಸುತ್ತೇನೆ ಎಂಬಂತೆ ಸುರಿವ ಮಳೆಯಲ್ಲಿ ಹಾಡುತ್ತಾಳೆ.
ಚಿರಾಯುವಿಗೆ ತಾನು ಇನ್ನೇನೇನು ಬರೆದಿದ್ದೆ ಅನ್ನುವುದು ನೆನಪಾಗಲಿಲ್ಲ. ಅದನ್ನು ಅವನು ಮತ್ತೊಮ್ಮೆ ಓದುವುದಕ್ಕೂ ಹೋಗಿರಲಿಲ್ಲ. ಓದುವ ಧೈರ್ಯವೂ ಇರಲಿಲ್ಲ. ಆದರೆ ಕಾದಂಬರಿ ಪ್ರಕಟವಾದ ನಂತರ ನಾವಡರು ಹೀಗೆ ಮಾಡಬಾರದಿತ್ತು ನೀವು ಎಂದು ಹೇಳಿಹೋಗಿದ್ದರು. ಆ ಮಾತಲ್ಲಿ ರೋಷವಿರಲಿಲ್ಲ.
ನೆಲಬಿರಿಯುವಂತೆ ಮತ್ತೊಂದು ಸಿಡಿಲು ಅಪ್ಪಳಿಸಿತು. ಚಿರಾಯುವಿಗೆ ಅರೆಕ್ಷಣ ಭಯವಾಯಿತು.ಶೇಷು ಕುಳಿತಿದ್ದವನು ಬೆಚ್ಚಿ ಎದ್ದು ನಿಂತ. ತುಂಗೆಯ ಕಣ್ಣುಗಳಲ್ಲಿ ಕಂಡ ಅಭಯ ನೆನಪಾಯಿತು.

12. ಮತ್ತೆ ಮಳೆ ಹೊಯ್ಯುತಿದೆ

ಸುಳ್ಳದ ಮನೆಯೊಳಗೆ ಕಾಲಿಡುತ್ತಿದ್ದಂತೆ ಆವತ್ತು ರಾತ್ರಿ ಒಂದೋ ಕಾರಲ್ಲಿ ಮಲಗಬೇಕು ಇಲ್ಲದೇ ಹೋದರೆ ಸುಬ್ಬಣ್ಣನ ಮನೆಗೆ ಹೋಗಬೇಕು ಅನ್ನುವುದು ಚಿರಾಯುವಿಗೆ ಖಚಿತವಾಯ್ತು. ಮತ್ತೆ ಸುಳ್ಯ ಪೇಟೆಗೆ ಹೋಗಿ ಅಲ್ಲೊಂದು ಹೊಟೆಲು ಹುಡುಕಿ ಅಲ್ಲಿ ರೂಮು ಮಾಡುವ ಉತ್ಸಾಹ ಇರಲಿಲ್ಲ. ಅಲ್ಲಿ ರೂಮು ಮಾಡಿದರೂ ನೆಮ್ಮದಿಯಾಗಿರುತ್ತೇನೆ ಅನ್ನುವ ನಂಬಿಕೆಯೂ ಇರಲಿಲ್ಲ. ಚಿರಾಯು ಬಂದ ಸುದ್ದಿ ಹಬ್ಬದೇ ಇರುವುದೂ ಇಲ್ಲ. ಗೆಳೆಯರು ಹುಡುಕಿಕೊಂಡು ಬರುತ್ತಾರೆ. ಮತ್ತೆ ರಾತ್ರಿ ಸಮಾರಾಧನೆ ನಡೆಯುತ್ತದೆ. ಮತ್ತೆ ಬಾಲ್ಯದ ದಿನಗಳಿಗೆ ಮರಳುತ್ತೇವೆ. ಪಯಸ್ವಿನಿ ನದಿ ಹಿಮ್ಮುಖವಾಗಿ ಹರಿಯತೊಡಗುತ್ತದೆ.
ಚಿರಾಯುವಿಗೆ ಅದು ಬೇಕಿರಲಿಲ್ಲ. ಹಾಗಂತ ಸುಬ್ಬಣ್ಣನ ಮನೆಗೆ ಹೋಗುವುದೂ ಕೂಡ ಅಷ್ಟು ಒಳ್ಳೆಯ ನಿರ್ಧಾರದಂತೆ ಕಾಣಲಿಲ್ಲ. ಸುಬ್ಬಣ್ಣನ ಹೇಳಿ ಕೇಳಿ ಕವಿ, ಅದಕ್ಕಿಂತ ಹೆಚ್ಚಾಗಿ ಏಕಾಕಿ. ತನ್ನ ಏಕಾಂತವನ್ನು ಭಂಗಪಡಿಸುವ ಕ್ಷಣಗಳಿಗೆ ಕಾಯುತ್ತಾ, ಮಾತಿಗೆ ಹಾತೊರೆಯುತ್ತಿರುವ ಕವಿಗಿಂತ ಅಪಾಯಕಾರಿ ಜೀವಿಗಳಿಲ್ಲ ಅನ್ನುವುದನ್ನು ಚಿರಾಯು ತನ್ನ ಅಷ್ಟೂ ವರ್ಷಗಳ ಅನುಭವದಿಂದ ಕಂಡುಕೊಂಡಿದ್ದ.
ಆ ಅನುಭವ ಅವನಿಗೆ ಮೊದಲು ಆದದ್ದು ಕವಿಗಳ ಹತ್ತಿರ. ನಂತರ ನಟನೊಬ್ಬನ ಹತ್ತಿರ. ತನ್ನ ಯೌವನದ ದಿನಗಳಲ್ಲಿ ಯಾರನ್ನೂ ಹತ್ತಿರ ಸೇರಿಸದ ಬಹುದೊಡ್ಡ ನಟ ಶರತ್ ಕುಮಾರ್. ಅವನು ಎಲ್ಲಿಗೆ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಅವರನ್ನು ಹತೋಟಿಯಲ್ಲಿರಿಸಲು ಪೊಲೀಸರು ಲಾಠಿ ಬೀಸಬೇಕಾಗುತ್ತಿತ್ತು. ಈ ಮಧ್ಯೆ ಆ ನಟನೇನಾದರೂ ಕಿಟಕಿಯನ್ನು ಮುಖ ತೋರಿಸಿದರೆ ಮತ್ತೆ ಜನಸಂದಣಿಯಲ್ಲಿ ಹಾಹಾಕಾರ. ನಟ ಕೈ ಬೀಸಿದರೆ ಗುಂಪಿನಲ್ಲಿ ರೋಮಾಂಚನ. ಆ ನಟನನ್ನು ಚಿರಾಯು ಕೂಡ ನೋಡಿದ್ದ. ಚಿರಾಯುವಿಗಿಂತ ಸುಮಾರು ನಲುವತ್ತು ವರುಷ ದೊಡ್ಡವನು ಚಿರಾಯು ಓದುತ್ತಿದ್ದಾಗಲೇ ಅವನು ಸೂಪರ್‌ಸ್ಟಾರ್.
ಅಂಥ ಶರತ್‌ಕುಮಾರನನ್ನು ಚಿರಾಯು ಕೂಡ ಭೇಟಿಯಾಗಬೇಕು ಅಂದುಕೊಂಡಿದ್ದ. ಒಬ್ಬ ಸಾಮಾನ್ಯ ಮನುಷ್ಯ ಎಲ್ಲರಂತೆ ಹುಟ್ಟಿ, ಎಲ್ಲರಂತೆ ಬೆಳೆದು ಎಲ್ಲರಂತೆ ಬದುಕುತ್ತಿದ್ದವನು ಇದ್ದಕ್ಕಿದ್ದಂತೆ ಆರಾಧ್ಯ ದೈವ ಆಗುವ ಪರಿ ಅವನನ್ನು ಅಚ್ಚರಿಗೊಳಿಸುತ್ತಿತ್ತು. ಹಾಗೆ ಅವರನ್ನು ಎತ್ತರೆತ್ತರಕ್ಕೆ ಒಯ್ಯುವ ಅಂಶ ಯಾವುದು. ಅವರ ಪ್ರತಿಭೆಯೋ ಅದೃಷ್ಟವೋ ವಿನಯವೋ ಜಾಣತನವೋ ಜನರ ಹುಂಬತನವೋ ಅನ್ನುವುದು ಗೊತ್ತಾಗುತ್ತಿರಲಿಲ್ಲ ಚಿರಾಯುವಿಗೆ. ಅದು ಅವನಿಗೆ ಇವತ್ತಿಗೂ ಗೊತ್ತಿಲ್ಲ.
ಆದರೆ ಅದರ ಬಗ್ಗೆ ಬೇಸರ ಬಂದದ್ದು ಶರತ್‌ಕುಮಾರ್ ಜೊತೆ ನಾಲ್ಕು ದಿನ ಇರಬೇಕಾಗಿ ಬಂದಾಗ. ಸಿನಿಮಾಗಳಲ್ಲಿ ಅಷ್ಟೆಲ್ಲ ಗುಣಸಂಪನ್ನನಾಗಿ, ಜಾಣನಾಗಿ, ಎಲ್ಲವನ್ನೂ ಬಲ್ಲವನಾಗಿ, ದೊರೆಯಾಗಿ, ಅಬ್ಬರಿಸುವ ರಾಕ್ಷಸನಾಗಿ, ಸಲಹುವ ಶ್ರೀಕೃಷ್ಣನಾಗಿ ಮೋಡಿ ಮಾಡುತ್ತಿದ್ದ ಶರತ್‌ಕುಮಾರ್ ಅಂತರಂಗದಲ್ಲಿ ಎಲ್ಲರಂತಿದ್ದ ಅನ್ನುವ ವಿಚಾರವೇ ಚಿರಾಯು ಒಪ್ಪಿಕೊಳ್ಳಲಾರದ ಸಂಗತಿಯಾಗಿತ್ತು. ಅಭಿಮಾನಿಗಳ ಪ್ರೀತಿಯೆಲ್ಲ ನಟನ ಕುರಿತಾದದ್ದೋ ಅವನು ನಿರ್ವಹಿಸಿದ ಪಾತ್ರದ ಕುರಿತಾದದ್ದೋ ಅಥವಾ ಆ ಪಾತ್ರಗಳ ಮೂಲಕ ಕಂಡುಕೊಂಡ ತಮ್ಮತನದ ಕುರಿತಾದದ್ದೋ ಅನ್ನುವುದು ಚಿರಾಯುವಿಗೆ ಅರ್ಥವೇ ಆಗಿರಲಿಲ್ಲ. ಹಲವಾರು ಹೆಣ್ಣುಗಳನ್ನು ಪ್ರೀತಿಸುವ, ಕಣ್ಣಂಚಲ್ಲೇ ಎಂಥವರನ್ನೂ ತೆಪ್ಪಗಿರಿಸುವ, ಒಂದು ಕೂಗು ಹಾಕಿದರೆ ಇಡೀ ಜನಸ್ತೋಮ ಸ್ತಂಭೀಭೂತವಾಗುವಂಥ ಪಾತ್ರಗಳಲ್ಲಿ ಕಾಣಿಸಿಕೊಂಡ
ಶರತ್ ಚಿರಾಯುವಿನ ಮುಂದೆ ಬೆರಗಿನ ಮೂರ್ತಿಯಾಗಿ ಕೂತಿದ್ದ. ಶರತ್ ಚಿರಾಯು ಬರೆದದ್ದನ್ನೇನೂ ಓದಿರಲಿಲ್ಲ. ಕಾಳಿದಾಸನ ಕಾವ್ಯವನ್ನೂ ಓದಿರಲಿಲ್ಲ. ಷೇಕ್ಸ್‌ಪಿಯರ್ ಗೊತ್ತಿರಲಿಲ್ಲ ಆತನಿಗೆ. ಅಷ್ಟೇ ಯಾಕೆ, ತರಾಸು ಬರೆದ ಕಾದಂಬರಿಗಳನ್ನೂ ಓದಿರಲಿಲ್ಲ. ಆದರೆ ಅವರು ಸೃಷ್ಟಿಸಿದ ಪಾತ್ರಗಳನ್ನು ಲೀಲಾಜಾಲವಾಗಿ ನಿರ್ವಹಿಸುತ್ತಿದ್ದ.
ನಾವೆಲ್ಲ ನಮಗೋಸ್ಕರ ಓದಿಕೊಳ್ಳುತ್ತೇವೆ. ಓದಿದ್ದನ್ನು ಮತ್ತೊಬ್ಬರಿಗೆ ಅಷ್ಟು ಸುಲಭವಾಗಿ ದಾಟಿಸಲಾರೆವು. ಆದರೆ, ಈ ಕಲಾವಿದ ತಾನು ಓದಿಲ್ಲದೇ ಇದ್ದರೂ ಆ ಲೇಖಕ ಹೇಳಿದ್ದನ್ನು ಅಷ್ಟೇ ಪ್ರಭಾವಶಾಲಿಯಾಗಿ ದಾಟಿಸಬಲ್ಲ. ಹಾಗಿದ್ದರೆ ಈ ಓದು ಎಲ್ಲಾ ಅನಗತ್ಯ ಅಲ್ಲವೇ ಎಂದು ಯೋಚಿಸುತ್ತಾ ಕುಳಿತ ಚಿರಾಯುವಿಗೆ ಶರತ್‌ಕುಮಾರ್ ಹೇಳಿದ್ದ: ನಿಮ್ಮನ್ನು ನೋಡಿದರೆ ಅಸೂಯೆ ಆಗುತ್ತೆ. ತುಂಬ ಓದಿಕೊಂಡಿದ್ದೀರಿ, ಬರೆದಿದ್ದೀರಿ. ನಮಗೆ ಆ ಅವಕಾಶವೇ ಸಿಗಲಿಲ್ಲ.
ತನ್ನ ಏಕಾಂತವನ್ನೂ ಖಾಸಗಿ ಬದುಕನ್ನೂ ಕಳೆದುಕೊಂಡು ಶರತ್‌ಕುಮಾರ್ ಎಷ್ಟು ಕಂಗೆಟ್ಟಿದ್ದರು ಅನ್ನುವುದು ಚಿರಾಯುವಿಗೆ ಅರಿವಾದದ್ದು ಆಗಲೇ. ದೇವರಾಗುವ, ದೊಡ್ಡವನಾಗುವ ಕಷ್ಟಗಳೂ ಅವನಿಗೆ ಆಗಲೇ ಗಮನಕ್ಕೆ ಬಂದದ್ದು. ಸುಮಾರು ಐವತ್ತು ವರುಷಗಳ ಕಾಲ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಶರತ್‌ಕುಮಾರ್ ಯಾವತ್ತೂ ಮನೆಯಿಂದಾಚೆ ಬರುವ ಹಾಗಿರಲಿಲ್ಲ. ಬೀದಿಯಲ್ಲಿ ನಡೆಯುವಂತಿರಲಿಲ್ಲ. ಸುತ್ತಲೂ ಸಾವಿರಾರು ಲಕ್ಷಾಂತರ ಜನ ಇರುತ್ತಿದ್ದರು. ಆದರೆ ಒಬ್ಬರೂ ಆತ್ಮೀಯವಾಗಿ ಮಾತಿಗೆ ಸಿಗುತ್ತಿರಲಿಲ್ಲ. ಹೊರಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಆರ್ತವಾಗಿ ಮೊರೆಯಿಡುತ್ತಿದ್ದ ಜನಸಾಗರದಲ್ಲಿ ಒಬ್ಬರನ್ನೂ ಹತ್ತಿರ ಕರೆದು ಮಾತಾಡಿಸುವ ಹಾಗಿರಲಿಲ್ಲ. ಶರತ್‌ಕುಮಾರ್‌ಗೆ ಅನಾರೋಗ್ಯ ಅಂದಾಕ್ಷಣ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಹದಿನೆಂಟರ ಹುಡುಗಿಯ ಮುಖ ಹೇಗಿದೆ ಅಂತ ನೋಡುವುದಕ್ಕೂ ಸಾಧ್ಯವಿರಲಿಲ್ಲ.
ಪ್ರೀತಿಸುವವರು ಒಬ್ಬರೋ ಇಬ್ಬರೋ ಇರಬೇಕು. ಲಕ್ಷಾಂತರ ಮಂದಿ ಪ್ರೀತಿಸಿದರೆ ಅದು ಪ್ರೀತಿಯೇ ಅಲ್ಲ ಅನ್ನುವುದೂ ಚಿರಾಯುವಿಗೆ ಆಗಲೇ ಅರ್ಥವಾದದ್ದು. ಆದರೆ ಚಿರಾಯು ಅವನನ್ನು ಎರಡನೇ ಸಾರಿ ಭೇಟಿಯಾದಾಗ ಮತ್ತೊಂದು ಅಚ್ಚರಿ ಎದುರಾಗಿತ್ತು. ನಟನ ಸುತ್ತ ಜನಸಮೂಹ ಇರಲಿಲ್ಲ. ಅವನನ್ನು ಓಲೈಸುವವರು ಇರಲಿಲ್ಲ. ಅವನ ಜೊತೆ ಮಾತಾಡುವವರೂ ಇರಲಿಲ್ಲ. ಒಂದು ಸಂಜೆ ಚಿರಾಯು ಅಲ್ಲಿಂದ ಹೊರಡುವ ಹೊತ್ತಿಗೆ ಶರತ್‌ಕುಮಾರ್, ಅವನ ಕೈ ಹಿಡಕೊಂಡು ಕಣ್ತುಂಬಿಕೊಂಡು ಕೇಳಿದ್ದ.
ನನಗೆ ತುಂಬ ಮಾತಾಡಬೇಕು ಅನ್ನಿಸುತ್ತೆ. ಆದರೆ ಮಾತಾಡುವುದಕ್ಕೆ ಯಾರೂ ಇಲ್ಲ. ಯಾರಿಗೂ ನನ್ನ ಮಾತು ಬೇಕಾಗಿಲ್ಲ. ನೀವಾದರೂ ವಾರಕ್ಕೊಂದು ಸಾರಿ ಬಂದು ಹೋಗುತ್ತೀರಾ?’
ಚಿರಾಯು ಉತ್ತರಿಸಿರಲಿಲ್ಲ. ಅವರ ಕೈಗಳನ್ನು ಮೃದುವಾಗಿ ಅದುಮಿ ಬರುತ್ತೇನೆ ಎಂಬ ಭಾವನೆ ಬರುವಂತೆ ಮಾಡಿದ್ದ. ಚಿರಾಯು ಹೊರಡುತ್ತಿದ್ದಂತೆ ಶರತ್‌ಕುಮಾರ್ ಮತ್ತೆ ಅವನನ್ನು ಕರೆದರು. ಏನೋ ಹೇಳಲಿಕ್ಕೆಂದು ಹೊರಟು ಸುಮ್ಮನಾಗಿದ್ದರು. ನೀವು ಬರೋದು ಬೇಕಾಗಿಲ್ಲ ಅಂತ ಹೇಳುವುದಕ್ಕೆ ಹೊರಟಿದ್ದರು ಅವರು ಅಂದುಕೊಂಡಿದ್ದ ಚಿರಾಯು. ಅದು ಹಾಗೇ ಆಯ್ತು. ಮಾರನೇ ದಿನ ಚಿರಾಯು ಹೋದಾಗ ಗೇಟಿನಲ್ಲಿದ್ದ ವಾಚ್‌ಮನ್, ಅಣ್ಣ ಮನೇಲಿಲ್ಲ ಅಂತ ಹೇಳಿ ವಾಪಸ್ಸು ಕಳುಹಿಸಿದ್ದ. ಅಲ್ಲಿಂದ ಮರಳುವ ಹೊತ್ತಿಗೆ, ಖಾಲಿಗಣ್ಣಾಗಿ ಆಕಾಶ ನೋಡುತ್ತಾ ಮಹಡಿಯ ಕಿಟಕಿಯ ಬಳಿ ನಿಂತಿದ್ದ ಶರತ್‌ಕುಮಾರ್ ಕಾಣಿಸಿದ್ದರು.
ತನ್ನನ್ನು ಬರುವುದು ಬೇಡ ಅಂತ ಹೇಳಿದ್ದು ಶರತ್‌ಕುಮಾರಾ, ಅವರ ಮಕ್ಕಳಾ, ಅವರ ಹೆಂಡತಿಯಾ ಅಥವಾ ಅವರ ಒಳಗಿನ ಭಯವಾ ಅನ್ನುವುದು ಚಿರಾಯುವಿಗೆ ಅರ್ಥವಾಗಿರಲಿಲ್ಲ. ತನ್ನ ಸದ್ಯದ ಸ್ಥಿತಿಯಿಂದ ಹೊರಹೊಮ್ಮುವ ಅನುಕಂಪ , ಒಂದು ಕಾಲದಲ್ಲಿ ತಾನು ಇಡೀ ನಾಡನ್ನೇ ತನ್ನೆಡೆಗೆ ಸೆಳೆದುಕೊಂಡಿದ್ದೆ ಅನ್ನುವ ಸತ್ಯದಿಂದ ಹೊಮ್ಮು ಅಹಂಕಾರ ಎರಡೂ ಬೇಕಾಗಿಲ್ಲ ಎಂಬಂತೆ ಶರತ್‌ಕುಮಾರ್ ಬದುಕುತ್ತಿದ್ದಾರೆ ಅನ್ನಿಸಿತ್ತು ಚಿರಾಯುವಿಗೆ.
ಶೇಷು ಕಾರಿನಿಂದ ಒಂದೊಂದೇ ಸಾಮಾನು ಒಳಗೆ ಕೊಂಡೊಯ್ಯುತ್ತಿದ್ದ. ಮನೆ ಕ್ಲೀನಾಗಿದೆಯೇನೋ ಕೇಳಿದ ಚಿರಾಯು. ಶೇಷು ತಲೆಯಾಡಿಸಿದ. ಒಳಗೆ ಹೋದರೆ ಚಿರಾಯುವಿಗೇ ಆಶ್ಚರ್ಯವಾಯಿತು. ಅಷ್ಟು ಹೊತ್ತಲ್ಲಿ ಶೇಷು ಮನೆಯನ್ನು ಗುಡಿಸಿ, ಒರೆಸಿ, ಚಿರಾಯು ಇಷ್ಟಪಡುವ ಊದುಬತ್ತಿ ಹಚ್ಚಿಟ್ಟು. ಚಿರಾಯು ಪುಸ್ತಕಗಳನ್ನು ಟೇಬಲ್ಲಿನ ಮೇಲೆ ಜೋಡಿಸಿಟ್ಟು ಇಡೀ ರೂಮು ನಳನಳಿಸುವಂತೆ ಮಾಡಿದ್ದ.
ಆ ರೂಮಿನೊಳಗೆ ಕಾಲಿಡುತ್ತಿದ್ದಂತೆ ಅದ್ಯಾವುದೋ ಪರ್‌ಫ್ಯೂಮ್ ಬಳಿದುಕೊಂಡು, ಕತ್ತಿಗೊಂದು ರುದ್ರಾಕ್ಷಿ ಸರ ಹಾಕಿಕೊಂಡು, ತೆಳ್ಳಗಿನ ಖಾದಿ ಜುಬ್ಬಾ ತೊಟ್ಟು, ಯೋಗಿನಿಯ ಹಾಗೆ ಕೂತಿರುತ್ತಿದ್ದ ಯಾಮಿನಿಯನ್ನು ಸಮೀಪಿಸುತ್ತಿದ್ದೇನೆ ಅನ್ನಿಸಿತು. ಚಿರಾಯು ಮೊಬೈಲ್ ತೆಗೆದು ನೋಡಿದ.
ಇಲ್ಲಿ ನೆಟ್ ವರ್ಕ್ ಇಲ್ಲ. ಯಾವ ಫೋನೂ ಬರೋದಿಲ್ಲ. ಬೇಕಿದ್ದರೆ ಆ ಗುಡ್ಡದ ಬದಿಗೆ ಹೋಗಿ ಫೋನ್ ಮಾಡಬೇಕು ಅಂತ ಶೇಷು.
ಕೊನೆಗೂ ತಾನು ಎಲ್ಲರ ಕೈಯಿಂದಲೂ ಪಾರಾದೆ ಅಂದುಕೊಂಡು ಚಿರಾಯು ಹೊರಗೆ ನೋಡಿದ. ಅಷ್ಟೂ ಹೊತ್ತು ಕಷ್ಟಪಟ್ಟು ತಡಕೊಂಡಿದ್ದೆ ಎಂಬಂತೆ ಮಳೆ ಧಾರೆಯಾಗತೊಡಗಿತು.

Friday, April 25, 2008

11. ಕಾಡ ಮೂಲಕವೆ ಪಥ ಆಗಸಕ್ಕೆ

ಸುಳ್ಳಕ್ಕೆ ಕಾಲಿಡುವ ಹೊತ್ತಿಗಾಗಲೇ ಗಂಟೆ ನಾಲ್ಕು. ಹಾದಿಬದಿಯ ರಬ್ಬರ್ ಗಿಡಗಳು ಸೊಂಟಕ್ಕೆ ರಬ್ಬರ್ ಸಂಚಿಕಟ್ಟಿಕೊಂಡು ನಿಂತಿದ್ದವು. ಮರಗಳು ಎಲೆಯುದುರಿಸಿಕೊಂಡು ಬೋಳುಬೋಳಾಗಿದ್ದವು. ಅದೇ ಹಾದಿಯಲ್ಲಿ ಅಲೆದಾಡಿದ್ದು, ನಡೆದು ನಡೆದು ಸುಳ್ಯದಿಂದ ಸಂಪಾಜೆ ಘಾಟಿ ಹತ್ತಿ ಮಡಿಕೇರಿಗೆ ಬಂದದ್ದು ನೆನಪಾಯಿತು. ಹಿಂದಿನ ಸಾರಿ ಬಂದಾಗ ಜೊತೆಗೆ ಯಾಮಿನಿ ಇರಲಿಲ್ಲ, ಸುಚಿತ್ರಾ ನಾಯಕ್ ಇದ್ದಳು. ನೀವು ಯಾವಾಗಲೂ ಡ್ರೈವರ್ ಜೊತೆಗೇ ಪಯಣಿಸುತ್ತೀರಲ್ಲ. ನೀವು ಡ್ರೈವ್ ಮಾಡೋದಿಲ್ಲವಾ ಅಂತ ಕೇಳಿದ್ದಳು. ಒಂದು ಕಾಲದಲ್ಲಿ ತಾನು ಹೇಗೆ ಸಾವಿರಾರು ಕಿಲೋಮೀಟರ್ ಒಬ್ಬನೇ ಡ್ರೈವ್ ಮಾಡಿಕೊಂಡು ಹೋಗುತ್ತಿದ್ದೆ ಅನ್ನುವುದನ್ನು ಹೇಳಬೇಕು ಅಂತ ಹೊರಟ ಚಿರಾಯುವಿಗೆ ಇದ್ದಕ್ಕಿದ್ದಂತೆ ಬೇಸರ ಉಕ್ಕಿಬಂತು.
ಹಳೆಯ ಪರಾಕುಗಳಲ್ಲಿ ಬದುಕುವುದೆಂದರೆ ಅವನಿಗೆ ಅಸಹ್ಯ. ಆವತ್ತು ಹಾಗಿದ್ದೆ, ನನ್ನ ಯೌವನದಲ್ಲಿ ಹುಲಿಬೇಟೆ ಆಡಿದ್ದೆ, ಒಂದು ಕಾಲದಲ್ಲಿ ಹಾಗೆ ಮಾಡುತ್ತಿದ್ದೆ ಅಂತ ಹೇಳಿಕೊಳ್ಳುವುದು ಸದ್ಯದ ಅಸಹಾಯಕತೆಯನ್ನು ತೋರಿಸುತ್ತದೆ. ವರ್ತಮಾನದಲ್ಲಿ ನಿರ್ಬಲವನೂ ನಿಷ್ಕ್ರಿಯನೂ ಆದ ಮನುಷ್ಯ, ಭೂತಕಾಲಕ್ಕೆ ಕನ್ನಡಿ ಹಿಡಿಯುವ ಮೂಲಕ ತನ್ನ ಶಕ್ತಿ, ಸೃಜನಶೀಲತೆ ಮತ್ತು ಸಾಮರ್ಥ್ಯವನ್ನು ಊರ್ಜಿತಗೊಳಿಸುವ ರೀತಿ ಅವನನ್ನು ತಲ್ಲಣಗೊಳಿಸುತ್ತಿತ್ತು. ಮೊದಲ ಕಾದಂಬರಿಯ ಕುರಿತೇ, ಹದಿನಾರನೆಯ ಕಾದಂಬರಿ ಬರೆದ ಸಂದರ್ಭದಲ್ಲೂ ಮಾತಾಡುವುದು ಅನವಶ್ಯಕ ಎಂದೇ ಚಿರಾಯು ವಾದಿಸುತ್ತಿದ್ದ.
ಸುಚಿತ್ರಾ ನಾಯಕ್ ಹಾಗೆ ಕೇಳಿದ್ದೇಕೆ ಅನ್ನುವುದು ಮಾತ್ರ ಅವನಿಗೆ ಹೊಳೆಯಲಿಲ್ಲ. ತಾವಿಬ್ಬರೇ ಇದ್ದರೆ ಚೆನ್ನಾಗಿತ್ತು ಎಂದು ಅವಳಿಗೆ ಅನ್ನಿಸಿತ್ತೋ ಏನೋ? ಸಾಮಾನ್ಯವಾಗಿ ತನ್ನ ಸಂಪರ್ಕಕ್ಕೆ ಬಂದ ಹೆಣ್ಣುಮಕ್ಕಳ ವ್ಯಕ್ತಿತ್ವವನ್ನು ನಿಷ್ಕರ್ಷೆ ಮಾಡುವುದಕ್ಕೆ ಹೋಗುತ್ತಿರಲಿಲ್ಲ ಚಿರಾಯು. ಅವರ ನಿಲುವೇನು, ಇರಾದೆಯೇನು, ಮನಸ್ಥಿತಿಯೇನು, ಉದ್ದೇಶ ಏನು ಅನ್ನುವುದನ್ನೆಲ್ಲ ಲೆಕ್ಕ ಹಾಕುವುದೆಂದರೆ ಅವನಿಗೆ ಪರಮ ಅಸಹ್ಯ. ಒಬ್ಬೊಬ್ಬರು ಒಂದೊಂದು ರೀತಿ ಇರುತ್ತಾರೆ. ಅವರನ್ನು ಹಾಗ್ಹಾಗೇ ಸ್ವೀಕರಿಸಬೇಕು ಎನ್ನುತ್ತಿದ್ದ ಚಿರಾಯುವನ್ನು ಅಖಂಡವಾಗಿ ಖಂಡಿಸುತ್ತಿದ್ದವಳು ಯಾಮಿನಿ. ನಿಂಗೆ ಗೊತ್ತಾಗಲ್ಲ ಚಿರಾಯು. ಅವರೆಲ್ಲರೂ ನಿನ್ನನ್ನು ಬಳಸ್ಕೋತಿದ್ದಾರೆ. ನಿನ್ನ ಅಧಿಕಾರ, ಪವರ್, ಇಮೇಜು, ಪ್ರಭಾವಳಿಗಳಷ್ಟೇ ಅವರಿಗೆ ಬೇಕಾಗಿರೋದು. ನಿನ್ನ ಮೇಲಿನ ಪ್ರೀತಿಯಿಂದ ಅವರು ನಿನಗೆ ಹತ್ತಿರಾಗ್ತಿಲ್ಲ. ಸಿನಿಮಾ ನಟಿಯರು ರಾಜಕಾರಣಿಗಳ ಹತ್ತಿರ ಯಾಕೆ ಹೋಗ್ತಾರೆ ಅಂತೀಯ? ಅಲ್ಲಿ ಅವರಿಗೆ ಏನು ಸಿಗುತ್ತೆ ಅಂದ್ಕೊಂಡಿದ್ದೀಯಾ? ಅವರ ಯೌವನವನ್ನು ತಣಿಸುವಂಥ ಸುಖ ಸಿಗೋಲ್ಲ. ಆದರೆ ಅವರಿಗೆ ಆ ಸುಖ ಬೇಕಾಗಿರೋಲ್ಲ, ಬೇಕಾಗೋದು ಪವರ್‌ಗೆ ಹತ್ತಿರವಿದ್ದೇನೆ ಅನ್ನುವ ತೃಪ್ತಿ ಎಂದು ಅವಳು ಪದೇ ಪದೇ ಹೇಳುತ್ತಿದ್ದಳು. ಅವಳು ಹಾಗೆ ಹೇಳುತ್ತಿದ್ದದ್ದು ತನ್ನನ್ನು ಆ ಹೆಣ್ಣುಮಕ್ಕಳಿಂದ ದೂರ ಇಡುವುದಕ್ಕೇನೋ ಅಂತಲೂ ಅವನಿಗೆ ಅನೇಕ ಸಲ ಅನ್ನಿಸಿದೆ. ಆದರೆ ಯಾಮಿನಿ ಹೇಳಿದ್ದರಲ್ಲೂ ಸತ್ಯವಿದೆ ಅನ್ನುವುದು ಅವನಿಗೆ ಗೊತ್ತಾಗಿದ್ದು ಸುಚಿತ್ರಾ ನಾಯಕ್ ಪರಿಚಯ ಆದಾಗಿನಿಂದ.
ಸುಚಿತ್ರಾ ಅವನನ್ನು ಕಡಿಮೆ ಕಾಡಲಿಲ್ಲ. ಅವನನ್ನು ತನ್ನ ಮಾತಿನಿಂದ, ಜ್ಞಾನದಿಂದ, ವಿವೇಕದಿಂದ, ಬುದ್ಧಿವಂತಿಕೆಯಿಂದ ಸ್ಪರ್ಶಿಸುವುದು, ತಾಕುವುದು ಮತ್ತು ಒಳಗೊಳ್ಳುವುದು ಅಸಾಧ್ಯ ಅಂತ ಅರ್ಥವಾದ ತಕ್ಷಣ ತನ್ನ ವರಸೆ ಬದಲಾಯಿಸಿಕೊಂಡು ಬಿಟ್ಟಳು. ಅವಳು ಆಡಿದ ಅಷ್ಟೂ ಮಾತುಗಳನ್ನು ಚಿರಾಯು ಬೇಸರದಿಂದ, ಆಕಳಿಸುತ್ತಾ ಕೇಳಿಸಿಕೊಂಡ. ಅದರಲ್ಲಿ ಯಾವ ಆಸಕ್ತಿಯೂ ಇರಲಿಲ್ಲ. ತನಗೂ ಅವಳಿಗೂ ಸಮಾನವಾದ ವಿಚಾರ ಯಾವುದೂ ಇಲ್ಲ ಅನ್ನುವುದು ಎರಡನೆಯ ಭೇಟಿಯಲ್ಲೇ ಅವನಿಗೆ ಖಚಿತವಾಯಿತು.
ಇನ್ನೇನು ಅವನು ತನ್ನಲ್ಲಿ ಆಸಕ್ತಿ ಕಳಕೊಳ್ಳುತ್ತಾನೆ ಅಂತ ಗೊತ್ತಾಗುತ್ತಿದ್ದಂತೆ ಸುಚಿತ್ರಾ ಅವನನ್ನು ಬಿಗಿಯಾಗಿ ತಬ್ಬಿಕೊಂಡು ಬಿಟ್ಟಿದ್ದಳು. ಚಿರಾಯು ಕೂಡ ಬೇಸರದ ಆ ಗಳಿಗೆಯಲ್ಲಿ ಅದೊಂದೇ ಬಿಡುಗಡೆಯೇನೋ ಅಂದುಕೊಂಡು ತಾನೂ ಅವಳನ್ನು ಅಷ್ಟೇ ಬಿಗಿಯಾಗಿ ತಬ್ಬಿಕೊಂಡಿದ್ದ. ಅವಳನ್ನು ಅವನು ಚುಂಬಿಸುವ ಹೊತ್ತಿಗೆ ಅವಳ ಕಣ್ಣಲ್ಲಿ ಗೆದ್ದ ಭಾವವಿತ್ತು ಅನ್ನುವುದು ಆಮೇಲೊಂದು ದಿನ ಚಿರಾಯುವಿಗೆ ನೆನಪಾಗಿತ್ತು.
ಈ ದೇಹವೂ ಅದಕ್ಕೊಂದು ಮೂಲಪ್ರವೃತ್ತಿಯೂ ಇಲ್ಲದೇ ಹೋಗಿದ್ದರೆ ಕೆಲವರ ಜೊತೆ ಸಂವಹನ ಸಾಧ್ಯವೇ ಆಗುತ್ತಿರಲಿಲ್ಲವಲ್ಲ ಎಂದು ಯೋಚಿಸುತ್ತಾ ಚಿರಾಯು ಬೆರಗಾಗುತ್ತಿದ್ದ. ಮಾತು, ಕಲೆ, ಸೃಜನಶೀಲತೆ ಇವೆಲ್ಲವನ್ನೂ ಮೀರಿದ್ದು ಬೇಸಿಕ್ ಇನ್‌ಸ್ಟಿಂಕ್ಟ್. ಇಬ್ಬರನ್ನು ಹತ್ತಿರಾಗಿಸುವುದು ಅದೇ. ಉಳಿದದ್ದೆಲ್ಲ ಪ್ರೇಮಿಸದೇ ಇರುವಾಗಿನ ಕಾಲವನ್ನು ಕೊಲ್ಲುವುದಕ್ಕಿರುವಂಥ ಚಿತಾವಣೆಗಳು. ಅವುಗಳಿಂದ ಸಂಬಂಧ ಬಲವಾಗುವುದು ಸಾಧ್ಯೇ ಇಲ್ಲ. ಅವನನ್ನು ಅವಳು, ಅವಳನ್ನು ಅವನು ಇಡಿಯಾಗಿ ಸ್ವೀಕರಿಸಬೇಕಿದ್ದರೆ ಇಬ್ಬರೂ ದೈಹಿಕವಾಗಿ ಒಂದಾಗಬೇಕು. ಸಂಭೋಗದಲ್ಲಿ, ಪರಸ್ಪರರ ಹುಡುಕಾಟದಲ್ಲಿ, ಇಬ್ಬರೂ ನಿಮಗ್ನರಾಗಿ ನಗ್ನರಾಗಿ ಕಂಡುಕೊಂಡಾಗಷ್ಟೇ ಪ್ರೀತಿ ನೆಲೆಯಾಗುತ್ತದೆ ಅಂತ ತುಂಬ ಕಾಲ ನಂಬಿದ್ದ ಚಿರಾಯುವಿನ ವಾದವನ್ನು ಒಂದೇ ಮಾತಿನಿಂದ ತಳ್ಳಿಹಾಕಿದವಳು ಯಾಮಿನಿ.
ಹಾಗಿದ್ದರೆ ನಿನ್ನನ್ನು ಸ್ಮಿತಾ ಬಿಟ್ಟುಹೋದದ್ದೇಕೆ ಹೇಳು’ ಎಂದು ಥಟ್ಟನೆ ಕೇಳಿದ್ದಳು ಯಾಮಿನಿ. ಅವಳ ಜೊತೆ ಅದೆಲ್ಲವೂ ಸಾಧ್ಯವಾಗಿತ್ತು. ಅದಕ್ಕಿಂತ ಹೆಚ್ಚಾಗಿ ಇಬ್ಬರೂ ಜೊತೆಗೆ ಬಾಳುವುದಕ್ಕೆ ಎಲ್ಲಾ ಕಾರಣಗಳೂ ಇದ್ದವು. ನೀವಿಬ್ಬರೂ ಸಂಪ್ರದಾಯಬದ್ಧವಾಗಿ, ನಿನಗದು ಇಷ್ಟವಿಲ್ಲದೇ ಇದ್ದರೂ ಮದುವೆ ಆಗಿದ್ದಿರಿ. ಹೇಗೋ ಹೊಂದಿಕೊಂಡು ಹೋಗಬಹುದಿತ್ತು. ನೀನು ಹೇಳುವ ಹಾಗೆ ದೈಹಿಕವಾಗಿ ಏನೇನಾಗಬೇಕೋ ಅದೆಲ್ಲವೂ ಆಗಿಹೋಗಿತ್ತು. ಆ ಸಂಭೋಗ, ಸಮಾಗಮ ಮತ್ತ್ಯಾಕೆ ನಿಮ್ಮನ್ನು ಹತ್ತಿರಾಗಿಸಲಿಲ್ಲ ಹೇಳು. ನೋಡೋ, ಅದೆಲ್ಲ ಸುಳ್ಳು,. ಜೊತೆಗಿದ್ದಾಗ ಜೊತೆಗಿರುತ್ತೇವೆ ಅಷ್ಟೇ. ದೂರವಾದಾಗ ದೂರ ಆಗುತ್ತೇವೆ ಅಷ್ಟೇ. ಅದಕ್ಕೆ ಯಾವ ಕಾರಣಗಳೂ ಇರುವುದಿಲ್ಲ’
ಯಾಮಿನಿ ಒಮ್ಮೊಮ್ಮೆ ಹಾಗೆ ಮಾತಾಡುತ್ತಾಳೆ. ಅವಳು ಅದನ್ನು ಅರಿತು ಆಡುತ್ತಾಳೋ, ತಿಳಿದು ಆಡುತ್ತಾಳೋ ಓದಿ ಆಡುತ್ತಾಳೋ ಅನ್ನುವ ಕುತೂಹಲ ಚಿರಾಯುವಿನಲ್ಲಿ ಇನ್ನೂ ಉಳಿದುಕೊಂಡಿದೆ. ಎಷ್ಟೋ ಸಾರಿ ಆಕೆ ಮಾತಿನ ಭರದಲ್ಲಿ ಪರಮ ಸತ್ಯಗಳನ್ನು ಹೇಳಿಬಿಡುತ್ತಾಳೆ.
ದೇಹವಿಲ್ಲದೇ ಪ್ರೀತಿಸಬೇಕು ಅನ್ನೋದು ತಮ್ಮ ದೌರ್ಬಲ್ಯ ಗೊತ್ತಿರುವ ಗಂಡಸರು ಹೂಡಿದ ಮೊಂಡು ವಾದ. ಪ್ರೀತಿಯಲ್ಲಿ ದೈಹಿಕ, ಮಾನಸಿಕ, ದೈವಿಕ ಅಂತೆಲ್ಲ ಇಲ್ಲ. ಹಾಗೆ ಭಾಗ ಮಾಡಿ ನೋಡುವುದೂ ತಪ್ಪು. ಸುಮ್ಮನೆ ಅನ್ನಿಸಿದ ಹಾಗೆ ಬದುಕಿದರೆ, ಈ ಯಾವ ರಗಳೆಗಳೂ ಇರೋದಿಲ್ಲ ಅಂದಿದ್ದಳು ಯಾಮಿನಿ.
ಅಕ್ಕಮಹಾದೇವಿ ದೇಹವಿಲ್ಲದ ಮಲ್ಲಿಕಾರ್ಜುನನ್ನು ಪ್ರೀತಿಸಿದ್ದಳಲ್ಲ, ಮೀರಾ ಗಿರಧರನನ್ನು ದೇಹದ ಹಂಗಿಲ್ಲದೆ ಪ್ರೀತಿಸಿರಲಿಲ್ಲವಾ ಕೇಳಿದ್ದ ಚಿರಾಯು. ಯಾಮಿನಿ ಬೇಸರದಲ್ಲೇ ಹೇಳಿದ್ದಳು: ಚೆನ್ನಮಲ್ಲಿಕಾರ್ಜುನನಿಗೋ ಗಿರಿಧರನಿಗೋ ದೇಹ ಇರಲಿಲ್ಲ ಅಂತ ಹೇಳಿದವರು ಯಾರು? ಅಕ್ಕನ ಕಲ್ಪನೆಯಲ್ಲಿ. ಮೀರಾಳ ಮನಸ್ಸಿನಲ್ಲಿ ಅವರ ಪ್ರೇಮಿಗೊಂದು ದೇಹ ಇದ್ದಿರಲೇ ಬೇಕಲ್ಲ. ಭೌತಿಕವಾದ ದೇಹ ಇದ್ದರೂ ಅದನ್ನು ಎಷ್ಟು ಹುಡುಗಿಯರು ಪ್ರೀತಿಸುತ್ತಾರೆ ಹೇಳು. ಆ ಹೊತ್ತಿಗೆ ಅವರ ಕಲ್ಪನೆಯಲ್ಲಿ ಮತ್ತೊಂದು ದೇಹ, ಮತ್ತೊಂದು ಮನಸ್ಸು ಸೃಷ್ಟಿಯಾಗಿರುತ್ತದೆ. ಸುಚಿತ್ರಾ ತಬ್ಬಿಕೊಂಡದ್ದು ನಿನ್ನ ಈ ಮೂಳೆ ಮಾಂಸದ ತಡಿಕೆಯನ್ನಲ್ಲ. ನಿನ್ನ ಖ್ಯಾತಿ, ಪ್ರತಿಭೆ, ಸಂಪತ್ತು, ಜನಪ್ರಿಯತೆಗಳಿಂದ ತುಂಬಿಕೊಂಡ ನಿನ್ನ ದೇಹವನ್ನು. ಅದು ನಿನ್ನದಲ್ಲ.’
ಯೋಚಿಸುತ್ತಾ ಸ್ಮಿತಾಳ ನೆನಪಾಗಿದ್ದಕ್ಕೆ ಮನಸ್ಸಿಗೆ ಕಿರಿಕಿರಿ ಅನ್ನಿಸಿತು. ಅವಳು ನೆನಪಾದರೆ ತುಂಬ ಹೊತ್ತು ಏನೂ ಮಾಡಲಾಗುವುದಿಲ್ಲ ಚಿರಾಯುವಿಗೆ. ಜೊತೆಗಿದ್ದಾಗಲೂ ಕಾಡಿದಳು, ಬಿಟ್ಟೂ ಕಾಡುತ್ತಿದ್ದಾಳೆ ಅಂತ ಚಿರಾಯು
ಕಣ್ಮುಚ್ಚಿಕೊಂಡ.

Thursday, April 24, 2008

10. ನಡೆದ ಹಾದಿಯ ತಿರುಗಿ ನೋಡಬಾರದು ಏಕೆ?

ಚಿರಾಯುವಿಗೆ ಪ್ರಯಾಣವೆಂದರೆ ಇಷ್ಟ. ಅದೇ ಕಾರಣಕ್ಕೆ ಮೋಟರ್ ಸೈಕಲ್ ಡೈರೀಸ್ ಸಿನಿಮಾ ಕೂಡ ಇಷ್ಟ. ಝೆನ್ ಅಂಡ್ ಮೋಟರ್ ಸೈಕಲ್ ಮೇಂಟೆನೆನ್ಸ್ ಪುಸ್ತಕವೂ ಅಚ್ಚುಮೆಚ್ಚು. ಇಡೀ ಜೀವನವನ್ನು ಅಲೆಮಾರಿಯಾಗಿಯೇ ಕಳೆಯಬೇಕು ಅನ್ನುವ ಆಸೆ ಕೈಗೂಡದೇ ಹೋದದ್ದಕ್ಕೆ ಕಾರಣ ಅವನ ಮಹತ್ವಾಕಾಂಕ್ಷೆ.
ಇದೀಗ ನಲುವತ್ತೆರಡನೇ ವಯಸ್ಸಿನಲ್ಲಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪೈಕಿ ಅತ್ಯಂತ ಕಿರಿಯ ಎಂಬ ಹೆಮ್ಮೆ, ಮೆಚ್ಚುಗೆ ಮತ್ತು ಬೆರಗಿನಲ್ಲಿ ಚಿರಾಯು, ಮತ್ತೆ ತನ್ನ ಬಾಲ್ಯದ ಆಶೆಗಳಿಗೆ ಮರಳುವುದು ಸಾಧ್ಯವಾ ಅಂತ ನೋಡುತ್ತಿದ್ದಾನೆ. ತನ್ನ ಕಾದಂಬರಿ, ಅದರ ತಿರುಳು, ಅದರಲ್ಲಿ ತಾನು ಪ್ರತಿಪಾದಿಸಿದ ಹೊಸತನ ಎಲ್ಲಕ್ಕಿಂತಲೂ ತಾನು ಅತ್ಯಂತ ಸಣ್ಣ ವಯಸ್ಸಿನಲ್ಲೇ ಜ್ಞಾನಪೀಠ ತೆಗೆದುಕೊಳ್ಳುತ್ತಿದ್ದೇನೆ ಅನ್ನುವುದೇ ಮುಖ್ಯವಾಯಿತಲ್ಲ ಅಂತ ಚಿರಾಯು ಆಗಾಗ ಮರುಗುವುದಿದೆ. ಪ್ರಶಸ್ತಿ ಬಂದಾಗ ಒಂದಷ್ಟು ಗುಸುಗುಸು, ವಿವಾದ ಶುರುವಾಗಿತ್ತು. ಆದರೆ ಇಂಗ್ಲಿಷ್ ಪತ್ರಿಕೆಗಳು ಕೊಟ್ಟ ಪ್ರಚಾರ ಅದನ್ನೆಲ್ಲ ಮಸುಕಾಗಿಸಿತು. ಯಾಮಿನಿ ಇಂಗ್ಲಿಷ್ ಚಾನಲ್ಲುಗಳನ್ನು ಹಿಡಿದು, ಅವುಗಳಲ್ಲಿ ಸಂದರ್ಶನ, ಪ್ರೊಫೈಲು ಬರುವ ಹಾಗೆ ನೋಡಿಕೊಂಡು ಸಣ್ಣಪುಟ್ಟ ಮಾತುಗಳೆಲ್ಲ ಕೇಳಿಸದ ಹಾಗೆ ಮಾಡಿದ್ದಳು.
ಮುಖ್ಯವಾದ ಆರೋಪ ಬಂದದ್ದು ಕನ್ನಡದಿಂದಲೇ. ಚಿರಾಯುವನ್ನು ತುಂಬ ಇಷ್ಟಪಡುತ್ತಿದ್ದ ಕೊಂಡಜ್ಜಿ ನಾಗರಾಜನೇ ತರಲೆ ತೆಗೆದಿದ್ದ. ಅವನ ಟ್ಯಾಬ್ಲಾಯಿಡ್‌ನಲ್ಲಿ ಚಿರಾಯು ಜ್ಞಾನಪೀಠದ ರಹಸ್ಯ ಬಯಲು ಮಾಡಿದ ಲೇಖನ ಪ್ರಕಟಿಸಿದ್ದ. ಅವನ ಪ್ರಕಾರ ಚಿರಾಯುವಿಗೆ ಜ್ಞಾನಪೀಠ ಪ್ರಶಸ್ತಿ ಬರುವುದಕ್ಕೆ ಮುಖ್ಯ ಕಾರಣ, ಜ್ಞಾನಪೀಠ ಆಯ್ಕೆ ಸಮಿತಿಯಲ್ಲಿದ್ದ ಸುರೇಂದ್ರ ಬಸು. ಸುರೇಂದ್ರ ಬಸು ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಚಿರಾಯುವಿನ ಶಿಷ್ಯೆ ನಳಿನಿ ಹೆಗಡೆ. ಅದಕ್ಕೆ ವ್ಯಾಪಕ ಪ್ರಚಾರ ಸಿಗುವಂತೆ ಮಾಡಿದ್ದು ಚಿರಾಯು. ಒಂದು ಕಾಲದಲ್ಲಿ ಚಿರಾಯು ಎಲ್ಲಿ ಹೋದರೂ ಸುರೇಂದ್ರ ಬಸು ಪ್ರಸ್ತಾಪ ಮಾಡುತ್ತಿದ್ದ. ನಳಿನಿ ಹೆಗಡೆಯನ್ನು ಸುರೇಂದ್ರನಿಗೆ ಒಪ್ಪಿಸಿಯೂಬಿಟ್ಟಿದ್ದ. ಪಾಂಡುರೋಗದಿಂದಾಗಿ ಮೈತುಂಬ ಬಿಳಿಯ ಮಚ್ಚೆಗಳಿದ್ದುದರಿಂದ ಸುರೇಂದ್ರ ಬಸುವಿನ ಹೆಂಡತಿ ಅವನಿಂದ ದೂರ ಇದ್ದುಬಿಟ್ಟಿದ್ದಳು. ಹೆಣ್ಣಿನ ಸಹವಾಸವೇ ಇಲ್ಲದೆ ಸುರೇಂದ್ರ ಬಸು, ಬಸವಳಿದು ಹೋಗಿದ್ದ. ಅಂಥ ಹೊತ್ತಲ್ಲಿ ಸಿಹಿನೀರಿನ ಬುಗ್ಗೆಯ ಹಾಗೆ ಸಿಕ್ಕವಳು ನಳಿನಿ ಹೆಗಡೆ. ಅವಳನ್ನು ಚಿರಾಯು ತನಗೆ ಒಪ್ಪಿಸಿದ್ದಕ್ಕೆ ಕೃತಜ್ಞತಾ ರೂಪದಲ್ಲಿ ಸಂದಾಯವಾದದ್ದು ಜ್ಞಾನಪೀಠ ಎಂಬರ್ಥದ ಲೇಖನ ಬರೆದಿದ್ದ. ತನ್ನನ್ನು ತಲೆಹಿಡುಕನ ಮಟ್ಟಕ್ಕೆ ತಂದಿದ್ದಕ್ಕೆ ಚಿರಾಯುವಿಗೆ ಬೇಸರವಾಗಿತ್ತು. ಗೆಳೆಯರೆಲ್ಲ ಸೇರಿ ಮಾನನಷ್ಟ ಮೊಕದ್ದಮೆ ಹೂಡುವಂತೆ ಒತ್ತಾಯಿಸಿದ್ದರು. ಆದರೆ, ಚಿರಾಯು ಅದಕ್ಕೆ ಪ್ರತಿಸ್ಪಂದಿಸಿರಲಿಲ್ಲ. ಅವನು ಕಾಲುಕೆರೆದು ಜಗಳ ಮಾಡುತ್ತಾನೆ ಅಂತ ನಿರೀಕ್ಷಿಸಿದ್ದ ಕೊಂಡಜ್ಜಿ ನಾಗರಾಜನಿಗೂ ನಿರಾಸೆಯಾಗಿತ್ತು.
ಜ್ಞಾನಪೀಠ ಪ್ರಶಸ್ತಿಯಿಂದಾಗಿ ಚಿರಾಯುವಿನ ಜೀವನಶೈಲಿಯಲ್ಲಿ ಅಂಥ ಬದಲಾವಣೆಯೇನೂ ಆಗಲಿಲ್ಲ. ಆದರೆ, ಪ್ರವಾಸಗಳು ಹೆಚ್ಚಿದವು. ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಭಾಷಣಗಳಿಗೆ ಕರೆ ಬರುತ್ತಿತ್ತು. ಅಲ್ಲಿಗೆ ಹೋದಾಗ ಇನ್ನೇನೋ ಜರಗಬಹುದು ಏನೋ ಪವಾಡ ನಡೆಯಬಹುದು ಎಂದು ನಿರೀಕ್ಷಿಸಿರುತ್ತಿದ್ದ ಚಿರಾಯುವಿಗೆ ಹೆಚ್ಚಿನ ಸಂದರ್ಭದಲ್ಲಿ ನಿರಾಸೆಯಾಗುತ್ತಿತ್ತು. ಅದೇ ಕಾರು ಪ್ರಯಾಣ, ಅದೇ ಹೊಟೆಲು, ಅದೇ ಭಾಷಣ, ಅದೇ ಪ್ರಶ್ನೋತ್ತರ, ಅದೇ ಮುಖಗಳು. ಕೊನೆಗೆ ಚಿರಾಯು ತಾನಿನ್ನು ಭಾಷಣಗಳಿಗೆ ಬರುವುದಿಲ್ಲ ಎಂದ. ಪತ್ರಿಕೆಗಳಿಗೆ ಸಂದರ್ಶನ ಕೊಡುವುದಿಲ್ಲ ಎಂದ. ಆದರೆ ಹಾಗೆ ಹೇಳಿ ಸುಮ್ಮನಿದ್ದ ತಕ್ಷಣ ವಿಚಿತ್ರ ಚಾಂಚಲ್ಯ ಕಾಡುತ್ತಿತ್ತು. ತಾನು ಅಪ್ರಸ್ತುತನಾಗುತ್ತಿದ್ದೇನೆ ಅನ್ನಿಸುತ್ತಿತ್ತು. ತನ್ನನ್ನು ಜ್ಞಾನಪೀಠದಲ್ಲಿಟ್ಟು ನೋಡದೇ, ಸಹಜವಾಗಿ ನೋಡಲಿ ಅಂತ ಮನಸ್ಸು ಹಂಬಲಿಸುತ್ತಿತ್ತು. ಎಲ್ಲದರ ಬಗ್ಗೆ ಪ್ರತಿಕ್ರಿಯಿಸುತ್ತಾ, ತನ್ನೂರ ಅಜ್ಜಂದಿರ ಹಾಗೆ ಹರಟುತ್ತಾ, ರೇಗಾಡುತ್ತಾ, ಖುಷಿಯಾಗುತ್ತಾ, ಸುಮ್ಮನೆ ಒಂದು ಹೇಳಿಕೆ ವಗಾಯಿಸುತ್ತಾ ಇರಬೇಕು ಅನ್ನುವ ಆಸೆಗೆ ಅಡ್ಡಿಯಾದದ್ದು ಜ್ಞಾನಪೀಠ.
ವಿರೋಧಿಗಳನ್ನು ಎದುರಿಸುವುದೇನೂ ಕಷ್ಟದ ಕೆಲಸ ಆಗಿರಲಿಲ್ಲ ಚಿರಾಯುವಿಗೆ. ಮೇಲ್ನೋಟಕ್ಕೆ ಅವನು ಹೇಗೇ ಪ್ರತಿಕ್ರಿಯಿಸಿದರೂ ಒಳಗೊಳಗೇ ಅವನಿಗೊಂದು ಆತ್ಮಶಕ್ತಿಯಿತ್ತು. ಯಾವ ಟೀಕೆಯೂ ಯಾವ ಮೆಚ್ಚುಗೆಯೂ ಅವನನ್ನು ಕಂಗಾಲು ಮಾಡುತ್ತಿರಲಿಲ್ಲ. ತನ್ನ ಸಂತೋಷ, ಬೇಸರ, ಕೋಪ, ಸಂಕೋಚ, ವಿನಯ ಎಲ್ಲವೂ ನಟನೆಯೆಂಬುದು ಚಿರಾಯುವಿಗೆ ಗೊತ್ತಿತ್ತು. ಅದನ್ನು ಯಾಮಿನಿ ಕೂಡ ಕಂಡುಕೊಂಡಿದ್ದಳು. ಹೊರಗಿನ ಟೀಕೆ ಮತ್ತು ಅಭಿಪ್ರಾಯಗಳನ್ನು ಹುಲುಮಾನವರ ಅನಿಸಿಕೆಗಳೆಂದು ನಿರಾಕರಿಸುವ ಅಹಂಕಾರ ಅದಾಗಿರಲಿಲ್ಲ. ಬದಲಾಗಿ, ಅಂಥ ಟೀಕೆ, ವಿಮರ್ಶೆ ಮತ್ತು ನಿಲುವುಗಳಿಂದ ತನ್ನ ಬೆಳವಣಿಗೆಯೂ ವಿನಾಶವೂ ಸಾಧ್ಯವಿಲ್ಲ ಅನ್ನುವುದನ್ನು ಚಿರಾಯು ಅರ್ಥ ಮಾಡಿಕೊಂಡಿದ್ದ.
ಅದು ಅವನಿಗೆ ಸ್ಪಷ್ಟವಾದದ್ದು ಯಾಮಿನಿ ಜೊತೆಗಿನ ಸಂಬಂಧ ಬಯಲಾದಾಗ. ಆಗಿನ್ನೂ ಅವನಿಗೆ ಜ್ಞಾನಪೀಠ ಬಂದಿರಲಿಲ್ಲ. ಯಾಮಿನಿ ಮತ್ತು ಚಿರಾಯು ಯಾವ ರಗಳೆಯೂ ಬೇಡ ಎಂದುಕೊಂಡು ಉತ್ತರ ಭಾರತ ಪ್ರವಾಸಕ್ಕೆ ಹೋಗಿದ್ದರು. ಅಪರಿಚಿತರ ನಡುವೆ ವ್ಯಕ್ತಿತ್ವ ಕಳೆದುಕೊಂಡು ಕಟ್ಟಾ ಪ್ರೇಮಿಗಳಂತೆ, ಯಾರೂ ಅಲ್ಲದವರಂತೆ ಅಲೆದಾಡುವುದಷ್ಟೇ ಅವರಿಬ್ಬರ ಉದ್ದೇಶವಾಗಿತ್ತು. ಹಾಗೆ ಪ್ರವಾಸ ಹೋದಾಗ ಅಲ್ಲಿ ಆಕಸ್ಮಿಕವಾಗಿ ಸಿಕ್ಕಿದ್ದು ಪತ್ರಕರ್ತ ರಂಜನ್. ಅವನಿಗೆ ಯಾಮಿನಿ ಯಾರೆಂದು ಗೊತ್ತಿರಲಿಲ್ಲ. ಅವಳನ್ನು ತನ್ನ ಅಕ್ಕನ ಮಗಳು ಎಂದು ಪರಿಚಯ ಮಾಡಿಕೊಟ್ಟಿದ್ದ ಚಿರಾಯು. ಅಕ್ಕನ ಮಗಳ ಜೊತೆ ಚಕ್ಕಂದ ಅನ್ನುವ ವರದಿ ಚಿರಾಯು ವಾಪಸ್ಸು ಬರುವ ಹೊತ್ತಿಗೆ ಕಾಯುತ್ತಿತ್ತು. ಚಿರಾಯು ಮತ್ತು ಯಾಮಿನಿ ಜೊತೆಗಿರುವ ಫೋಟೋಗಳೂ ಇದ್ದವು.
ಆ ಸಲ ಮಾತ್ರ ಚಿರಾಯು ಕೆರಳಿದ್ದ. ಆ ಪತ್ರಿಕೆಯ ಮುಂದೆ ಧರಣಿ ಕೂತಿದ್ದ. ಜೊತೆಗೆ ಯಾಮಿನಿಯೂ ಇದ್ದಳು. ಆವತ್ತು ಚಿರಾಯು ಸ್ನೇಹ, ಬಾಂಧವ್ಯ, ಆತ್ಮಸಂಗಾತದ ಕುರಿತು ಮಾತನಾಡಿದ್ದ. ನಮ್ಮಿಬ್ಬರ ಸಂಬಂಧದ ಬಗ್ಗೆ ಯಾರು ಏನು ಬೇಕಾದರೂ ಮಾತಾಡಿಕೊಳ್ಳಬಹುದು. ಅದು ಅವರ ನೀಚತನವನ್ನಷ್ಟೇ ಸೂಚಿಸುತ್ತದೆ. ರಂಜನ್ ಅವನ ಹೆಂಡತಿಯನ್ನು ಎಷ್ಟು ಹಿಂಸಿಸುತ್ತಾನೆ ಅನ್ನುವುದು ನನಗೆ ಗೊತ್ತಿದೆ. ಅದರ ಬಗ್ಗೆ ಮಾತಾಡಿ ಆಕೆಯನ್ನು ನೋಯಿಸುವುದು ನನಗೆ ಇಷ್ಟವಿಲ್ಲ. ವೈಯಕ್ತಿಕ ಬದುಕಿನಲ್ಲಿ ಮಾಧ್ಯಮ ತಲೆಹಾಕುವುದನ್ನು ನಾನು ವಿರೋಧಿಸುತ್ತೇನೆ. ನಮ್ಮಿಬ್ಬರ ನಡುವಿನ ಸಂಬಂಧಕ್ಕೆ ನಾನು ವ್ಯಾಖ್ಯಾನ ಕೊಡಬೇಕಾಗಿಲ್ಲ. ಅದನ್ನು ಯಾರೂ ಪ್ರಶ್ನಿಸುವ ಅಗತ್ಯವೂ ಇಲ್ಲ. ನಾನು ಲೇಖಕನೇ ಹೊರತು ಸಮಾಜ ಸುಧಾರಕ ಏನಲ್ಲ. ನನ್ನ ನಡವಳಿಕೆಯನ್ನು ಯಾರೂ ತಿದ್ದಬೇಕಾಗಿಲ್ಲ, ನನಗೆ ಸಂಸ್ಕಾರ, ಸಂಸ್ಕೃತಿ ಕಲಿಸಬೇಕಾಗಿಲ್ಲ. ನಾನು ಸಜ್ಜನ ಅನ್ನುವ ಕಾರಣಕ್ಕೆ ಯಾರೂ ನನ್ನನ್ನು ಓದಬೇಕಾಗಿಲ್ಲ. ಕಚ್ಚೆ ಹಾಕಿಕೊಂಡು, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು, ಸಂಧ್ಯಾವಂದನೆ ಮುಗಿಸಿ, ಇಡೀ ದಿನ ಜಪ ಮಾಡುತ್ತಾ, ಭಿಕ್ಷಾಟನೆ ಮಾಡಿ ಬದುಕುತ್ತಾ ಕೆಟ್ಟ ಕೃತಿ ಬರೆದರೆ ಯಾರಾದರೂ ಓದುತ್ತಾರಾ? ನಾನು ಚೆನ್ನಾಗಿ ಬರೆಯುತ್ತೇನೆ ಅನ್ನುವ ಕಾರಣಕ್ಕೆ ನನ್ನನ್ನು ಓದುತ್ತಾರೆ. ನನ್ನ ಜೀವನದಲ್ಲಿ ಯಾರೂ ತಲೆ ಹಾಕಬೇಕಾಗಿಲ್ಲ ಎಂದು ರೇಗಿದ್ದ ಚಿರಾಯು. ಅಷ್ಟಕ್ಕೇ ಬಿಡದೇ ಆ ಪತ್ರಿಕೆಯ ಮೇಲೆ ಕ್ರಿಮಿನಲ್ ಕೇಸು ದಾಖಲಿಸಿದ್ದ. ಮೂರು ತಿಂಗಳ ನಂತರ ಪತ್ರಿಕೆ ಕ್ಷಮೆ ಕೇಳಿತ್ತು. ಆದರೆ ನ್ಯಾಯಾಲಯ ಪತ್ರಿಕೆಗಿಂತ ಜಾಸ್ತಿ ಅವನನ್ನು ಹಿಂಸಿಸಿತ್ತು. ಯಾಮಿನಿ ಯಾರು ಅನ್ನುವ ಪ್ರಶ್ನೆಯನ್ನು ಪ್ರತಿವಾದಿ ವಕೀಲ ಪರಿಪರಿಯಾಗಿ ಕೇಳಿ ಚಿರಾಯುವನ್ನು ನೋಯಿಸಿದ್ದ.
ಸುಳ್ಯಕ್ಕೆ ಇಪ್ಪತ್ತೆಂಟು ಕಿಲೋಮೀಟರ್ ಎನ್ನುವ ಬೋರ್ಡು ಕಾಣಿಸುತ್ತಿದ್ದಂತೆ ಶೇಷು ಚಿರಾಯು ಮುಖ ನೋಡಿದ. ಚಿರಾಯು ನಂಗೂ ಹಸಿವಾಗ್ತಿದೆ ಕಣೋ ಅಂದ. ಐದು ನಿಮಿಷದ ನಂತರ ಕಾರು ಸುಬ್ರಹ್ಮಣ್ಯ- ಸುಳ್ಯ ರಸ್ತೆಯಲ್ಲಿರುವ ಪುಟ್ಟ ಹೊಟೆಲೊಂದರ ಮುಂದೆ ನಿಂತಿತು.
ಇನ್ನೈದು ನಿಮಿಷಗಳಲ್ಲಿ ಚಿರಾಯುವಿನ ಮುಂದೆ ಹೊಗೆಯಾಡುವ ನೀರುದೋಸೆಯೂ ಕಾಣೆ ಮೀನಿನ ಸಾಂಬಾರೂ ಪ್ರತ್ಯಕ್ಷವಾಯಿತು. ಚಿರಾಯುವಿಗೆ ಯಾಮಿನಿಯ ತೋಳು ನೆನಪಾಯಿತು.

Wednesday, April 23, 2008

9. ನಿನ್ನ ಹಿಡಿಯೊಳಗಿತ್ತು ನನ್ನ ಬೆರಳು

ಹನ್ನೆರಡೂವರೆಗೆ ಶೇಷು ಬಂದ. ಒಂದು ರಾಶಿ ಪುಸ್ತಕಗಳನ್ನೂ ತಂದಿದ್ದ. ಅದರೊಟ್ಟಿಗೆ ಕಳೆದೊಂದು ವಾರದಲ್ಲಿ ಬಂದಿದ್ದ ಪತ್ರಗಳನ್ನೂ ತಂದಿದ್ದ. ಅವುಗಳನ್ನು ಓದುವ ಉತ್ಸಾಹ ಚಿರಾಯುವಿಗೆ ಇರಲಿಲ್ಲ. ಸುಮ್ಮನೆ ಪತ್ರಗಳನ್ನು ನೋಡುತ್ತಾ ಕುಳಿತವನನ್ನು ಓದುವಂತೆ ಪ್ರೇರೇಪಿಸಿದ್ದು ಆಕ್ಸ್‌ಫರ್ಡ್ ಯೂನಿವರ್ಸಿಟಿಯಿಂದ ಬಂದ ಪತ್ರ.
ಚಿರಾಯುವಿನ ಅವ್ಯಕ್ತ ಕಾದಂಬರಿಯ ಇಂಗ್ಲಿಷ್ ಅನುವಾದವನ್ನು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪಠ್ಯವನ್ನಾಗಿಸಲು ನಿರ್ಧರಿಸಿದೆ. ಅದಕ್ಕೆ ಅನುಮತಿ ಕೊಡಿ ಎಂದು ಸೂಸನ್ ಬರೆದ ಪತ್ರ ಅದು. ಅದರ ಬಗ್ಗೆ ಅವಳು ಆಗಲೇ ಮಾತಾಡಿದ್ದಳು. ಇದು ಅಧಿಕೃತ ಪತ್ರ. ಅದಕ್ಕೆ ಉತ್ತರಿಸಬೇಕು ಅಂತ ಆ ಕ್ಷಣ ಅನ್ನಿಸಲಿಲ್ಲ. ಉತ್ತರಿಸದೇ ಹೋದರೆ ಪ್ರಾಣ ತಿನ್ನುತ್ತಾಳೆ. ಉತ್ತರಿಸದೇ ಇರುವುದೂ ಒಂದು ಉತ್ತರ ಎಂದು ಯಾಕೆ ಯಾರೂ ಭಾವಿಸುವುದಿಲ್ಲ ಎಂದು ಯೋಚಿಸುತ್ತಾ ಉಳಿದ ಪತ್ರಗಳನ್ನು ಹಾಗೇ ಬದಿಗೆ ಸರಿಸಿ ಕುಳಿತ.
ಶೇಷು ಐದಾರು ದಿನಗಳ ಪತ್ರಿಕೆಗಳನ್ನೂ ತಂದಿದ್ದ. ಒಂದೆರಡರಲ್ಲಿ ಚಿರಾಯವಿನ ಬಗ್ಗೆ ಬರೆದಿದ್ದರು. ಚಿರಾಯು ತುಂಬ ಇಷ್ಟಪಡುವ ಹುಡುಗ ರಶೀದ್, ಲೇಖಕ ಮತ್ತು ಏಕಾಂತ ಅನ್ನುವ ಲೇಖನ ಬರೆದಿದ್ದ. ಹೇಗೆ ಚಿರಾಯು ತನ್ನ ಸೃಷ್ಟಿಕ್ರಿಯೆಗೆ ಬೇಕಾಗುಪ ಪರಿಸರವನ್ನು ಕಾದಂಬರಿಯ ಹೊರಗೂ ಒಳಗೂ ಸೃಷ್ಟಿಸಿಕೊಳ್ಳುತ್ತಾನೆ ಎನ್ನುವುದನ್ನು ರಶೀದ್ ವಿವರಿಸಿದ್ದು ಓದುತ್ತಿದ್ದಂತ ನಗುಬಂತು. ಒಂದು ಕಾಲದಲ್ಲಿ ತಾನು ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಿದ್ದೆ ಅಂದುಕೊಳ್ಳುತ್ತಿದ್ದ ಚಿರಾಯು. ಕ್ರಮೇಣ ಅದು ಸುಳ್ಳು ಅನ್ನುವುದು ತನಗೆ ಗೊತ್ತಾಯಿತಲ್ಲ. ಷೇಕ್ಸ್‌ಪಿಯರ್ ಬಾರುಗಳಲ್ಲಿ ಕುಡಿಯುತ್ತಾ, ಜಗಳಾಡುತ್ತಾ ಬರೆಯುತ್ತಿದ್ದ. ಬೋಧಿಲೇರನಿಗೆ ಯಾವ ಧ್ಯಾನಸ್ಥ ಸ್ಥಿತಿಯಿತ್ತು. ಪೋಲೀಸರ ಭಯದಲ್ಲಿ ನಡುಗುತ್ತಾ ಬರೆಯುತ್ತಿದ್ದ ಸಂಸರಿಗೆ ಧ್ಯಾನಸ್ಥರಾಗುವುದು ಸಾಧ್ಯವಿತ್ತಾ?
ಶೇಷು ತಾನು ಕೊಂಡು ತಂದ ಹೊಸ ಶರಟುಗಳನ್ನೂ ಮುಂದಿಟ್ಟು ಹೋಗಿದ್ದ. ಚಿರಾಯುವಿಗೆ ಹೊಸ ಬಟ್ಟೆಗಳನ್ನು ತಂದುಕೊಡುವುದು ಅವನೇ. ಇವತ್ತಿಗೂ ಹೊಸ ಶರ್ಟುಗಳೆಂದರೆ ಚಿರಾಯುವಿಗೆ ಇಷ್ಟ. ತಂದ ತಕ್ಷಣ ಅದನ್ನು ಒಗೆಯದೇ ಹಾಕಿಕೊಳ್ಳಬೇಕು. ಆ ಸಂಭ್ರಮವನ್ನು ತಾನು ಇವತ್ತಿಗೂ ಕಳಕೊಂಡಿಲ್ಲ ಎನ್ನುವಂತೆ ಶೇಷು ತಂದ ಅಷ್ಟೂ ಶರಟುಗಳನ್ನು ನೋಡಿದ. ತಾನು ಸಾವಿರ ರುಪಾಯಿ ಕೊಟ್ಟಿದ್ದರೂ ತನಗೆ ಖುಷಿಯಾಗಲಿ ಎಂದು ಶರ್ಟು ಕೊಂಡುತಂದಿದ್ದಾನೆ. ತಾನು ಸಂತೋಷವಾಗಿದ್ದರೆ ಅವನೂ ಖುಷಿಯಾಗಿರುತ್ತಾನೆ. ತನ್ನನ್ನು ಯಾರಾದರೂ ನೋಡುವುದಕ್ಕೆ ಬಂದರೆ ಖುಷಿಯಾಗಿ ಕಾಫಿ ಮಾಡಿಕೊಡುತ್ತಾನೆ. ಸಂದರ್ಶನಕ್ಕೆ ಬಂದರೆ ಅವನಿಗೆ ಸಂಭ್ರಮ. ತನ್ನ ಬಗ್ಗೆ ಬಂದ ಪತ್ರಿಕಾ ವರದಿಗಳನ್ನು ತಂದುತೋರಿಸುತ್ತಾನೆ. ಕೆಟ್ಟದಾಗಿ ಬರೆದಿದ್ದ ಪೇಪರುಗಳನ್ನು ಬಚ್ಚಿಡುತ್ತಾನೆ. ಆ ಪೇಪರಿನವರು ಫೋನ್ ಮಾಡಿದರೆ ಅವರು ಊರಲ್ಲಿಲ್ಲ ಅನ್ನುತ್ತಾನೆ.
ಯಾಕೋ ಇಷ್ಟು ಶರ್ಟು ತಂದೆ ಕೇಳಿದ ಚಿರಾಯು. ಶೇಷು ಸುಮ್ಮನೆ ನಕ್ಕ. ಅದು ಆಕ್ಷೇಪಣೆ ಅಲ್ಲ ಅನ್ನುವುದು ಅವನಿಗೆ ಗೊತ್ತು. ನಕ್ಕವನು ಅಲ್ಲಿ ನಿಲ್ಲದೆ ಒಳಗೆ ಹೋಗಿ ದೊಡ್ಡ ಗ್ಲಾಸಿನಲ್ಲಿ ಮಜ್ಜಿಗೆ ತೆಗೆದುಕೊಂಡು ಬಂದ. ಅದನ್ನು ಕುಡಿಯುತ್ತಿದ್ದ ಹಾಗೆ ಚಿರಾಯುವಿಗೆ ಮಜ್ಜಿಗೆಯನ್ನು ದ್ವೇಷಿಸುವ ಯಾಮಿನಿ ನೆನಪಾದಳು.
ಎಲ್ಲಾ ಪ್ಯಾಕ್ ಮಾಡು. ಕಾರು ರೆಡಿ ಮಾಡು ಅಂತ ಹೇಳಿ ಚಿರಾಯು ಸ್ನಾನಕ್ಕೆ ಹೋದ. ಶೇಷು ಎಲ್ಲಿಗೆ ಹೊರಡುವುದು, ಯಾಕೆ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುವುದಕ್ಕೂ ಹೋಗಲಿಲ್ಲ. ಅವನು ಚಿರಾಯುವಿಗೆ ಇಷ್ಟವಾಗುವುದು ಅದಕ್ಕೇ. ಎಲ್ಲರಿಗೂ ಉತ್ತರ ಗೊತ್ತಿರುವ, ಮಾಮೂಲು ಉತ್ತರ ಇರುವ ಪ್ರಶ್ನೆಗಳೆಂದರೆ ಚಿರಾಯುವಿಗೆ ಅಲರ್ಜಿ. ಹೇಗಿದ್ದೀರಿ, ಮಗ ಏನ್ಮಾಡ್ತಿದ್ದಾನೆ. ಮಳೆ ಚೆನ್ನಾಗಿದೆಯಾ,. ಮಗಳ ಮದುವೆ ಆಯ್ತಾ, ಅಲ್ರೀ ದೇವೇಗೌಡರಿಗೆ ಏನಾಗಿದೆ, ಹಾಗಾಡ್ತಿದ್ದಾರಲ್ಲ ಮುಂತಾದ ಪ್ರಶ್ನೆಗಳನ್ನು ಚಿರಾಯು ಕೇಳುವುದೂ ಇಲ್ಲ, ಅವಕ್ಕೆಲ್ಲ ಉತ್ತರಿಸುವುದೂ ಇಲ್ಲ. ಅಂಥ
ಪ್ರಶ್ನೆಗಳನ್ನು ಮುಂದಿಟ್ಟಾಗ ನಕ್ಕು ಸುಮ್ಮನಾಗುತ್ತಾನೆ.
ಒಮ್ಮೊಮ್ಮೆ ಅಂಥ ಪ್ರಶ್ನೆಗಳಲ್ಲೇ ಜೀವಂತಿಕೆ ಇದೆಯೇನೋ ಅನ್ನಿಸುತ್ತದೆ. ಸಹಜ ಪ್ರಶ್ನೆಗಳವು. ವಾಟ್ ಡು ಯು ಸೇ ಆಫ್ಟರ್ ಯೂ ಸೇ ಹಲೋ ಎಂಬ ಎರಿಕ್ ಫ್ರಾಮ್ ಪ್ರಬಂಧ ನೆನಪಾಯಿತು. ಸಹಜೀವಿಗಳ ಜೊತೆ ಸಂಪರ್ಕ ಸಾಧಿಸಲು ಇಷ್ಟಪಡದವನನ್ನು ಕಾಡುವ ಪ್ರಶ್ನೆ ಅದಂತೆ. ಬ್ರಿಟಿಷರು ಇರುವುದೇ ಹಾಗೆ. ಮುಂದೇನು ಮಾತಾಡಬೇಕು ಎಂದು ತೋಚದ ಸ್ಥಿತಿ. ಏನು ಮಾತಾಡಿದರೂ ಮಾಮೂಲಾಗುತ್ತದೆ ಅನ್ನುವ ಭಯ. ತಾನು ಒಂದಕ್ಷರ ಬರೆಯುವಾಗಲೂ ಅದರಲ್ಲಿ ಇನ್ನೇನೋ ಇರಬೇಕು ಎಂದು ಬಯಸುತ್ತಿದ್ದ ಕಾಲವೊಂದಿತ್ತಲ್ಲ ಎಂದು ಚಿರಾಯು ನೆನಪಿಸಿಕೊಂಡ.
ಬಿಸಿನೀರು ಕಾದಿತ್ತು. ಆದರೆ ತಣ್ಣೀರೇ ಹಿತ ಅನ್ನಿಸುತ್ತಿತ್ತು. ಅಮ್ಮ ಬಿಸಿನೀರಿದ್ದಾಗಲೂ ತಣ್ಣೀರೇ ಸ್ನಾನ ಮಾಡುತ್ತಿದ್ದಳು. ಎಂಬತ್ತರ ವಯಸ್ಸಲ್ಲೂ ಅವಳಿಗೆ ತಣ್ಣೀರೇ ಇಷ್ಟವಾಗುತ್ತಿತ್ತು. ಉಬ್ಬಸ ಬಂದು, ಗಂಟಲು ಗೊರಗೊರ ಅನ್ನುತ್ತಿದ್ದರೂ ಬಿಸಿನೀರಿನ ಗೋಜಿಗೆ ಹೋದವಳಲ್ಲ. ತಣ್ಣೀರು ಸ್ನಾನ ಕೂಡ ಅವಳ ಪಾಲಿಗೆ ವ್ರತ. ತಣ್ಣೀರಲ್ಲಿ ಬೆಳ್ಳಂಬೆಳಗ್ಗೆ ಬಿಂದು ಜೋ ಜೋ ಶ್ರೀ ಕೃಷ್ಣ ಪರಮಾನಂದಾ... ಎಂದು ಹಾಡುತ್ತಾ ಮಜ್ಜಿಗೆ ಕಡೆಯಲು ಕುಳಿತರೆ ಅರ್ಧ ಗಂಟೆ ಆಕೆಯದೇ ಲೋಕ.
ಅಂಥ ಏಕಾಗ್ರತೆ ತನಗೆ ಸಿದ್ಧಿಸಲಿಲ್ಲ. ಒಂಟಿಯಾಗಿ ಕುಳಿತಾಗಲೂ ಯಾರ್‍ಯಾರೋ ಕದ ತಟ್ಟದೆ ಮನಸ್ಸಿನೊಳಗೆ ಬಂದು ಬಿಡುತ್ತಾರೆ. ಮಾತಿಗೆ ಕೂರುತ್ತಾರೆ. ಮಾತು ಹೊಳೆಯುವುದಿಲ್ಲ. ಅವರೊಂದಿಗೆ ಕಳೆದ ಕ್ಷಣಗಳು ಮಾತ್ರ ನೆನಪಾಗುತ್ತವೆ. ಯಾಮಿನಿಯ ಮುಖ ಕೂಡ ಎಷ್ಟು ಸಾರಿ ಮಸುಕಾಗಿಲ್ಲ. ಯಾಕೆ ಹಾಗಾಗುತ್ತೆ ಅಂತ ಯೋಚಿಸುತ್ತಾ ಚಿರಾಯು ಕನ್ನಡಿ ಮುಂದೆ ಬಂದು ನಿಂತ. ಮಂಜು ಮಂಜು ಮಧ್ಯಾಹ್ನ.
ಶೇಷು ಲಗೇಜನ್ನೆಲ್ಲ ಜೋಡಿಸಿಟ್ಟು ಕಾರು ಒರೆಸುತ್ತಿದ್ದ. ನಂತರ ಎಲ್ಲಾ ಲಗೇಜನ್ನೂ ಕಾರಿನೊಳಗಿಟ್ಟು ಪಕ್ಕದಲ್ಲಿ ಬಂದು ನಿಂತ. ಹೊರಡೋಣವೇ ಅನ್ನುವ ಆಹ್ವಾನ ಅವನು ನಿಂತ ಭಂಗಿಯಲ್ಲೇ ಇತ್ತು. ಚಿರಾಯು ತಲೆಯಾಡಿಸಿದ.
ವಂದನಾ ರಾವ್ ತಿಳಿನೀಲಿ ಬಣ್ಣದ ಫೇಡೆಡ್ ಜೀನ್ಸು ಮತ್ತು ತೆಳ್ಳಗಿನ ಟೀ ಶರ್ಟು ತೊಟ್ಟುಕೊಂಡು ತುಟಿಗೆ ತೆಳುವಾಗಿ ಲಿಪ್‌ಸ್ಟಿಕ್ ಹಚ್ಚಿಕೊಂಡು, ಒಂದೆರಡು ಮುಂಗುರಳನ್ನು ಹಾಗೇ ಹಾರಲು ಬಿಟ್ಟು ಕತ್ತಿನ ಬೆವರನ್ನು ಕರ್ಚೀಫಿನಿಂದ ಒರೆಸಿಕೊಂಡು ಚಿರಾಯುವಿನ ಮನೆ ಅಂಗಳಕ್ಕೆ ಬಂದು ನಿಲ್ಲುವ ಹೊತ್ತಿಗೆ, ಚಿರಾಯು ಮತ್ತು ಶೇಷು ಪ್ರಯಾಣ ಮಾಡುತ್ತಿದ್ದ ಕಾರು ಇಕ್ಕೆಲದಲ್ಲಿ ಹಸಿರು ಗದ್ದೆಯ ನಳನಳಿಸುತ್ತಿದ್ದ ರಸ್ತೆಯಲ್ಲಿ ಸಾಗುತ್ತಿತ್ತು.ಚಿರಾಯು ಹಸಿರನ್ನು ಕಣ್ತುಂಬಿಸಿಕೊಳ್ಳುತ್ತಾ ಯಾಮಿನಿಯ ಬಿಸುಪು ಕೈಯೊಳಗೆ ತನ್ನ ಕೈಯಿಟ್ಟು ನಡೆದ ಬೆಳದಿಂಗಳ ರಾತ್ರಿಯನ್ನು ನೆನಪಿಸಿಕೊಳ್ಳುತ್ತಿದ್ದ.

8. ಬೆಟ್ಟಗಳ ನಡುವೆ ಸಾಗುವ ದಾರಿ ಹಿತವಲ್ಲ

ಏಕಾಂತದಿಂದ, ಮನೆಯಿಂದ ದೂರ ಬರುವುದರಿಂದ, ಗುಂಪಿನಿಂದ ಆಚೆ ಉಳಿಯುವುದರಿಂದ ಬರೆಯುವುದಕ್ಕೆ ಅನುಕೂಲವಾಗುತ್ತದೆ ಅನ್ನುವ ನಂಬಿಕೆ ಚಿರಾಯುವಿಗಿಲ್ಲ. ಗುಂಪಿನಲ್ಲಿದ್ದಾಗ ಒಂಟಿತನವನ್ನು, ಒಂಟಿಯಾಗಿದ್ದಾಗ ಜನಜಂಗುಳಿಯನ್ನೂ ಅವನು ಅನುಭವಿಸಿದ್ದಾನೆ. ಹೀಗೆ, ಬೆಂಗಳೂರಿಂದ ದೂರ ಬಂದು ಕುಳಿತು ಬರೆಯಲು ಯೋಚಿಸಲು ಯತ್ನಿಸಿದಾಗಲೂ ಮುತ್ತಿಕೊಳ್ಳುತ್ತಿದ್ದವರು ಅದೇ ಬೆಂಗಳೂರಿನ ಗೆಳೆಯರು. ನಡುನಡುವೆ ಹಣಿಕಿ ಹಾಕುವ ಬಾಲ್ಯದ ಗೆಳೆಯರು.
ಬರೀ ಗೆಳತಿಯರನ್ನೇ ನೆನಪಿಸಿಕೊಳ್ಳುತ್ತಿದ್ದೇನಲ್ಲ ಅನ್ನಿಸಿ ಚಿರಾಯು ನಕ್ಕ. ತನ್ನ ವಿರೋಧಿಗಳು ತನ್ನ ಬಗ್ಗೆ ಮಾಡಿಕೊಂಡು ಬಂದ ಟೀಕೆ ಅದೊಂದೇ. ಹೆಣ್ಣುಮಕ್ಕಳನ್ನು ಚಿರಾಯು ಜಾಸ್ತಿ ನೆಚ್ಚಿಕೊಳ್ಳುತ್ತಾನೆ. ಪ್ರೀತಿಸುತ್ತಾನೆ. ಅವರಿಗೋಸ್ಕರ ಏನು ಬೇಕಾದರೂ ಮಾಡುತ್ತಾನೆ. ಅವರ ಕೆಟ್ಟ ಕೃತಿಗಳಿಗೆ ಒಳ್ಳೆಯ ಮುನ್ನುಡಿ ಬರೆಯುತ್ತಾನೆ. ಯಾವ್ಯಾವುದೋ ಸಮಾರಂಭದಲ್ಲಿ ನೋಡಿ. ಇವತ್ತು ಬರೀತೀರೋ ಕವಿಗಳ ಪೈಕಿ ನೀವು ಗಮನಿಸಬೇಕಾದ ಹೆಸರು ಮಂಜುಳಾ ದೇವಿ’ ಅಂತ ಒಂದು ಹೇಳಿಕೆ ಕೊಟ್ಟು ಆಕೆಯನ್ನು ಮೆಚ್ಚಿಸುತ್ತಾನೆ. ಆದರೆ ತಾನು ಅವರ ಸೌಂದರ್ಯಕ್ಕೆ ಮಣಿದೋ, ಅವರನ್ನು ಬಳಸಿಕೊಳ್ಳಬೇಕು ಅನ್ನುವ ಉದ್ದೇಶದಿಂದಲೋ ಹಾಗೆ ಮಾಡಿರಲಿಲ್ಲ ಅನ್ನುವುದನ್ನು ಚಿರಾಯು ಹೇಳಿದರೆ ಯಾರೂ ಒಪ್ಪುತ್ತಲೇ ಇರಲಿಲ್ಲ.
ಗಂಡು ತನ್ನ ಅಹಂಕಾರವನ್ನು ಮರೆತು ಒಂದು ಹೆಣ್ಣಿನ ಜೊತೆ ಮಾತ್ರ ಬೆರೆಯಬಲ್ಲ. ಹೆಣ್ಣು ಕೂಡ ಅಷ್ಟೇ. ಆಕೆ ತನ್ನ ಮತ್ಸರವನ್ನು ಬದಿಗಿಟ್ಟು, ಸೌಂದರ್ಯವನ್ನು ಒತ್ತಟ್ಟಿಗಿಟ್ಟು ಗಂಡಸಿನ ಜೊತೆ ಮಾತ್ರ ಬೆರೆಯಬಲ್ಲಳು. ಗೆಳತಿಯ ಜೊತೆಗಿದ್ದಾಗ ನಾನು ನಾನಾಗಿರುತ್ತೇನೆ. ಆರಂಭದಲ್ಲಿ ಅವಳನ್ನು ನಂಬಿಸುವ, ಒಪ್ಪಿಸುವ, ಅವಳಿಗೆ ತಾನು ಅರ್ಹ ಅನ್ನಿಸಿಕೊಳ್ಳುವ ಇರಾದೆಯಿರುತ್ತದೆ ನಿಜ. ಆದರೆ ಕ್ರಮೇಣ ಅದು ಪ್ರೀತಿಯಲ್ಲಿ, ಕಾಮದಲ್ಲಿ, ವಾಂಛೆಯಲ್ಲಿ ಕರಗಿಹೋಗಿ ಇಬ್ಬರೇ ಉಳಿದುಬಿಡುತ್ತೇವೆ. ಇಬ್ಬರಿದ್ದಾಗಲೂ ಒಬ್ಬರೇ ಇರುವಷ್ಟು ನಿಸೂರಾಗಿರುವುದು ಗೆಳತಿಯರ ಜೊತೆ ಮತ್ತು ಮಕ್ಕಳ ಜೊತೆಗಷ್ಟೇ ಸಾಧ್ಯ. ಹೆಣ್ಣಿಗೂ ಹಾಗನ್ನಿಸಿರಬಹುದು. ಪೊಳ್ಳು ಬಿಗುಮಾನಗಳನ್ನು ಸುಳ್ಳು ಘನತೆಗಳನ್ನು ಕಳಚಿಹಾಕಿ ತೊಡಗಿಸಿಕೊಳ್ಳಬಹುದಾದ ಸಂಬಂಧ ಯಾಮಿನಿಯ ಜೊತೆ ಮಾತ್ರ ಸಾಧ್ಯ ಎಂದು ಎಷ್ಟೋ ಸಾರಿ ಚಿರಾಯುವಿಗೆ ಅನ್ನಿಸಿದೆ.
ಕಾಲಿಂಗೆ ಬೆಲ್ ಸದ್ದಾಯಿತು. ಶೇಷು ಮರಳಿರಬೇಕು ಅಂದುಕೊಂಡ. ಅವನು ತರುವ ಪುಸ್ತಕಗಳನ್ನು ಓದುವುದಕ್ಕೆ ಬೇಕಾದ ವ್ಯವಧಾನ ಈಗುಳಿದಿಲ್ಲ ಅನ್ನಿಸಿತು. ಹಳೆಯ ಪುಸ್ತಕಗಳನ್ನು ಓದುವುದರಿಂದ ಏನೂ ಬದಲಾಗುವುದಿಲ್ಲ. ಮತ್ತೆ ನಾವು ಹಳವಂಡಗಳಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಭೂತ ಕಾಲಕ್ಕೆ ಮರಳುವುದು ಜೀವಂತಿಕೆಯ ಲಕ್ಷಣ ಅಲ್ಲ ಅಂದುಕೊಳ್ಳುತ್ತಾ ಚಿರಾಯು ಎದ್ದು ಹೋಗಿ ಬಾಗಿಲು ತೆರೆದ. ಹೊರಗೆ ಅಪರಿಚಿತ ಸುಂದರಿಯೊಬ್ಬಳು ನಿಂತಿದ್ದಳು. ಅವಳ ಹಿಂದೆಯೇ ಒಬ್ಬ ಕರಿಯ ಕೆಮರಾ ಹಿಡಕೊಂಡು ನಿಂತಿದ್ದ.
ತೊಂದರೆ ಕೊಟ್ಟಿದ್ದಕ್ಕೆ ಕ್ಷಮಿಸಿ ಸರ್. ನಿಮ್ಮ ಸಂದರ್ಶನ ಬೇಕಾಗಿತ್ತು ಅಂದಳು ಸುಂದರಿ. ಚಿರಾಯು ಮೌನವಾಗಿ ಅವಳನ್ನೇ ನೋಡಿದ. ರೇಗಬೇಕು ಅನ್ನಿಸಿತು. ರೇಗುವುದರಿಂದ ಯಾವ ಲಾಭವೂ ಇಲ್ಲ. ಅದನ್ನು ಕೂಡ ಸುದ್ದಿ ಮಾಡುತ್ತಾರೆ. ಸಂದರ್ಶನ ನಿರಾಕರಿಸಿದರೂ ಸುದ್ಧಿಯೇ. ಅವಳನ್ನು ಒಳ್ಳೆಯ ಮಾತಿನಿಂದ ಸಾಗಹಾಕುವುದು ಸರಿಯಾದ ದಾರಿ ಅಂದುಕೊಂಡು ಅವಳ ಕಣ್ಣನ್ನೇ ನೋಡುತ್ತಾ ಚಿರಾಯು ಹೇಳಿದ:
ಸಂಜೆ ಹೊತ್ತಿಗೆ ಬನ್ನಿ. ನಿಮ್ಮ ಪ್ರಶ್ನೆಗಳಿದ್ದರೆ ಕೊಟ್ಟು ಹೋಗಿ. ರೆಡಿಯಾಗಿರುತ್ತೇನೆ. ಅಲ್ಲೀತನಕ ನೀವು ಬೇಕಿದ್ದರೆ, ಆ ಬೆಟ್ಟದ ಕೆಳಗಿರುವ ಗೆಸ್ಟ್‌ಹೌಸ್‌ನಲ್ಲಿ ರೆಸ್ಟ್ ತಗೋಬಹುದು’.
ಥ್ಯಾಂಕ್ಯೂ ಅಂದವಳ ಕಣ್ಣಲ್ಲಿ ಅಚ್ಚರಿಯಿತ್ತು. ಇಷ್ಟು ಸುಲಭವಾಗಿ ಸಂದರ್ಶನ ಸಿಗುತ್ತದೆ ಅನ್ನುವ ನಂಬಿಕೆ ಅವಳಿಗೇ ಇದ್ದಿರಲಿಲ್ಲ ಅನ್ನುವುದೂ ಸ್ಪಷ್ಟವಾಯಿತು. ಬೈಯಬಹುದು, ರೇಗಾಡಬಹುದು, ಆಗೋದಿಲ್ಲ ಅಂತ ಖಂಡತುಂಡವಾಗಿ ಹೇಳಿ ಬಾಗಿಲು ಹಾಕಿಕೊಳ್ಳಬಹುದು ಎಂದೆಲ್ಲ ಆಕೆ ಊಹಿಸಿದ್ದಿರಬೇಕು. ಅವಳನ್ನೇ ಸಂಪಾದಕ ಕಳುಹಿಸಿದ್ದೂ ತಾನು ಒಪ್ಪಿಕೊಳ್ಳಲಿ ಅನ್ನುವ ಕಾರಣಕ್ಕೇ ಇರಬೇಕು. ಅಭಿಮಾನ ಸೂಸುವ ಕಣ್ಣುಗಳಿಂದ ತನ್ನನ್ನು ನೋಡುತ್ತಾ ನಿಂತವಳ ಭಾವವೂ ನಟನೆ ಇರಬಹುದು. ಭಂಗಿಯೂ ಪೊಳ್ಳಿರಬಹುದು.
ನಾನು ವಂದನಾ. ವಂದನಾ ರಾವ್’ ಎಂದು ಪರಿಚಯಿಸಿಕೊಂಡಳು ಸುಂದರಿ. ಹೆಣ್ಣನ್ನು ಸುಂದರಿ ಅಂತ ಕರೆಯುವುದನ್ನು ಖಂಡಿಸಿದ ಬೆಂಗಾಲಿ ಕವಿ ಸುಪರ್ಣಾ ದಾಸ್‌ಗುಪ್ತ ನೆನಪಾದಳು. ಆಕೆಯನ್ನು ಮೊದಲ ಬಾರಿಗೆ ನೋಡಿದಾಗ ಚಿರಾಯು ನೀನು ತುಂಬುಸುಂದರಿ’ ಅಂದಿದ್ದ. ಅದಕ್ಕವಳು ತೀರ ಗಂಭೀರವಾಗಿ ನೋಡು ಚಿರಾಯು, ಹೆಣ್ಣನ್ನು ನೋಡಿದ ತಕ್ಷಣ ಸುಂದರಿ ಅಂತ ಗುರುತಿಸುವುದು, ಕರೆಯುವುದು, ಅಂದುಕೊಳ್ಳುವುದು ಸ್ತ್ರೀವಿರೋಧಿ ಚಿಂತನೆ. ಅವಳ ಸತ್ವ ಏನು ಅನ್ನುವುದನ್ನು ನೋಡು. ನನ್ನ ಕವಿತೆಗಳನ್ನು ಮೆಚ್ಚಿಕೋ. ನನ್ನನ್ನು ಸುಂದರಿ ಎಂದು ಕರೆದು ಅವಮಾನಿಸಬೇಡ’ ಅಂದಿದ್ದಳು. ಆಮೇಲೆ ಆ ಸೆಮಿನಾರಿನಲ್ಲಿ ನಾಲ್ಕೂ ದಿನ ಅದೇ ಚರ್ಚೆಯಾಗಿತ್ತು. ಅದನ್ನೇ ರಾತ್ರಿ ಯಾಮಿನಿಗೆ ಹೇಳಿದಾಗ ಆಕೆ ನಾಲ್ಕೈದು ನಿಮಿಷ ನಕ್ಕಿದ್ದಳು. ನಿನಗೆ ಹಾಗೇ ಆಗಬೇಕು ಅಂದಿದ್ದಳು.
ಚಿರಾಯು ಸೆಮಿನಾರ್ ಮುಗಿಸಿ ಬಂದ ನಂತರ ಅದರ ಬಗ್ಗೆ ಯಾಮಿನಿ ಒಂದರ್ಧ ಗಂಟೆ ಮಾತಾಡಿದ್ದಳು. ಸೌಂದರ್ಯ ಅನ್ನುವುದು ಅಸ್ತಿತ್ವದ ಪ್ರಶ್ನೆಯಾ? ಸುಂದರಿ ಅಂತ ಕರೆಯುವುದರಲ್ಲಿ ಏನು ತಪ್ಪಿದೆ? ನಾವು ದೇವಿಯರನ್ನೂ ಸುಂದರಿ ಅಂತ ಹೊಗಳುವುದನ್ನು ರೂಢಿಸಿಕೊಂಡವರು. ಬಂಗಾಲಿಗಳು ಕಾಳಿದೇವಿಯನ್ನು ಏನಂಥ ಹೊಗಳುತ್ತಾರೆ ಕೇಳಬೇಕಿತ್ತು. ನೀನು ಹಾಗೆಲ್ಲ ಸುಮ್ಮನಾಗಕೂಡದು ಚಿರಾಯು. ಜಗಳ ಆಡಬೇಕು. ಕಾಳಿಯಂಥ ಶಕ್ತಿಮಾತೆಯನ್ನೂ ನೀವು ಸುಂದರಿ ಅಂತ ಕರೆಯುತ್ತೀರಲ್ಲ. ಸುಂದರಿ ಸತ್ವಶಾಲಿಯೂ ಆಗಿರಬಾರದು ಅಂತೇನಿಲ್ಲವಲ್ಲ. ಕಣ್ಣಿಗೆ ಕಾಣುವ ಗುಣವನ್ನು ತಾನೇ ತಕ್ಷಣ ಗುರುತಿಸುವುದು. ಅಷ್ಟಕ್ಕೂ ಸುಂದರಿ ಅಂದದ್ದು ಕೇವಲ ಔಪಚಾರಿಕತೆ ಅಷ್ಚೇ. I didn't mean it ಅಂದುಬಿಡಬೇಕಿತ್ತು ಎಂದಿದ್ದಳು. ಅವಳನ್ನು ಅವಮಾನಿಸಬೇಕು ಅಂತ ಚಿರಾಯುವಿಗೂ ಅನ್ನಿಸಿತ್ತು. ಆದರೆ ಆಗ ಧೈರ್ಯ ಬಂದಿರಲಿಲ್ಲ. ಮುಂದೊಂದು ದಿನ ಅವಳ ಕವಿತೆಗಳ ಬಗ್ಗೆ ಬರೆಯುತ್ತಾ ಅವುಗಳನ್ನು ಆಕರ್ಷಕ ಶಬ್ದಗಳ ಜಾಲ ಎಂದು ಕರೆದಿದ್ದ ಚಿರಾಯು. ಸುಪರ್ಣಾ ದಾಸ್‌ಗುಪ್ತಾರ ಕವಿತೆಗಳು ಮದುಮಗಳ ಹಾಗೆ. ಆ ಬೆಳಕು, ಪರಿಸರ ಮತ್ತು ಅಲಂಕಾರದಲ್ಲಿ ಸೊಬಗು ತುಂಬಿಕೊಂಡಂತೆ ಕಾಣುತ್ತದೆ. ಆದರೆ, ಒಮ್ಮೆ ಆ ಅಲಂಕಾರ ಕಳಚಿ, ಸಹಜ ಪರಿಸರದಲ್ಲಿ ತಂದು ನಿಲ್ಲಿಸಿದರೆ ಹಳೇ ನೈಟಿ ಹಾಕಿಕೊಂಡ, ಬಸವಳಿದು ರಕ್ತಹೀನತೆಯಿಂದ ಬಳಲುವ ಬಂಗಾಲದ ಕಾರ್ಮಿಕ ಹೆಣ್ಣುಮಗಳಂತೆ ಕಾಣುತ್ತವೆ. ಬ್ಯೂಟಿಪಾರ್ಲರ್ ಕವಿತೆಗಳವು ಎಂದು ಟೀಕಿಸಿದ್ದ. ಆಗ ಸುಪರ್ಣಾ ಜಗಳಕ್ಕೇ ನಿಂತಿದ್ದಳು. ಚಿರಾಯು ಆಗ ಕೂಡ ಮೌನವಾಗಿಯೇ ಅದನ್ನು ಎದುರಿಸಿದ್ದ. ಆದರೆ ಬ್ಯೂಟಿಪಾರ್ಲರ್ ಕವಿ ಅನ್ನುವ ಹೆಸರು ಅವಳಿಗೆ ಅಂಟಿಕೊಂಡುಬಿಟ್ಟಿತ್ತು.
ನಿಮ್ಮ ಮನೆಯ ಕೆಲವು ಶಾಟ್ಸ್ ತೆಗೆದುಕೊಳ್ಳಲಾ? ನೀವು ಬರೆಯೋ ಜಾಗ, ನಿಮ್ಮ ಲೈಬ್ರರಿ, ಅಡುಗೆ ಮನೆ. ನೀವೇ ಅಡುಗೆ ಮಾಡಿಕೊಂಡು ನಿಮ್ಮ ಬಟ್ಟೆ ನೀವೇ ಒಗೆದುಕೊಳ್ಳುತ್ತಾ ಸ್ವಾವಲಂಬಿಯಾಗಿ ಬದುಕುತ್ತಿದ್ದೀರಿ ಅಂತ ಕೇಳಿದೆ. ಗಾಂಧೀ ಕೂಡ ಹಾಗೆ ಮಾಡುತ್ತಿದ್ದರಲ್ಲವಾ?’ ವಂದನಾರಾವ್ ಕೇಳಿದಳು.
ಸಂಜೆ ಎಲ್ಲಾ ಮಾಡೋಣಂತೆ’ ಎಂದು ತೀರ ಸಹಜವಾಗೆಂಬಂತೆ ಅವಳ ತುಂಬುಗೆನ್ನೆಗಳನ್ನು ತಟ್ಟಿ ತಲೆಯನ್ನೊಮ್ಮೆ ಮುಟ್ಟಿ ಕಳಿಸಿದ ಚಿರಾಯು.
ಅವಳು ಹೋದ ತುಂಬ ಹೊತ್ತಿನ ತನಕ ಆಕೆ ನಿಂತ ಜಾಗ ಘಮಗುಡುತ್ತಿದೆ ಅನ್ನಿಸಿತು ಚಿರಾಯುವಿಗೆ.

7. ರೋಹಿಣಿಯು ಬೆಳಗುವಳು ಸನ್ನಿಧಿಯಲಿ..

ಕುಂದಾಪುರದಿಂದ ಮೂವತ್ತೋ ನಲುವತ್ತೋ ಕಿಲೋಮೀಟರ್ ದೂರದಲ್ಲಿ ಕಮಲಶಿಲೆ. ಕಮಲಶಿಲೆಯಲ್ಲೊಂದು ದೇವಸ್ಥಾನ. ದೇವಸ್ಥಾನದಿಂದ ಆರೇಳು ಮೈಲಿ ದೂರದಲ್ಲೆಲ್ಲೋ ಅವಳ ಮನೆ. ಮನೆಗೆ ನಡೆದುಕೊಂಡೇ ಹೋಗಬೇಕು. ಹಳೆಯ ಕಾಲದ ಉಪ್ಪರಿಗೆಯಿರುವ ಮನೆ. ಅಂಗಳದಲ್ಲಿ ಆರೆಂಟು ಮಾರು ದಾಟಿದರೆ ಅಲ್ಲೊಂದು ದನದ ಕೊಟ್ಟಿಗೆ.
ಆ ಕೊಟ್ಟಿಗೆಯಲ್ಲಿ ಬೆಳ್ಳಿಹಸುಗಳ ಹಾಲು ಕರೆಯುತ್ತಿದ್ದ ಸರಸ್ವತಿಯನ್ನೇ ಚಿರಾಯು ಮೊದಲು ನೋಡಿದ್ದು. ಚೌಕಳಿ ಸೀರೆಯನ್ನು ತೊಡೆಮಟ್ಟ ಎತ್ತಿ, ಕೊಟ್ಟಿಗೆಗೆ ಯಾರೂ ಬರುವುದಿಲ್ಲ ಎಂಬ ನಂಬಿಕೆಯಲ್ಲಿ ಹಾಲು ಕರೆಯುತ್ತಾ ಕೂತಿದ್ದ ಸರಸ್ವತಿಗೆ ಚಿರಾಯು ಬಂದದ್ದು ಗೊತ್ತಾದಾಗಲೂ ಏನೂ ಅನ್ನಿಸಿರಲಿಲ್ಲ. ಆಗಿನ್ನೂ ಚಿರಾಯುವಿಗೆ ಹನ್ನೆರಡೋ ಹನ್ನೊಂದೋ?
ಬಿಂದಿಗೆ ತುಂಬ ಕೆನೆಹಾಲು ಕರೆದುಕೊಂಡು ಬಿಂದಿಗೆ ಹಿಡಿದ ಕೈಯನ್ನೇ ಚಿರಾಯುವಿನ ಕತ್ತಿನ ಸುತ್ತ ಹಾಕಿ ಸೊಂಟಕ್ಕೊತ್ತಿಕೊಂಡು ಮನೆಗೆ ಕರೆದುಕೊಂಡು ಬಂದ ಸರಸ್ವತಿಗೆ ಆಗ ಇಪ್ಪತ್ತನಾಲ್ಕು. ಮಾವನ ಮಗನ ಹೆಂಡತಿ. ಸಗಣಿ ವಾಸನೆ ಹೊಡೆಯುತ್ತಿದ್ದರೂ ಚಿರಾಯುವಿಗೆ ಹಿತವೆನ್ನಿಸಿತ್ತು. ಒಳಗೆ ಕರೆದೊಯ್ದು ಕೂರಿಸಿ ದೋಸೆ ಮಾಡಿ ಅದರ ಮೇಲೆ ಅಡಿಕೆ ಗಾತ್ರದ ಬೆಣ್ಣೆ ಹಾಕಿ ತಿನ್ನುವ ತನಕ ಪ್ರೀತಿಯಿಂದ ನೋಡುತ್ತಾ ಕೂತಿದ್ದು, ರಾತ್ರಿ ಭಯವಾಗುತ್ತೇನೋ ಎಂದು ಮೈದಡವಿ ಕೇಳಿ ತನ್ನ ಹತ್ತಿರವೇ ಮಲಗಿಸಿಕೊಂಡು ಮುಂಜಾವಗಳಲ್ಲಿ ಅವಳೂ ಪುಟ್ಟ ಮಗುವಿನ ಹಾಗೆ ಕಾಣಿಸುತ್ತಾ, ತನ್ನ ತೋಳ ಮೇಲೆ ಮಲಗಿಕೊಂಡು ತಾನೊಬ್ಬ ಗಂಡಸು ಅನ್ನುವ ಭಾವನೆ ಹುಟ್ಟಿಸುತ್ತಾ...
ತಾನು ಗಂಡಸು ಅನ್ನುವ ಭಾವನೆಯನ್ನು ಮತ್ತೆ ಹುಟ್ಟಿಸಿದವಳು ಯಾಮಿನಿಯೇ. ಶರಟಿನ ತೋಳಿನೊಳಗೆ ಕೈ ಹಾಕಿ, ತೋಳುಗಳ ಬಿಸುಪನ್ನು ಸ್ಪರ್ಶಿಸುತ್ತಾ, ತಬ್ಬಿಕೊಂಡಾಗಲೂ ತಬ್ಬಿಕೊಳ್ಳಲಾರದಷ್ಟು ಅಗಾಧ ಎಂಬಂತೆ ನಗುತ್ತಾ, ಸಿಟ್ಟು ಬಂದಾಗ ಮೌನವಾಗಿರುತ್ತಾ, ಬೇಸರದಲ್ಲಿದ್ದಾಗ ಸಂತೈಸುತ್ತಾ, ನಿನಗೆ ನೀನೇ ಸಾಟಿ ಅನ್ನುತ್ತಾ, ಬಸವಳಿದ ಕ್ಷಣಗಳಲ್ಲೂ ಹುರುಪು ತುಂಬುತ್ತಾ, ಚಾಚಿದ ತೋಳಿನ ಮೇಲೆ ರಾತ್ರಿಯಿಡೀ ಮಲಗಿರುತ್ತಾ, ನಿದ್ದೆ ಹೋದಾಗ ನಿದ್ದೆ ಹೋದಂತೆ ನಟಿಸುತ್ತಿದ್ದಾನೆಂದು ತಪ್ಪು ತಿಳಿಯುತ್ತಾ, ನಿದ್ದೆ ಹೋದಾಗಲೂ ಅವನನ್ನೇ ನೋಡುತ್ತಾ ಕೂರುತ್ತಿದ್ದ ಯಾಮಿನಿಯಂಥ ಹೆಣ್ಣನ್ನು ಚಿರಾಯು ಕಂಡಿಲ್ಲ. ಯಾಮಿನಿ ಸಿಗದೇ ಹೋಗಿದ್ದರೆ ಒಂದು ಹಂತದಲ್ಲಿ ತಾನು ಬರೆಯುವ ಚಿಗುರುವ ಸಾಮರ್ಥ್ಯವನ್ನೇ ಕಳೆದುಕೊಂಡು ಬಿಡುತ್ತಿದ್ದೆನೇನೋ ಅನ್ನಿಸಿದಿದ್ದಿದೆ. ಅದೆಲ್ಲ ಸುಳ್ಳು ಕಣೋ, ನೀನು ಯಾರಿಗೋಸ್ಕರವೋ ಬರೆಯುವುದಿಲ್ಲ. ನಿನಗೋಸ್ಕರ ಬರೆಯತ್ತಿ. ಪ್ರತಿಯೊಬ್ಬ ಬರಹಗಾರನೂ ಸ್ವಾರ್ಥಿ. ತನಗೋಸ್ಕರವೇ ಅವನು ಬರೆಯುವುದು. ನನಗದು ಗೊತ್ತು. ಸುಮ್ಮನೆ ನನ್ನನ್ನು ನೆಪವಾಗಿಸಬೇಡ ಅನ್ನುತ್ತಿದ್ದಳು ಯಾಮಿನಿ.
ಯಾಮಿನಿಗೂ ಸರಸ್ವತಿಗೂ ಕೆಲವೊಂದು ಸಾಮ್ಯಗಳಿದ್ದವು. ಸರಸ್ವತಿಗೆ ತುಂಬ ವರುಷ ಮಕ್ಕಳಾಗಿರಲಿಲ್ಲ. ಅವಳ ಗಂಡ ದೇವರಾಯನಿಗೋ ಯಕ್ಷಗಾನದ ಹುಚ್ಚು. ಅಂಬುರುಹದಳನೇತ್ರೆ ದುರ್ಗಾಂಬಿಕೆಯ ಬಲಗೊಂಡು ಭಕ್ತಿಯಳಂಬಿಕಾಸುತ ವಿಘ್ನರಾಜನ ಪಿರಿದು ಸಂಸ್ತುತಿಸಿ, ಅಂಬುನಿಧಿಯಾತ್ಮಜೆಗೆ ಬಲಬಂದು ಅಂಬುಜಾಸನ ವಾಣಿಯರ ಪಾದಾಂಬುಜಕೆ ಪೊಡಮಡುತ ಬಣ್ಣಿಪೆನೇ ಕಥಾಮೃತವ... ಎಂದು ಏರುದನಿಯಲ್ಲಿ ಹಾಡುತ್ತಾ ಹೊರಟನೆಂದರೆ ವಾಪಸ್ಸು ಬರುವುದು ಮಾರನೆಯ ಮುಂಜಾನೆಯೋ ಎರಡು ದಿನ ಕಳೆದೋ. ಅದೇ ಊರಲ್ಲಿ ಚಿರಾಯು ತೆರೆದಷ್ಟೇ ಬಾಗಿಲು ಕತೆ ಓದಿದ್ದು. ಮಳೆಗಾಲದ ಹಗಲು ಕಟ್ಟಿಗೆ ಗೂಡಿನಲ್ಲಿ ಕುಳಿತು ಓದಿಸಿಕೊಂಡ ಆ ಕತೆಯ ವಿವರಗಳು ಚಿರಾಯುವಿಗೆ ಈಗಲೂ ನೆನಪಿದೆ. ಅದನ್ನು ಓದುತ್ತಿದ್ದ ಹಾಗೇ, ಸರಸ್ವತಿಯ ಮೇಲೆ ಅಗಾಧ ಪ್ರೀತಿ ಉಕ್ಕಿಬಂದಿತ್ತು. ದೇವರಾಯ ಅವಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾನೆ. ಹಿಂಸೆ ಕೊಡುತ್ತಿದ್ದಾನೆ ಅನ್ನಿಸಿತ್ತು. ಆ ಹಿಂಸೆಯಿಂದ ಅವಳನ್ನು ಪಾರು ಮಾಡಬೇಕು. ಪಾರು ಮಾಡಿ ದೂರ ಕರೆದುಕೊಂಡು ಹೋಗಬೇಕು. ಜಗತ್ತಿನ ಸಕಲ ಸುಖಗಳೂ ಆಕೆಗೆ ದಕ್ಕುವ ಹಾಗೆ ಮಾಡಬೇಕು.
ಹಾಗೆಲ್ಲ ಅನ್ನಿಸಿದ್ದಿದೆ ಚಿರಾಯುವಿಗೆ.
ದೇವರಾಯನೂ ಸರಸ್ವತಿಗೂ ಜೊತೆಗೆ ಮಲಗಿದ್ದನ್ನು ಚಿರಾಯು ಕಂಡಿರಲೇ ಇಲ್ಲ. ಅವನು ಬಂದಾಗ ತಟ್ಟೆಯಿಟ್ಟು ಬಡಿಸಿ, ಅವನು ಉಂಡ ನಂತರ ತಟ್ಟೆಯೆತ್ತಿ ನೆಲಸಾರಿಸಿ, ಯಾರಿಗೋ ಹೇಳುವಂತೆ ಅವನಿಗೊಂದು ಮಾತು ಹೇಳಿ, ಊರಿಗೆಲ್ಲ ಕೇಳುವಂತೆ ಅವನು ಅದಕ್ಕೆ ಉತ್ತರಿಸಿ ಅಂಬುರುಹದಳನೇತ್ರೆ... ಎಂದು ಹೊರಟು ಬಿಡುವ ಹೊತ್ತಿಗೆ, ಸರಸ್ವತಿ ತಲೆಬಾಗಿಲಿಗೂ ಬರುತ್ತಿರಲಿಲ್ಲ.
ದೇವರಾಯನ ಜೊತೆ ಸರಸ್ವತಿ ಜಗಳ ಆಡಿದಳು ಅನ್ನುವ ಸುದ್ದಿ ಬಂದಾಗ ಚಿರಾಯು ಎಂಟನೇ ಕ್ಲಾಸು ಓದುತ್ತಿದ್ದ. ಸುಮ್ಮನೆ ಸಹಿಸಿಕೊಂಡಿದ್ದ ಸರಸ್ವತಿ ಒಂದು ದಿನ ದೇವರಾಯನಿಗೆ ಕಟ್ಟಿಗೆ ತಗೊಂಡು ಸಾಯುವ ಹಾಗೆ ಬಡಿದುಹಾಕಿದಳಂತೆ ಅಂತ ಅಪ್ಪ ಅಮ್ಮನಿಗೆ ಹೇಳುತ್ತಿದ್ದರು. ಅಮ್ಮ ಒಳ್ಳೇ ಕೆಲಸ ಮಾಡಿದಳು ಅಂತ ಸರಸ್ವತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಳು. ಆ ವಯಸ್ಸಿಗೆ ತಿಳಿದದ್ದು, ಆಮೇಲೆ ಹೊಳೆದದ್ದು, ಮುಂದೆ ಅರ್ಥವಾದದ್ದು ಎಲ್ಲಾ ಸೇರಿ ಚಿರಾಯುವಿನ ಕಣ್ಮುಂದೆ ಒಂದು ಚಿತ್ರ ಮೂಡಿತ್ತು.
ದೇವರಾಯ ಮನೆಯಲ್ಲಿಲ್ಲದ ಒಂದು ರಾತ್ರಿ, ಸರಸ್ವತಿಯ ಮಾವ, ದೇವರಾಯನ ಅಪ್ಪ ಸುಬ್ಬಣ್ಣ ಮನೆಗೆ ಬಂದನಂತೆ. ದೇವರಾಯನಿಗೂ ಸುಬ್ಬಣ್ಣನಿಗೂ ಅಷ್ಟಕ್ಕಷ್ಟೇ. ತಾನು ಕಷ್ಟಪಟ್ಟು ಮಾಡಿಟ್ಟ ತೋಟವನ್ನೆಲ್ಲ ಮೇಳದ ಹಿಂದೆ ತಿರುಗಿ ಹಾಳು ಮಾಡುತ್ತಾನೆ ಅಂತ ಸುಬ್ಬಣ್ಣನಿಗೆ ಸಿಟ್ಟು. ಈ ಮಧ್ಯೆ ಕೆಳಗಿನ ತೋಟವನ್ನು ವಿರೂಪಾಕ್ಷ ನಾಟಕ ಕಂಪೆನಿಯಲ್ಲಿ ಸದಾರಮೆ ಪಾತ್ರ ಮಾಡುವ ನೀಲಾವತಿಗೆ ದೇವರಾಯ ಬರೆದುಕೊಟ್ಟಿದ್ದಾನೆ ಅನ್ನುವ ಸುದ್ದಿಯೂ ಸುಬ್ಬಣ್ಣನ ಕಿವಿಗೆ ಬಿತ್ತು. ಆ ಬಗ್ಗೆ ವಿಚಾರಿಸಿ, ಆಸ್ತಿಯ ಹಕ್ಕು ಪತ್ರ ಕೊಂಡುಹೋಗುವುದಕ್ಕೆಂದೇ ಸುಬ್ಬಣ್ಣ ಬಂದದ್ದು.
ಸುಬ್ಬಣ್ಣನಿಗೆ ಹುಟ್ಟಿದ ಮೊದಲ ಮಗ ದೇವರಾಯ. ಹದಿನೆಂಟಕ್ಕೇ ಮದುವೆಯಾಗಿದ್ದ ದೇವರಾಯ, ಹತ್ತೊಂಬತ್ತಕ್ಕೆಲ್ಲ ತಂದೆಯಾಗಿದ್ದ. ಈಗ ದೇವರಾಯನಿಗೆ ಇಪ್ಪತ್ತೊಂಬತ್ತು. ಸುತ್ತಾಡಿ, ಎಲ್ಲೆಂದರಲ್ಲಿ ಮಲಗಿ, ನಿದ್ದೆಗೆಡಿಸಿಕೊಂಡು ಸದ್ಯಕ್ಕೆ ಬಿಕಾರಿ ಥರ ಆಗಿಬಿಟ್ಟಿದ್ದ ದೇವರಾಯನಿಗಿಂತ ಸುಬ್ಬಣ್ಣನೇ ಗಟ್ಟಿಮುಟ್ಟಾಗಿದ್ದ.
ಆ ರಾತ್ರಿ ಸುಬ್ಬಣ್ಣ ಬರುವ ಹೊತ್ತಿಗೆ ಕಾಲಿಗೇನೋ ಕಚ್ಚಿತ್ತು. ಅದು ಹಾವು ಅಂತ ಸುಬ್ಬಣ್ಣನಿಗೆ ಅನುಮಾನ. ಕಚ್ಚಿದ ತಕ್ಷಣವೇ ಪಂಚೆ ಹರಿದು ಕಾಲಿಗೊಂಡು ಕಟ್ಟು ಕಟ್ಟಿಕೊಂಡೇ ಬಂದಿದ್ದ. ಮನೆಗೆ ಬಂದವನೇ ಬಿಸಿನೀರು ಕೇಳಿ, ಕುದಿಯುವ ಬಿಸಿನೀರನ್ನು ಆ ಗಾಯಕ್ಕೆ ಸುರಿದು ಚಡಪಡಿಸುತ್ತಾ ಕೂತಿದ್ದ.
ಆಮೇಲೆ ಅದು ಹೇಗಾಯಿತು ಏನಾಯಿತು ಅನ್ನುವ ವಿವರಗಳು ಚಿರಾಯುವಿಗೂ ಗೊತ್ತಿಲ್ಲ. ಅವನೊಂದು ತನ್ನ ಕಲ್ಪನೆಯಲ್ಲೇ ಒಂದು ಕತೆಯನ್ನು ಹೆಣೆಯಲು ಯತ್ನಿಸಿ ಸೋತಿದ್ದ. ಆದರೆ, ಚಿರಾಯು ಕೇಳಿದ ಅಪ್ಪ ಹೇಳಿದ ಅಪ್ಪ ಸಮರ್ಥಿಸಿಕೊಂಡ ಕತೆಯ ಪ್ರಕಾರ, ದೇವರಾಯ ಬರುವ ಹೊತ್ತಿಗೆ ಸುಬ್ಬಣ್ಣನ ಎದೆಯ ಮೇಲೆ ಸರಸ್ವತಿ ನಿದ್ದೆ ಹೋಗಿದ್ದಳು.
ಚಿರಾಯು ಹೀಗೆ ಸರಸ್ವತಿ ತನ್ನ ಮಹಾಪ್ರಸ್ಥಾನ ಕಾದಂಬರಿಯ ಪಾತ್ರವಾದದ್ದನ್ನು ನೆನಪಿಸಿಕೊಂಡು, ಅವಳಿದ್ದದ್ದು ಹಾಗೆಯಾ, ತಾನು ತೋರಿಸಿದ್ದೇ ಹಾಗೆಯಾ? ಕಾದಂಬರಿಯ ಮೂಲಕ ತಾನು ಸರಸ್ವತಿಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದೆನಾ? ಸರಸ್ವತಿಯಂಥ ಹೆಣ್ಣುಮಕ್ಕಳಿರಬೇಕು, ಆದರೆ ಅವರು ತಮ್ಮ ಮನೆಯವರಾಗಿರಬಾರದು ಎಂಬ ಭಾವನೆಯಲ್ಲೇ ಅದನ್ನು ಎಲ್ಲರೂ ಓದಿದರಾ?
ಚಿರಾಯು ಯೋಚನೆಗಳ ಭಾರ ಸಾಕಾಗಿದೆ ಎಂಬಂತೆ ಎಡಬಲಕ್ಕೆ ಕಣ್ಣು ಹೊರಳಿಸಿದ. ಶೇಷು ಕಾಣಿಸಿಕೊಳ್ಳಲಿಲ್ಲ. ತಾನೇ ಅವನನ್ನು ಬೆಂಗಳೂರಿಗೆ ಕಳಿಸಿದ್ದೇನೆ ಅನ್ನುವುದು ನೆನಪಾಯಿತು. ತಾನೇ ಯಾಕೆ ಟೀ ಮಾಡಬಾರದು ಎಂದು ಚಿರಾಯು ಅಡುಗೆ ಮನೆಗೆ ಕಾಲಿಟ್ಟ.

6.ಅದರಂತರಾಳದಲಿ ಗುಪ್ತಗಾಮಿನಿಯಾಗಿ..

ಕತೆಗಾರ ಮುಗ್ಧನಾಗಿರಬೇಕು. ಅಜ್ಞಾನಿಯಾಗಿರಬೇಕು. ತರ್ಕಬದ್ಧವಾಗಿ ಯೋಚಿಸಬಲ್ಲ ಸಾಮರ್ಥ್ಯ ಅವನಿಗೆ ಇರಕೂಡದು. ಹುಂಬನೂ ತನಗೆ ಅನ್ನಿಸಿದ್ದನ್ನು ಬರೆಯಬಲ್ಲವನೂ ಆಗಿರಬೇಕು.
ಹೀಗೆ ತನ್ನ ಯೋಚನೆಗಳನ್ನು ತಿದ್ದುತ್ತಾ ಹೋದ ಚಿರಾಯು. ಕೊನೆಗೆ ಆ ಅಸ್ಪಷ್ಟ ಯೋಚನೆಗೊಂದು ನೆಲೆ ಸಿಕ್ಕಿತು. ಲೇಖಕ less informed ಆಗಿರಬೇಕು. ಮಾಹಿತಿಗಳು ಹೆಚ್ಚಾಗುತ್ತಾ ಹೋದ ಹಾಗೆ ಕ್ರಿಯೇಟಿವಿಟಿ ಕಡಿಮೆಯಾಗುತ್ತಾ ಹೋಗುತ್ತದೆ. ತಾನುಂಟೋ ಮೂರು ಲೋಕವುಂಟೋ ಎಂಬಂತೆ ಬರೆಯಬೇಕು. ತನಗಿಂತ ಚೆನ್ನಾಗಿ, ತನಗಿಂತ ಪ್ರಭಾವಶಾಲಿಯಾಗಿ, ಜನಗಿಂತ ಪ್ರಚಾರ ಪಡೆಯಬಲ್ಲಂತೆ ಬರೆಯುವ ಮಾರ್ಕೆಸ್, ಅರುಂಧತಿ ರಾಯ್, ಗಿರೀಶ್ ಕಾರ್ನಾಡ್, ಉಪಮನ್ಯು ಚಟರ್ಜಿ ಮುಂತಾದವರ ನಡುವೆಯೇ ತಾನು ಬರೆಯಬೇಕು. ಅಷ್ಟು ಸಾಲದೆಂಬಂತೆ ಷೇಕ್ಸ್‌ಪಿಯರ್, ಕಾಳಿದಾಸ, ಕಮೂ, ಸಾರ್ತ್, ಎಲಿಯಟ್, ಮಾರ್ಕ್ ಟ್ವೈನ್ ಮುಂತಾದ ಅಸಂಖ್ಯ ಲೇಖಕರಿದ್ದಾರೆ. ಹೀಗೆ ಕನ್ನಡದ ಒಂದು ಹಳ್ಳಿಯಲ್ಲಿ ಕುಳಿತು ಬರೆಯುತ್ತಿರುವ ಹೊತ್ತಿಗೆ ತಾನೊಂದು ಕ್ಷುದ್ರ ಜೀವಿ ಅನ್ನಿಸಿಬಿಟ್ಟರೆ ಏನನ್ನೂ ಸೃಷ್ಟಿಸಲಾರೆ ತಾನು. ತಾನು ಕೂಡ ಅವರೆಲ್ಲರಿಗೆ ಸರಿಸಮನಾದ ಲೇಖಕ. ಅವರೆಲ್ಲರನ್ನೂ ಮೀರಿಸುವಂತೆ ಬರೆದುಬಿಡಬಲ್ಲೆ. ನನಗೆ ಅನ್ನಿಸುತ್ತಿರುವುದು ನನಗಷ್ಟೇ ಅನ್ನಿಸೋದಕ್ಕೆ ಸಾಧ್ಯ. ಆ ವಿಶಿಷ್ಟ ಗ್ರಹಿಕೆ ಇನ್ನಾರಲ್ಲೂ ಇರುವುದಕ್ಕೆ ಸಾಧ್ಯವಿಲ್ಲ. ಕನ್ನಡದ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ನಾನು ಯೋಚಿಸುತ್ತಿದ್ದೇನೆ ಎಂಬ ಅಹಂಕಾರದಲ್ಲೇ ನಾನು ಬರೆಯಬೇಕು.
ಹೀಗೆ ಚಿರಾಯು ಯೋಚಿಸಿದ್ದು ಅದು ಮೊದಲೇನಲ್ಲ. ಆದರೆ, ಬರೆಯಲು ಕುಳಿತಾಕ್ಷಣ ಅವನ ಅಹಂಕಾರವೆಲ್ಲ ಕರಗಿ ಹೋಗಿ ತಾನೊಬ್ಬ ವಿನಯವಂತ ಕತೆಗಾರ ಆಗಿಬಿಡುತ್ತೇನೆ ಅಂತ ಅವನಿಗೆ ಸಂತೋಷವಾಗುತ್ತದೆ. ಆ ವಿನಯವಂತಿಕೆಯೂ ಸುಳ್ಳೇ. ಕತೆಗಾರ ವಿನಯವಂತ ಯಾಕಾಗಿರಬೇಕು. ಅವನ ವಿನಯದಿಂದಲಾಗಲೀ ಅವನ ಅಹಂಕಾರದಿಂದಾಗಲೀ ಒಂದು ಕೃತಿ ಶ್ರೇಷ್ಠವಾಗುವುದಿಲ್ಲ. ವಿನಯವಂತವೆಂಬ ಕಾರಣಕ್ಕೆ ಅದು ಓದಿಸಿಕೊಳ್ಳುವುದಿಲ್ಲ. ಆದರೆ ವಿನಯವೊಂದು ಗುಣವಾಗಿ ತನ್ನಲ್ಲಿ ಉಳಿದುಬಿಡಬಹುದಲ್ಲ.
ಅಷ್ಟಕ್ಕೂ ಅತ್ಯಂತ ಪ್ರಾಮಾಣಿಕವಾಗಿ ಬರೆಯುವುದು ಹೇಗೆ? ಹಾಗೆ ಬರೆಯುವುದಕ್ಕೆ ಅದು ತನ್ನ ಕತೆಯೇ ಆಗಿರಬೇಕಾ? ಅತ್ಯಂತ ಪ್ರಾಮಾಣಿಕ ಕೃತಿ ಎಂದು ಮೆಚ್ಚುಗೆ ಪಡೆದಿದ್ದ ತನ್ನ ಕಾದಂಬರಿ ಮಹಾಪ್ರಸ್ಥಾನ’ದಲ್ಲಿ ಬರುವ ಸುಶೀಲೆಗೂ ತಾನು ಕಂಡ ಸರಸ್ವತಿಗೂ ಎಷ್ಟೊಂದು ವ್ಯತ್ಯಾಸಗಳಿದ್ದವು. ಸರಸ್ವತಿ ಅಷ್ಟೆಲ್ಲ ತೀವ್ರವಾಗಿ ಬದುಕಿದವಳೇ ಅಲ್ಲ. ಆದರೆ ಕಾದಂಬರಿಯಲ್ಲಿ ಸುಶೀಲೆಯಾಗಿ ಸರಸ್ವತಿಗೊಂದು ಮರುಹುಟ್ಟು ಕೊಟ್ಟೆ. ಅವಳನ್ನು ಯಾವುದನ್ನೂ ಒಪ್ಪಿಕೊಳ್ಳದ, ಯಾವುದಕ್ಕೂ ಪ್ರತಿಕ್ರಿಯಿಸದ, ಯಾರನ್ನೂ ಅಷ್ಟು ಸುಲಭವಾಗಿ ತನ್ನೊಳಗೆ ಕರೆದುಕೊಳ್ಳದ ಹೆಣ್ಣಾಗಿ ಚಿತ್ರಿಸಿದ್ದೇ ಆ ಪಾತ್ರಕ್ಕೊಂದು ಘನತೆ ಬಂದುಬಿಟ್ಟಿತು. ತನ್ನನ್ನು ಮಹಿಳಾ ಸಂವೇದನೆಯನ್ನು ಗುರುತಿಸಬಲ್ಲ ಆರ್ದ್ರ ಮನಸ್ಸಿನ ಲೇಖಕ ಎಂದು ಕರೆಯುವಂತೆ ಮಾಡಿದ್ದೂ ಅದೇ ಪಾತ್ರವಲ್ಲವೇ?
ಆದರೆ, ಅದು ಸರಸ್ವತಿಗೆ ಇಷ್ಟವಾಗಿತ್ತಾ? ಅವಳದನ್ನು ಓದಿರಲಿಲ್ಲ. ಓದಿದ ಅವಳ ಮಾವ ಅವಳಿಗೆ ಹೇಳಿದ್ದರು. ಮಹಾಪ್ರಸ್ಥಾನದ ಸುಶೀಲೆಯ ಹಾಗೆ ಬದುಕಬೇಕು ಅನ್ನುವುದು ಆ ಕಾದಂಬರಿ ಓದಿದ ಹಲವರ ಆಸೆಯೂ ಆಗಿತ್ತು.
ಆದರೆ ಸುಶೀಲೆಯ ಕತೆಯನ್ನು ದುರಂತದಲ್ಲಿ ಮುಗಿಸಿದ್ದು ಯಾಕೆ? ತನ್ನ ಗಂಡನ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳುವುದಕ್ಕೆ ಅವಳು ಮಾವನಿಗೆ ತನ್ನನ್ನು ಒಪ್ಪಿಸಿಕೊಂಡಳಾ? ಅಥವಾ ತಾನೊಬ್ಬ ಮಹಾನ್ ಪಂಡಿತ, ತತ್ವಜ್ಞಾನಿ, ವೇದಾಂತಿ, ಎಲ್ಲವನ್ನೂ ಮೀರಿದ ಸನ್ಯಾಸಿ ಅನ್ನುವ ಅವರ ನಂಬಿಕೆಯನ್ನು ಸುಳ್ಳು ಮಾಡುವುದಕ್ಕಾ? ನನ್ನ ಸೌಂದರ್ಯದ ಮುಂದೆ ನಿನ್ನ ನಂಬಿಕೆ, ಆಚರಣೆ, ನಿರ್ಧಾರ, ತಪಸ್ಸು ಎಲ್ಲವೂ ಸುಳ್ಳು. ಈ ಕ್ಷಣದ ಮರ್ದನ ಮಾತ್ರ ಸತ್ಯ ಎಂದು ತೋರಿಸಿಕೊಡುವುದಕ್ಕಾ?
ಚಿರಾಯು ಕಾದಂಬರಿಯಲ್ಲಿ ಆ ಸಾಲುಗಳಿದ್ದವು:
ನಾನು ಬೋರ್ಗರೆಯುವ ನದಿ. ನೀನು ನದಿಯನ್ನು ದಾಟದೇ ಆಚೆ ದಡ ಸೇರಲಾರೆ. ದಡ ಸೇರುತ್ತೇನೆ, ಹೊಸ ನೆಲಕ್ಕೆ ಕಾಲಿಡುತ್ತೇನೆ ಎಂದು ನೀನು ಅಂದುಕೊಂಡಿದ್ದರೆ ನನ್ನನ್ನು ದಾಟಿಯೇ ಸಾಗಬೇಕು. ಬುದ್ಧಿವಂತರು ದೋಣಿಯಲ್ಲಿ ದಾಟುತ್ತಾರೆ, ಸಾವಿನ ಭಯ ಅವರನ್ನೂ ಬಿಟ್ಟಿರುವುದಿಲ್ಲ. ಧೀರರು ಈಜಿಕೊಂಡು ದಾಟುತ್ತಾರೆ. ಅವರಲ್ಲಿ ಸಾವಿನ ಭಯ ಇರುವುದಿಲ್ಲ. ಕೆಲವರು, ನದಿ ಒಣಗಿ ಮೊಣಕಾಲುದ್ದ ನೀರಿದ್ದಾಗ ದಾಟುತ್ತಾರೆ. ಅಂಥವರ ಬಗ್ಗೆ ನನಗೆ ಆಸಕ್ತಿಯಿಲ್ಲ. ನೀರಿನ ಆಕರ್ಷಣೆಯ ಬಗ್ಗೆ ನಿನಗೆ ಗೊತ್ತಿಲ್ಲ ಮನು. ಅದು ಚಕ್ರಸುಳಿಯಾಗಿ ಸೆಳೆಯುತ್ತದೆ. ನೋಡುತ್ತಿದ್ದಂತೆ ಬಳಿಗೆ ಕರೆಯುತ್ತದೆ. ಆ ಮೋಹದಿಂದ ತಪ್ಪಿಸಿಕೊಂಡವರು ಗೆದ್ದೆ ಅಂದುಕೊಂಡಿರುತ್ತಾರೆ, ಸೋತಿರುತ್ತಾರೆ.
ತನ್ನ ಅದುವರೆಗಿನ ಬದುಕನ್ನು ನಿರರ್ಥಕ ಅನ್ನಿಸುವಂತೆ ಬರೆದಿದ್ದ ಸಾಲುಗಳನ್ನು ಸುಶೀಲೆಯ ಮಾವ ಓದಿ ಸಿಟ್ಟಾಗಿದ್ದರು ಅಂತ ಕೇಳಿದ್ದ. ಕಾದಂಬರಿ ಓದಿದ ಬೇರೆ ಯಾರಿಗೂ ಅದು ಸರಸ್ವತಿ ಅಂತ ಗೊತ್ತಾಗುವುದು ಸಾಧ್ಯವೇ ಇರಲಿಲ್ಲ. ಆದರೆ ಸರಸ್ವತಿಯ ಮಾವನಿಗೆ ಗೊತ್ತಾಗಿತ್ತು. ತನ್ನ ರಹಸ್ಯಗಳನ್ನು ಈತ ಒಂದೊಂದಾಗಿ ಬಗೆಯುತ್ತಾ ಹೋಗುತ್ತಾನೆ ಎಂದು ಅವರಿಗೆ ಭಯವಾಗಿತ್ತೇನೋ?
ಆಗಲೇ ತಾನೊಬ್ಬ ಶ್ರೇಷ್ಠ ದಾರ್ಶನಿಕ ಅನ್ನಿಸಿತ್ತು ಚಿರಾಯುವಿಗೆ. ತಾನು ಬರೆದದ್ದರಲ್ಲಿ ಸತ್ಯವೂ ಇರಬಹುದು ಅನ್ನಿಸಿದ್ದು. ಇನ್ನೊಬ್ಬರನ್ನು ನೋಡುತ್ತಾ ಅವರು ಹೀಗೇ ಬದುಕುತ್ತಿದ್ದಾರೆ, ಅವರ ಮನಸ್ಸಿನಲ್ಲಿ ಇಂಥದ್ದೇ ಯೋಚನೆ ಇದೆ, ಅವರು ಇದೇ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಚಿರಾಯು ತನ್ನಲ್ಲೇ ಅಂದುಕೊಳ್ಳುತ್ತಿದ್ದ.
ಹೀಗೆ ಮತ್ತೊಬ್ಬರ ಬದುಕನ್ನು ತನ್ನೊಳಗೇ ಜೀವಿಸುತ್ತಾ ಮತ್ತೊಬ್ಬರ ಆತ್ಮಚರಿತ್ರೆಯ ಭಾಗವಾಗುತ್ತಾ, ತನ್ನ ಚಿಂತನೆಗಳಲ್ಲಿ ತನ್ನದೆಷ್ಟು ಮತ್ತೊಬ್ಬರದೆಷ್ಟು ಅನ್ನುವುದು ತಿಳಿಯದ ಹಾಗೆ ಬದುಕಿದ್ದರಿಂದ ತಾನು ಕಳೆದುಕೊಂಡದ್ದೆಷ್ಟು ಎಂದು ಯೋಚಿಸುತ್ತಾ ಚಿರಾಯು ಎದ್ದು ನಿಂತ.
ಒಳಗೆ ಫೋನು ಅರಚಿಕೊಳ್ಳುತ್ತಿತ್ತು. ಹೋಗಿ ನೋಡಿದರೆ ಊರ್ಮಿಳೆ.
ಆ ಫೋನನ್ನು ನಿರಾಕರಿಸುವುದು ಕೂಡ ತನ್ನನ್ನು ಗಟ್ಟಿಯಾಗಿಸಿಕೊಳ್ಳುವ ವಿಧಾನ ಎಂಬಂತೆ ಚಿರಾಯು ಹೊರಗೆ ಬಂದ. ಎಷ್ಟೋ ಹೊತ್ತಿನ ನಂತರ ಅವನು ಫೋನಿನ ಬಳಿಗೆ ಬಂದಾಗ ಇಪ್ಪತ್ತೆರಡು ಮಿಸ್ಡ್ ಕಾಲ್‌ಗಳಿವೆ ಎಂಬ ಸೂಚನೆಯಿತ್ತು.

5. ಒಲವು ತುಂಬುವುದಿಲ್ಲ, ತುಂಬಿದರೆ ಒಲವಲ್ಲ

ಊರ್ಮಿಳಾ ದೇಸಾಯಿಯ ಜೊತೆ ಚಿರಾಯು ಮಾತಾಡದೇ ತಿಂಗಳುಗಳೇ ಕಳೆದಿದ್ದವು. ಶಿವಮೊಗ್ಗೆಗೆ ಹೋದಾಗಗೆಲ್ಲ ಉರ್ಮಿಳಾ ಜೊತೆಗಿರುತ್ತಿದ್ದಳು. ರಮಿಸುವಂತೆ ಮಾತಾಡುತ್ತಿದ್ದಳು. ತನ್ನ ಒಂದೆರಡು ಕತೆಗಳಲ್ಲಿ ಅವಳೂ ಒಂದು ಪಾತ್ರವಾಗಿ ಬಂದಿದ್ದಾಳೆ ಅನ್ನುವ ಗುಮಾನಿ ಚಿರಾಯುವಿಗಿತ್ತು. ಆದರೆ ಅದು ಅವಳೇನಾ ಅನ್ನುವುದು ಸ್ವಷ್ಟವಾಗಿ ಅವನಿಗೂ ಗೊತ್ತಿರಲಿಲ್ಲ.
ಊರ್ಮಿಳಾ ಎಂದಿನ ಕಕ್ಕುಲಾತಿಯಲ್ಲಿ ಮಾತಾಡಿದಳು. ಅವಳ ದನಿಯಲ್ಲಿ ಪ್ರೀತಿಯಿತ್ತು. ಪ್ರೀತಿ ತೋರಿಕೆಯದೋ ನಿಜವಾದದ್ದೋ ಅಂತ ಹುಡುಕೋದಕ್ಕೆ ಹೋಗಬಾರದು ಚಿರೂ. ಹಾಗೆ ಹುಡುಕುತ್ತಾ ಹೋದಾಗಲೇ ಸಂಘರ್ಷ ಶುರುವಾಗೋದು. ನೀನು ನನ್ನನ್ನು ಮಾತ್ರ ಇಷ್ಟೊಂದು ಪ್ರೀತಿಸುತ್ತಿ ಅಂತ ನಾನಂದುಕೊಂಡಿದ್ದೀನಿ. ನನಗಿಂತ ಜಾಸ್ತಿ ನೀನು ಬೇರೆಯವರನ್ನು ಪ್ರೀತಿಸುತ್ತಲೂ ಇರಬಹುದು. ಈ ಕ್ಷಣಕ್ಕೆ, ನಮ್ಮಿಬ್ಬರ ಸಂಬಂಧಕ್ಕೆ ನನ್ನ ಅನಿಸಿಕೆಯೇ ಸಾಕು ಅಂತ ಒಂದು ರಾತ್ರಿ ಚಿರಾಯುವಿಗೆ ಹೇಳಿದ್ದಳು ಊರ್ಮಿಳಾ. ಅದನ್ನು ಚಿರಾಯು ಗಂಭೀರವಾಗಿ ಪರಿಗಣಿಸಿರಲಿಲ್ಲ.
ತಾನು ತನ್ನೂರಲ್ಲಿದ್ದೇನೆ ಅಂತ ಹೇಳಿದ ತಕ್ಷಣ ಊರ್ಮಿಳಾ ಅತ್ಯುತ್ಸಾಹದಿಂದ ಪ್ರತಿಕ್ರಿಯಿಸುತ್ತಾಳೆ ಮತ್ತು ಬಂದುಬಿಡ್ಲೇನೋ ಅಂತ ಕೇಳ್ತಾಳೆ ಎಂದುಕೊಂಡಿದ್ದ ಚಿರಾಯುವಿಗೆ ನಿರಾಸೆಯಾಯಿತು. ಚಿರಾಯು ಕರೆದಾಗಲೂ ಕೂಡ ಆಕೆ ಹೊರಡುವ ಉತ್ಸಾಹ ತೋರಲಿಲ್ಲ. ನೀನು ಬರೆಯೋದಕ್ಕೆ ಅಂತ ಹೋಗಿದ್ದೀಯ. ಅಲ್ಲಿ ಬಂದು ನಿಂಗೆ ತೊಂದರೆ ಮಾಡೋದಕ್ಕೆ ನಂಗಿಷ್ಟ ಇಲ್ಲ. ಚೆನ್ನಾಗಿ ಬರಿ, ಓದೋದಕ್ಕೆ ಕಾದಿರ್ತೀನಿ. ನಿನ್ನ ಕಾದಂಬರಿ ಓದದೇ ತುಂಬಾ ದಿನ ಆಯ್ತು ಕಣೋ ಅಂತ ಮಾತಾಡಿದ್ದರಲ್ಲೂ ಉರ್ಮಿಳಾ ದೇಸಾಯಿಯ ಆತ್ಮ ಸಿಗಲಿಲ್ಲ ಚಿರಾಯುವಿಗೆ. ಬದಲಾಗಿದ್ದು ಅವಳೋ, ತಾನೋ ಅನ್ನುವುದೂ ಗೊತ್ತಾಗಲಿಲ್ಲ. ಯಾಮಿನಿಯನ್ನು ನೋಯಿಸುವುದಕ್ಕಾದರೂ ಅವಳನ್ನು ಕರೆಸಿಕೊಳ್ಳಬೇಕು ಅನ್ನಿಸಿ ಚಿರಾಯು ಆಹ್ವಾನ ಕೊಟ್ಟ:
ಎರಡು ದಿನದ ಮಟ್ಟಿಗೆ ಬಂದು ಹೋಗು. ಜೊತೆಗೆ ಯಾರಿದ್ದರೂ ಪರವಾಗಿಲ್ಲ. ಆಮೇಲೆ ನಾನು ಚಾತುರ್ಮಾಸಕ್ಕೆ ಕೂತ್ಕೋತೇನೆ. ಕಾದಂಬರಿ ಮುಗಿಸೋ ತನಕ ಯಾರಿಗೂ ಸಿಗೋಲ್ಲ. ಈ ಕಾದಂಬರಿಗೆ ನಿನ್ನ ಸ್ಪೂರ್ತಿಯೂ ಬೇಕು ಊರ್ಮಿ.
ನೋಡ್ತೀನಿ ಕಣೋ. ಈ ಅಪರಾತ್ರಿಯಲ್ಲಿ ನಿರ್ಧಾರ ಮಾಡೋದಕ್ಕೆ ನಂಗಿಷ್ಟ ಇಲ್ಲ. ನಂಗೆ ನೆನಪಾಗೋದು ಕುದುರೆಮುಖದ ರಸ್ತೆಯಲ್ಲಿ ಕಾರು ಕೆಟ್ಟು ನಿಂತ ರಾತ್ರಿ ಎಂದು ಉರ್ಮಿಳಾ ಫೋನಿಟ್ಟಳು. ಆ ಕಾಡ ನಡುವಿನ ನಡುರಾತ್ರಿ ಚಿರಾಯುವಿನ ಕಣ್ಮುಂದೆ ಬಂತು:
ಕುದುರೆಮುಖದಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಅನ್ನುವ ಕೂಗು ಆರಂಭವಾಗಿದ್ದ ದಿನಗಳವು. ಅಲ್ಲೊಂದು ಪ್ರತಿಭಟನಾ ಸಭೆ ಮಾಡುವುದೆಂದು ನಿರ್ಧಾರವಾಗಿತ್ತು. ಬೆಂಗಳೂರಲ್ಲಿ ಪಾರ್ಟಿ ಮುಗಿಸಿ ಚಿರಾಯು ಹೊರಟಾಗ ಏಳೂವರೆ. ಹಾಸನ ಬಿಟ್ಟಾಗ ಹನ್ನೊಂದು. ಬೇಲೂರು ತಲುಪಿದಾಗ ಹನ್ನೆರಡು.
ದಾರಿತಪ್ಪಿತ್ತು ಬೇಲೂರಲ್ಲೋ ಮೂಡಿಗೆರೆಯಲ್ಲೋ ಅನ್ನುವುದು ಚಿರಾಯುವಿಗೆ ನೆನಪಿಲ್ಲ. ಕುದುರೆಮುಖದ ಕಡೆ ಹೋಗುವ ಬದಲು ದಾರಿತಪ್ಪಿ ಕೊಪ್ಪ ರಸ್ತೆಯಲ್ಲಿ ಕಾರು ಸಾಗಿದಂತಿತ್ತು. ಎಷ್ಟೋ ಮೈಲು ಸಾಗಿದ ನಂತರ ಸಿಕ್ಕಿದ್ದು ಜಯಪುರ, ಬಸರೀಕಟ್ಟೆ, ಮೆಣಸಿನಹಾಡ್ಯ.
ಕಾರು ಅಲ್ಲೇ ಕೆಟ್ಟು ನಿಂತದ್ದು.
ಆಗ ಚಿರಾಯುವಿಗೆ ನೆನಪಾದದ್ದು ತೇಜಸ್ವಿಯವರ ನಿಗೂಢ ಮನುಷ್ಯರು. ಅದರಲ್ಲೂ ಹೀಗೆ ರಾತ್ರಿ ಕಾರು ಕೆಟ್ಟು ನಿಲ್ಲುತ್ತದೆ. ಜಗನ್ನಾಥ ಮತ್ತು ಅವನ ಗೆಳೆಯ ಗೋಪಾಲಯ್ಯನ ಮನೆಗೆ ಹೋಗುತ್ತಾರೆ. ಗೋಪಾಲಯ್ಯನ ಮನೆಯಲ್ಲಿ ವಿಚಿತ್ರ ಅನುಭವವಾಗುತ್ತದೆ. ಉಗ್ರಗಿರಿ ನಾಗರಿಕತೆಯನ್ನು ನಾಶ ಮಾಡುವಷ್ಟು ಸಿಟ್ಟಾಗಿ ಕುಸಿಯತೊಡಗುತ್ತದೆ.
ಆ ರಾತ್ರಿ ಕಣ್ಣಿಗೆ ಕಾಣಿಸುತ್ತಿರುವ ಮೇರ್ತಿಗಿರಿ ಉಗ್ರಗಿರಿಯಂತೆ ಕಾಣಿಸಿತ್ತು ಚಿರಾಯುವಿಗೆ. ಪಕ್ಕದಲ್ಲಿ ಸುಸ್ತಾಗಿದ್ದರೂ ಜೀವಂತಿಕೆ ಚಿಮ್ಮುತ್ತಿರುವಂತೆ ಕಾಣಿಸುತ್ತಿದ್ದಳು ಊರ್ಮಿಳೆ. ಕಾರಿನ ಇಂಜಿನು ಕೆಮ್ಮಿ ಕೆಮ್ಮಿ ಕೊನೆಯುಸಿರೆಳೆಯುವ ಹೊತ್ತಿಗೆ ಆಕೆ ಚಿರಾಯುವಿನ ತೋಳಿಗೆ ಅಂಟಿಕೊಂಡಿದ್ದಳು. ಚಿರಾಯು ಅವಳ ಮುಖ ನೋಡಿದ್ದ. ಆ ಮುಖದಲ್ಲಿ ಗಾಬರಿ ಇರಲಿಲ್ಲ. ಬದಲಾಗಿ ತಾವಲ್ಲಿ ಸಿಕ್ಕಿ ಬಿದ್ದದ್ದು ದೈವೇಚ್ಛೆಯೇನೋ ಅನ್ನುವ ನೆಮ್ಮದಿ ಇತ್ತು.
ಇಲ್ಲಿಗೆ ನಾಳೆ ಬೆಳಗ್ಗೆಯ ತನಕ ಯಾವ ವಾಹನಗಳೂ ಬರುವುದಿಲ್ಲ. ಸಮೀಪದಲ್ಲಿ ಯಾವ ಹಳ್ಳಿಯಿದೆಯೋ ಗೊತ್ತಿಲ್ಲ. ಮೆಣಸಿನ ಹಾಡ್ಯ ಎನ್ನುವ ಬೋರ್ಡು ದಾಟಿ ಹದಿನಾರು ಕಿಲೋ ಮೀಟರ್ ಬಂದಿದ್ದೇವೆ. ಲೈಟ್ ಹಾಕಿಕೊಂಡೇ ಇದ್ದರೆ ನಾಳೆ ಹೊತ್ತಿಗೆ ಬ್ಯಾಟರಿ ಕೂಡ ಡೆಡ್ ಆಗುತ್ತದೆ. ಆಮೇಲೆ ಕಾರು ಸ್ಟಾರ್ಟ್ ಮಾಡುವುದು ಕಷ್ಟ. ಈ ಕತ್ತಲೆಗೆ ನೀನು ಹೆದರಿಕೊಳ್ಳುವುದಿಲ್ಲ ತಾನೇ’ ಎಂದು ಕೇಳಿದ್ದ ಚಿರಾಯು. ಅವನಿಗೆ ಹೆದರಿಕೆಯಾಗಿತ್ತು. ಸಿಟ್ಟಿಗೆದ್ದ ಒಂಟಿ ಸಲಗ ತನ್ನ ಕಾರನ್ನು ಅಪ್ಪಚ್ಚಿ ಮಾಡುತ್ತದೆ ಅನ್ನುವ ಭಯಕ್ಕಿಂತ ಹೆಚ್ಚಾಗಿ, ಕುದುರೆಮುಖ ಅರಣ್ಯವಾಸಿಗಳು ತಮ್ಮನ್ನು ಕೊಂದು ಹಾಕಿ, ತಮ್ಮಲ್ಲಿದ್ದುದನ್ನು ದೋಚಬಹುದು. ಊರ್ಮಿಳೆಯನ್ನು ಹೊತ್ತೊಯ್ಯಬಹುದು ಅನ್ನುವ ಆತಂಕವಿತ್ತು. ಅಂಥ ಯಾವ ಆತಂಕವೂ ಇಲ್ಲದವಳಂತೆ ಊರ್ಮಿಳೆ ಕಾರಿನ ಲೈಟ್ ಆರಿಸಿದ್ದಳು. ಮರುಕ್ಷಣದಲ್ಲೇ ಅವಳ ಕೈ ಚಿರಾಯುವಿನ ಆತ್ಮದ ಹುಡುಕಾಟದಲ್ಲಿತ್ತು.
ಅದು ಸಾವಿನ ಭಯವೋ ಅನ್ನುವುದು ಆ ಕ್ಷಣ ಚಿರಾಯುವಿಗೆ ಹೊಳೆದಿರಲಿಲ್ಲ. ಅಷ್ಟೇ ಅಲ್ಲ, ಅದೇನು ಅನ್ನುವುದು ಅವನಿಗೆ ಇವತ್ತಿಗೂ ಅರ್ಥವಾಗಿರಲಿಲ್ಲ. ತನ್ನ ದೇಹದ ತುಂಬ ಅಂಡಲೆದ ಊರ್ಮಿಳೆಯ ಸ್ಪರ್ಶಕ್ಕೆ ಅವನು ಸ್ಪಂದಿಸಿರಲೇ ಇಲ್ಲ. ತನಗೊಂದು ದೇಹವಿದೆ. ಅದರ ಮೂಲಭೂತ ಕರ್ತವ್ಯ ಮರುಸೃಷ್ಟಿ. ನಶ್ವರ ದೇಹ ಮತ್ತೊಂದು ಜೀವದ ಸೃಷ್ಟಿಗೆ ಕಾರಣವಾಗಬೇಕು ಎಂಬುದನ್ನು ಮರೆತಂತೆ ವರ್ತಿಸಿದ್ದು ಅವನಿಗೆ ಅಚ್ಚರಿ ತಂದಿತ್ತು. ಊರ್ಮಿಳೆ ಅವನ ಕೈಯನ್ನು ಬರಸೆಳೆದುಕೊಂಡು ತನ್ನೆದೆಗೆ ಒತ್ತಿಕೊಂಡಾಗ ಅವನಿಗೆ ನೆನಪಾದದ್ದು ಕಾಡುಕೋಣ. ಅಂಥದ್ದೇ ಕಾಡಲ್ಲಿ ಗೆಳೆಯ ಪೂವಯ್ಯನನ್ನು ತಿವಿದು ಕಾಲಲ್ಲಿ ಹೊಸಕಿಹಾಕಿದ ಕಾಡುಕೋಣ.
ಆ ರಾತ್ರಿ ನಿಷ್ಕ್ರಿಯನಂತೆ ಮಲಗಿಬಿಟ್ಟಿದ್ದ ಚಿರಾಯು. ಯಾವ ಸುಂದರಿಯೂ ತನ್ನನ್ನು ಬಡಿದೆಬ್ಬಿಸಲಾರಳು. ತನಗೆ ಸೃಷ್ಟಿಸುವ ಸುಖಿಸುವ ಸುಖಿಸಿ ಸೃಷ್ಟಿಸುವ ಸಾಮರ್ಥ್ಯ ತೀರಿಹೋಗಿದೆ ಅನ್ನಿಸಿಬಿಟ್ಟಿತ್ತು. ಊರ್ಮಿಳೆಯ ಅಂಗೈ ತನ್ನ ಕಿಂಕರ್ತವ್ಯವಿಮೂಢ ಅಂಗದನನ್ನು ಸ್ಪರ್ಶಿಸಿದಾಗಲೂ ಚಿರಾಯುವಿಗೆ ಮುಟ್ಟಿಸಿಕೊಂಡ ಭಾವ ದಕ್ಕಲಿಲ್ಲ. ತಾನು ಸೋತುಬಿಟ್ಟೆ ಅನ್ನಿಸಿರಲಿಲ್ಲ. ಅವಮಾನ ಅನ್ನಿಸಿರಲಿಲ್ಲ. ಅವಳೇನು ಅಂದುಕೊಳ್ಳುತ್ತಾಳೋ ಅನ್ನುವ ಆತಂಕ ಇರಲಿಲ್ಲ.
ಸಾವನ್ನು ಗೆದ್ದಿದ್ದನಲ್ಲವೇ ಆ ದಿನ ಅಂತ ಈ ಕ್ಷಣ ಅನ್ನಿಸಿತು. ಆವತ್ತು ಊರ್ಮಿಳೆಗೆ ಏನನ್ನಿಸಿರಬೇಕು. ಆಕೆಗೆ ತಾನು ನಿಷ್ಪ್ರಯೋಜಕಿ ಅನ್ನಿಸಿರಬಹುದೇ? ತನ್ನ ಸಾನ್ನಿಧ್ಯ ಈತನನ್ನು ಅರಳಿಸಲಾರದು ಅನ್ನಿಸಿ ಅವಳಿಗೆ ಅವಳ ಬಗ್ಗೆಯೇ ಬೇಸರ ಮೂಡಿರಬಹುದೇ? ಅವಳು ನನ್ನನ್ನು ಹೀನಾಯವಾಗಿ ಕಂಡಳೇ ಅಥವಾ ತನ್ನ ಕುರಿತೇ ಕೀಳರಿಮೆಯಿಂದ ನರಳಿದಳೇ? ಮಿಲನದಲ್ಲಿ ಯಾರು ಮೇಲು, ಯಾರು ಕೀಳು? ಧುಮುಕಲಾರದ ಗಂಡೇ, ಆಳವಿಲ್ಲದ ಹೆಣ್ಣೇ? ಬೋರ್ಗರೆಯಲಾರದ ಕಡಲೇ, ಸೆಳೆದುಕೊಳ್ಳದ ದಡವೇ? ಮೊಳಕೆಯೊಡೆಯಲಾರದ ಬೀಜವೇ? ಅದಕ್ಕೆ ನೆರವಾಗದ ನೆಲವೇ?
ತಾನೀಗ ಆವತ್ತಿನ ಹಾಗೇ ಇದ್ದೇನಲ್ಲ? ಯಾಮಿನಿಯ ಮೇಲಿನ ಸಿಟ್ಟಿಗೆ ಊರ್ಮಿಳಾಳನ್ನೇನೋ ಅಹ್ವಾನಿಸಿದ್ದಾಯಿತು. ಊರ್ಮಿಳಾ ಬಂದುಬಿಟ್ಟಿದ್ದರೆ ತಾನು ಅವಳನ್ನು ಹೇಗೆ ಸಂತೈಸಬಹುದಿತ್ತು? ಅವಳಿಗೆ ಏನು ಕೊಡಬಹುದಾಗಿತ್ತು? ಕನಿಷ್ಠ ಅವಳು ಕೊಟ್ಟದ್ದನ್ನು ಸ್ವೀಕರಿಸುವ ಶಕ್ತಿಯಾದರೂ ತನ್ನಲ್ಲಿತ್ತಾ?
ಶೇಷು ಹೆಗಲಿಗೊಂದು ಚೀಲ ಸಿಕ್ಕಿಸಿಕೊಂಡು ಬಂದು ಮುಂದೆ ನಿಂತ. ಅವನು ಹೊರಡುವ ಹೊತ್ತಾಗಿತ್ತು. ಬರುತ್ತಾ ವಿಸ್ಕಿ ತರಬೇಕಾ ಕೇಳಿದ.
ಸಣ್ಣ ಸಣ್ಣ ಪ್ರಶ್ನೆಗಳೇ ಉತ್ತರಿಸಲಾಗದಷ್ಟು ಕಠಿಣವಾಗಿರುತ್ತವಲ್ಲ ಅನ್ನಿಸಿ ಚಿರಾಯು ತಲೆಯಾಡಿಸಿದ. ಶೇಷು ಅದನ್ನು ಹೇಗೆ ಬೇಕಿದ್ದರೂ ಸ್ವೀಕರಿಸಲಿ ಅಂದುಕೊಂಡು ಜೋಬಿನಿಂದ ಸಾವಿರ ರುಪಾಯಿ ತೆಗೆದು ಅವನ ಕೈಗಿಟ್ಟ.

Monday, March 24, 2008

4. ಅಲೆ ಬಂದು ಕರೆಯುವುದು ನಿನ್ನೊಲುಮೆ ಅರಮನೆಗೆ

ಆ ರಾತ್ರಿ ಚಿರಾಯುವಿಗೆ ನಿದ್ದೆ ಬರಲಿಲ್ಲ.
ಶೇಷುವಿಗೆ ಅರ್ಧ ಗಂಟೆಗೊಂದು ಟೀ ಮಾಡಿಕೊಡುವಂತೆ ಹೇಳಿ, ಬಾಲ್ಕನಿಗೆ ಬಂದು ಕುಳಿತುಕೊಂಡ. ಆರಾಮ ಖುರ್ಚಿಯಲ್ಲಿ ಕೂತವನಿಗೆ ನೆನಪಾದದ್ದು ಅಪ್ಪ. ಇದೇ ಹಳ್ಳಿಯ ರಂಗನಾಥೇಶ್ವರನ ದೇವಾಲಯದಲ್ಲಿ ಅರ್ಚಕ, ಮೊಕ್ತೇಸರ ಎಲ್ಲವೂ ಆಗಿದ್ದ ಸಿಡುಕು ಮೋರೆಯ ಅಪ್ಪ. ಅಪ್ಪ ದೇವರ ಹತ್ತಿರವೂ ಹಾಗೇ ಸಿಡುಕುತ್ತಿದ್ದರಾ, ಅವರಿಗೂ ದೇವರಿಗೂ ಸಮಾನ ಮಾಧ್ಯಮ ಏನಿತ್ತು. ಯಾರೋ ಕಲಿಸಿಕೊಟ್ಟ ಮಂತ್ರಗಳಿಂದ ದೇವರನ್ನು ಒಲಿಸಿಕೊಳ್ಳಬಲ್ಲೆ ಅನ್ನುವ ಅಹಂಕಾರ ಅವರಲ್ಲಿತ್ತಾ. ಅಥವ ಅದೊಂದು ವೃತ್ತಿ ಅಂದುಕೊಂಡು ಅವರು ಪೂಜೆ ಮಾಡುತ್ತಿದ್ದರಾ.
ಚಿರಾಯುವಿಗೆ ಅಂಥ ಪ್ರಶ್ನೆಗಳು ಹುಟ್ಟತೊಡಗಿದ ಹೊತ್ತಿಗೆ ಅಪ್ಪನ ಜೊತೆ ಮಾತಾಡಬೇಕು ಅನ್ನಿಸಿರಲಿಲ್ಲ. ಅವರು ಪ್ರಶ್ನೆಗಳ ವಿರೋಧಿ. ಪ್ರಶ್ನೆ ಕೇಳುವುದು ಅಪರಾಧ ಮತ್ತು ಅನಗತ್ಯ ಎಂಬಂತೆ ವರ್ತಿಸುತ್ತಿದ್ದವರು. ಹೀಗಾಗಿ ಯಾವ ಪ್ರಶ್ನೆಗೂ ಅವರು ಉತ್ತರಿಸುತ್ತಿರಲೂ ಇಲ್ಲ. ತನ್ನ ವಿಚಾರದಲ್ಲಿ ಅವರು ಕೊಂಚ ಉದಾರವಾಗಿಯೇ ವರ್ತಿಸಿದರು ಅಂತ ಆಗಾಗ್ಗೆ ಚಿರಾಯುವಿಗೆ ಅನ್ನಿಸುವುದುಂಟು. ತನಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅಪ್ಪನ ಕಾಲಿಗೆ ಬೀಳಬೇಕು, ಪ್ರಶಸ್ತಿಯನ್ನು ರಂಗನಾಥೇಶ್ವರ ದೇವಸ್ಥಾನಕ್ಕೆ ಒಯ್ದು ಪೂಜೆ ಮಾಡಿಸಬೇಕು ಅಂತ ತೀವ್ರವಾಗಿ ಅನ್ನಿಸಿತ್ತು. ಹಾಗೆ ಮಾಡಿದ್ದರೆ ದೊಡ್ಡ ವಿವಾದವಾಗುತ್ತಿತ್ತು. ಹಾಗಂತ ತಾನು ಅನ್ನಿಸಿದ್ದನ್ನು ಮಾಡದೇ ಬಿಟ್ಟವನಲ್ಲ. ಆದರೆ ಅಪ್ಪನ ಹತ್ತಿರ ಪ್ರಶಸ್ತಿ ಬಂದ ವಿಚಾರ ಹೇಳಿದಾಗ ಅವರು ಸಂತೋಷಪಟ್ಟಂತೇನೂ ಕಾಣಿಸಲಿಲ್ಲ.
ಅಪ್ಪ ತಾನು ಬರೆದದ್ದನ್ನು ಓದಿಯೇ ಇಲ್ಲ ಅಂದುಕೊಂಡಿದ್ದ ಚಿರಾಯು. ಆದರೆ ಅಪ್ಪ ಎಲ್ಲವನ್ನೂ ಓದುತ್ತಾರೆ ಕಣೋ, ಓದಿಲ್ಲದ ಹಾಗೆ ನಟಿಸುತ್ತಾರೆ. ನಿನ್ನ ಮೇಲೆ ಅವರಿಗೆ ಒಳಗೊಳಗೇ ಹೆಮ್ಮೆ, ಅಭಿಮಾನ ಎಲ್ಲ ಇದೆ. ಆದರೆ ಅದನ್ನು ಹೊರಗೆ ತೋರಿಸಿಕೊಳ್ಳಲು ಅವರ ಹಮ್ಮು ಬಿಡುವುದಿಲ್ಲ. ಗೊರಟಿರುವ ಕಾಡು ಮಾವಿನಕಾಯಿಯಂಥ ಸ್ವಭಾವ ಅವರದು. ಮಾತೆಲ್ಲ ನಾರು ನಾರು. ಮೇಲ್ನೋಟಕ್ಕಷ್ಟೇ ಒರಟರು ಅಂತ ಅಮ್ಮ ಒಂದೆರಡು ಸಾರಿ ಚಿರಾಯುವಿನ ಸಮಾಧಾನಕ್ಕೆ ಹೇಳಿದ್ದಿದೆ. ನಿಮ್ಮ ಮಗನಿಗೆ ಅತ್ಯಂತ ಚಿಕ್ಕ ವಯಸ್ಸಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ ಅಂತ ಶಾಮಣ್ಣ ಮೇಷ್ಟ್ರು ಹೇಳಿದಾಗ ಅಪ್ಪ ನಗಲೂ ಇಲ್ಲವಂತೆ. ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದು ಬಿಟ್ಟಿದ್ದರಂತೆ. ನಮ್ಮ ಯಾವ ಸಾಧನೆಯೂ ಅವರಿಗೆ ಸಂತೋಷ ಕೊಡೋದಿಲ್ಲ ಕಣೋ. ಅಮ್ಮ ಅವರಿಂದ ಸುಖಪಟ್ಟಿದ್ದು ಅಷ್ಟರಲ್ಲೇ ಇದೆ ಎಂದು ಅಕ್ಕ ಸರಸ್ವತಿ ಆಗಾಗ ಹೇಳಿ ಕಣ್ಣೀರು ಹಾಕುವುದುಂಟು.
ಚಿರಾಯು ಅದರಿಂದೇನೂ ತಲೆಕೆಡಿಸಿಕೊಂಡಿರಲಿಲ್ಲ. ಅಪ್ಪನ ಗುಣದಲ್ಲಿ ಒಂದಂಶ ತನಗೂ ಬಂದಿದೆಯೇನೋ ಅಂತಲೂ ಅವನಿಗೆ ಆಗಾಗ ಅನ್ನಿಸಿದ್ದುಂಟು. ತಾನೂ ಕೂಡ ಬೇರೆಯವರ ಬಗ್ಗೆ ಅಷ್ಟಾಗಿ ಚಿಂತೆ ಮಾಡಿದವನೇ ಅಲ್ಲ. ತನ್ನ ಪ್ರೀತಿ, ವಾತ್ಸಲ್ಯ, ಆತ್ಮೀಯತೆ, ಸಾಂತ್ವನ ಎಲ್ಲವೂ ಒಳಗಿನಿಂದ ಹುಟ್ಟಿದ್ದಾಗಿರದೇ, ಎಷ್ಟೋ ಸಂದರ್ಭದಲ್ಲಿ ಬರೀ ತೋರಿಕೆಯದಷ್ಟೇ ಆಗಿತ್ತಲ್ಲ ಅಂತ ಯೋಚಿಸುತ್ತಾನೆ ಚಿರಾಯು.
ಸಾಹಿತ್ಯದಲ್ಲಿ ಆದದ್ದೂ ಅದೇ. ಇನ್ನೊಬ್ಬರ ಕೃತಿಯನ್ನು ಮೆಚ್ಚಿ ಮಾತಾಡುವಾಗಲೂ ಅಲ್ಲಿ ತನ್ನ ಪ್ರತಿಭೆ, ಪಾಂಡಿತ್ಯವೇ ಕಾಣಬೇಕು ಎಂಬಂತೆ ಮಾತಾಡುತ್ತಿದ್ದ ಚಿರಾಯು. ಹೀಗಾಗಿ ತಾನು ಯಾರ ಬಗ್ಗೆ ಮೆಚ್ಚಿ ಮಾತಾಡಿದರೂ ಅಲ್ಲಿ ಕಾಣಿಸುತ್ತಿದ್ದದ್ದು ತಾನು ಮಾತ್ರ. ತನ್ನ ಸಮಕಾಲೀನರನ್ನೋ ತನಗಿಂತ ಪ್ರತಿಭಾವಂತರನ್ನೋ ಕುರಿತು ಬರೆದಾಗ ಕೂಡ ಓದುಗರು ಚಿರಾಯು ಎಷ್ಟು ಚೆನ್ನಾಗಿ ಬರೆಯುತ್ತಾನೆ ಎಂದು ಹೊಗಳುತ್ತಿದ್ದರೇ ವಿನಾ, ತಾನು ಸೂಚಿಸಿದ ಪದ್ಯವನ್ನು ಓದುತ್ತಿರಲಿಲ್ಲ ಎಂದು ಗೊತ್ತಾದದ್ದೇ ತನಗೆ ಕಾಲಜ್ಞಾನಿಯ, ಪ್ರವಾದಿಯ ಪಟ್ಟಕ್ಕೇರಿದಷ್ಟು ಸಂತೋಷವಾಗಿತ್ತಲ್ಲ. ತನ್ನ ಮಾತುಗಳು ಪ್ರವಾದಿಯ ಮಾತುಗಳಲ್ಲ, ದಾರ್ಶನಿಕನದು ಎಂಬಂತೆ ಸ್ವೀಕರಿಸುತ್ತಿದ್ದವರ ಸಾಲೂ ದೊಡ್ಡದಿತ್ತು.
ಹಳೆಯದರಿಂದ ಕಳಚಿಕೊಂಡು, ತಾನು ಇದುವರೆಗೆ ಬರೆದದ್ದರ ನೆರಳು ಕೂಡ ಬೀಳದಂತೆ ಬರೆಯಬೇಕು ಎಂದು ಕೂತವನಿಗೆ ಮತ್ತೆ ಮತ್ತೆ ಇದೆಲ್ಲ ಯಾಕೆ ನೆನಪಾಗುತ್ತವೆ ಎಂದು ಗೊತ್ತಾಗದೇ, ಚಿರಾಯು ಚಡಪಡಿಸಿದ. ಶೇಷು ತಂದಿಟ್ಟ ಮೂರನೇ ಟೀ ತಣ್ಣಗಾಗುತ್ತಿತ್ತು. ತಾನೇ ಬರೆದದ್ದನ್ನು ಮತ್ತೊಮ್ಮೆ ಓದಬೇಕು ಅನ್ನಿಸಿತು. ಹಾಗೆ ಓದುವ ಮೂಲಕ ಅದರಿಂದ ಬಿಡುಗಡೆ ಪಡೆಯುವುದು ಸಾಧ್ಯವಾದೀತೇನೋ. ತನ್ನ ಆರಂಭದ ಕತೆಗಳಾಗಲೀ, ಕವಿತೆಗಳಾಗಲೀ ತನಗೆ ನೆನಪಿಲ್ಲ. ಅವ್ಯಕ್ತ ಕಾದಂಬರಿಯಲ್ಲಿ ಬರುವ ವಿಧವೆಯ ಪಾತ್ರದ ಬಗ್ಗೆ ಸುಶೀಲ್ ಸಹಾನಿ ಮೆಚ್ಚಿ ಮಾತಾಡುತ್ತಿದ್ದ. ಆ ಪಾತ್ರದ ಚಹರೆಯೇ ಮರೆತುಹೋಗಿದೆ.
ಚಿರಾಯು ಶೇಷುವನ್ನು ಕರೆದು ನಾಳೆ ಬೆಳಗ್ಗೆ ಬೆಂಗಳೂರಿಗೆ ಹೋಗಿ, ತನ್ನ ಅಷ್ಟೂ ಪುಸ್ತಕಗಳನ್ನು ತಂದುಬಿಡುವಂತೆ ಸೂಚಿಸಿದ. ಹೋಗಿ ಬರುವುದಕ್ಕೆ ಒಂದು ದಿನವಾಗುತ್ತದೆ ಎಂದು ಆತಂಕಗೊಂಡ ಶೇಷುವಿಗೆ, ಏನೂ ಪರವಾಗಿಲ್ಲ. ನಾನೇ ಅಡುಗೆ ಮಾಡಿಕೊಳ್ಳುತ್ತೇನೆ ಎಂದು ಭರವಸೆ ಕೊಟ್ಟ. ಯಾವುದಕ್ಕೂ ಒಂದಷ್ಟು ಬ್ರೆಡ್ಡು ಮೊಟ್ಟೆ ತಂದಿಟ್ಟಿರು. ಹಣ್ಣು ಸೌತೆಕಾಯಿಯೂ ಇರಲಿ ಎಂದ. ಶೇಷು ತಲೆಯಾಡಿಸಿ ಹೊರಟು ಹೋದ.
ಬದಕುವ ಮೂಲಕ ಬದುಕಿನಿಂದ ಬಿಡುಗಡೆ ಪಡೆಯುವ ಹಾಗೆ, ಓದುವ ಮೂಲಕ ಬರೆದದ್ದರಿಂದ ಮುಕ್ತಿ ಹೊಂದಲು ಸಾಧ್ಯವಾ. ತಾನೀಗ ಏನು ಬರೆದರೂ ಅದು ತಾನು ಈ ಹಿಂದೆ ಬರೆದದ್ದಕ್ಕೆ ವಿರುದ್ಧವಾಗಿ ಕಾಣಿಸುತ್ತದಾ. ಈ ವಿರೋಧಾಭಾಸವನ್ನು ಯಾರಾದರೂ ಗುರುತಿಸುತ್ತಾರಾ. ಕನ್ನಡದಲ್ಲಿ ಅಂಥ ಜಾಣರಿಲ್ಲ. ತನ್ನನ್ನು ಚುಚ್ಚುವುದಕ್ಕೆಂದು ವಿಮಲೇಂದ್ರ ಅಂಥ ಪ್ರಯತ್ನ ಮಾಡಿದರೂ ಮಾಡಬಹುದು. ಅವನ ಟೀಕೆಗಳಿಗೆ ನಕ್ಕು ಸುಮ್ಮನಾಗಬಹುದು. ಆದರೆ, ರಾಷ್ಟ್ರೀಯ ಅಂತಾರಾಷ್ಟ್ರೀಯ ಸಾಹಿತ್ಯಕ ವಲಯದ್ದೇ ಭಯ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅವು ಪ್ರಕಟವಾಗುತ್ತವೆ. ಚಾನಲ್ಲುಗಳಲ್ಲಿ ಬರುತ್ತವೆ.
ಚಿರಾಯು ಕಣ್ಮುಚ್ಚಿ ಯೋಚಿಸಿದ.
ಸದ್ಯದ ತಲ್ಲಣ ಮತ್ತು ನಿಷ್ಕ್ರಿಯತೆಯಿಂದ ಪಾರಾಗಬೇಕು ಅನ್ನಿಸಿತು. ಕಾಡು ಹರಟೆಯೊಂದೇ ಅದಕ್ಕೆ ದಾರಿ ಅಂದುಕೊಂಡು ಶೇಷುವಿನ ಕಡೆ ತಿರುಗಿದ. ಮೌನ ಅರ್ಥವಾದವನ ಹಾಗೆ ಶೇಷು ಮೊಬೈಲು ತಂದುಕೊಟ್ಟ.
ರಾತ್ರಿ ಎರಡೂವರೆ ಗಂಟೆಯಾಗಿದೆ ಅನ್ನುವುದನ್ನು ಮನಸ್ಸಿಗೆ ತಂದುಕೊಳ್ಳುತ್ತಲೇ, ಆ ಹೊತ್ತಲ್ಲಿ ಅವಳು ಮಲಗಿರುತ್ತಾಳೆ ಎಂದು ಗೊತ್ತಿದ್ದೂ, ಯಾಮಿನಿಯನ್ನು ನೋಯಿಸಲಿಕ್ಕಾದರೂ ತಾನು ಹೀಗೆ ಮಾಡಬೇಕು ಅಂದುಕೊಂಡು ಊರ್ಮಿಳಾ ದೇಸಾಯಿಯ ನಂಬರ್ ಡಯಲ್ ಮಾಡಿದ.
ಮೂರನೇ ರಿಂಗಿಗೆ ಅತ್ತ ಕಡೆಯಿಂದ ಬಿಸಿ ಕಾಫಿಯಂಥ ದನಿಯೊಂದು ಚಿರೂ ಅಂದಿತು.

Saturday, March 22, 2008

3. ಒಡೆದುಬಿದ್ದ ಕೊಳಲು ನಾನು..

ರಾತ್ರಿ ತಿಂಗಳ ಬೆಳಕಿತ್ತು.
ತಿಂಗಳ ಬೆಳಕೆಂದರೆ ಚಿರಾಯುವಿಗೆ ಇಷ್ಟ. ಆ ಬೆಳಕಿನಲ್ಲಿ ಯಾವುದೂ ನಿಚ್ಚಳವಾಗಿ ಕಾಣಿಸುವುದಿಲ್ಲ. ಜಗತ್ತಿನ ಕುರೂಪಗಳನ್ನೆಲ್ಲ ಮುಚ್ಚುವ ಶಕ್ತಿ ಬೆಳದಿಂಗಳಿಗಿದೆ. ಅಷ್ಟೇ ಅಲ್ಲ, ಅದು ಎಲ್ಲವನ್ನೂ ಒಂದೇ ಬಣ್ಣಕ್ಕೆ ತಿರುಗಿಸುತ್ತದೆ. ಕಮ್ಯೂನಿಸಂ ಬಿಟ್ಟರೆ ಹಾಗೆ ಒಂದೇ ಬಣ್ಣಕ್ಕೆ ತಿರುಗಿಸುವ ಶಕ್ತಿಯಿರುವುದು ಬೆಳದಿಂಗಳಿಗೆ ಮಾತ್ರ ಅನ್ನುವುದು ಹೊಳೆದು ಚಿರಾಯು ಸಣ್ಣಗೆ ನಕ್ಕ.
ಆ ಬೆಳದಿಂಗಳಲ್ಲಿ ನಡೆಯುತ್ತಿದ್ದ ರಾತ್ರಿಗಳು ನೆನಪಾದವು. ಜೊತೆಗೆ ಚಿಕ್ಕಮ್ಮ ಭಾಗೀರಥಿ ಇರುತ್ತಿದ್ದರು. ಸ್ವಲ್ಪ ದೂರ ನಡೆಯುವಷ್ಟರಲ್ಲಿ ಅದೆಲ್ಲಿಂದಲೋ ಶಶಿಧರ ಪ್ರತ್ಯಕ್ಷವಾಗುತ್ತಿದ್ದ. ಅವನು ಬರುತ್ತಿದ್ದ ಹಾಗೆ ಚಿಕ್ಕಮ್ಮ ತನ್ನ ಕೈಗೆ ಒಂದಷ್ಟು ಕಡಲೇಬೀಜ ತುರುಕಿ ಸ್ವಲ್ಪ ಮುಂದೆ ನಡೆಯೋ ಅನ್ನುತ್ತಿದ್ದಳು. ಯಾಕೆ ಅಂತಲೂ ಕೇಳದೇ ತಾನು ಮುಂದಕ್ಕೆ ಹೋಗಿ ಬಿಡುತ್ತಿದ್ದೆ. ಚಿಕ್ಕಮ್ಮನೂ ಶಶಿಧರನೂ ತನ್ನನ್ನು ಹುಂಬ ಅಂದುಕೊಳ್ಳುತ್ತಿದ್ದರೋ ಏನೋ. ಆದರೆ ತನಗೆ ಆಗಲೇ ಎಲ್ಲಾ ಅರ್ಥವಾಗುತ್ತಿತ್ತಲ್ಲ. ಅವರು ಕೈ ಕೈ ಹಿಡಿದುಕೊಂಡು ನಡೆಯುತ್ತಿದ್ದದ್ದು, ಮಾತಾಡುತ್ತಾ ಆಡುತ್ತಾ ಒಬ್ಬರಿಗೊಬ್ಬರು ಆತುಕೊಂಡು ನಡೆಯುತ್ತಿದ್ದದ್ದು, ಚಿಕ್ಕಮ್ಮ ಸಣ್ಣಗೆ ನರಳುತ್ತಿದ್ದದ್ದು, ಒಮ್ಮೆಯೂ ಅವರೇನು ಮಾಡುತ್ತಿದ್ದಾರೆ ಅಂತ ತಿರುಗಿ ನೋಡುವ ಕುತೂಹಲ ಕೂಡ ಹುಟ್ಟಿರಲಿಲ್ಲ ತನ್ನಲ್ಲಿ. ಅದಕ್ಕಿಂತ ಹೆಚ್ಚಾಗಿ ಅವರೇನು ಮಾಡುತ್ತಿದ್ದಾರೆ ಅನ್ನುವುದು ಸ್ಪಷ್ಟವಾಗಿ ಗೊತ್ತಿದೆ ಎಂಬ ದುರಹಂಕಾರ. ಇವತ್ತಿಗೂ ಅದೇ ದುರಹಂಕಾರವೇ ತನ್ನನ್ನು ಆಳುತ್ತಿದೆಯಾ. ಸಾಹಿತಿಗೆ ವಿನಯ ಇರಬೇಕು ಎಂದು ಅನೇಕರು ಹೇಳಿದ್ದು ನೆನಪಾಗಿ ಚಿರಾಯು ತನ್ನಷ್ಟಕ್ಕೇ ವಿನಯವಂತೆ ವಿನಯ, ಬದನೆಕಾಯಿ ಎಂದು ಉಸುರಿಕೊಂಡ.
ಬೆಳದಿಂಗಳು ಎಲ್ಲವನ್ನೂ ಅರಗಿಸಿಕೊಂಡಂತೆ ಹಬ್ಬಿತ್ತು. ಚಂದ್ರನಿಗೇನಾದರೂ ಕತೆ ಬರೆಯುವುದು ಗೊತ್ತಿದ್ದರೆ ಎಂತೆಂಥಾ ಕತೆ ಹೇಳುತ್ತಿದ್ದನೋ ಏನೋ. ತುಂಬ ರೋಮ್ಯಾಂಟಿಕ್ ಶೈಲಿಯಲ್ಲೊಂದು ಕಾದಂಬರಿ ಬರೆದರೆ ಹೇಗೆ. ಅಖಂಡ ಪ್ರೇಮವನ್ನು, ಅಪೂರ್ವ ಸಮಾಗಮವನ್ನು, ಸುರತದ ಸಂಭ್ರಮಗಳನ್ನು, ಸಲ್ಲಾಪಗಳನ್ನು, ರಕ್ತಸಿಕ್ತ ರಾತ್ರಿಗಳನ್ನು, ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರ, ಹಾದರ, ಮೈಥುನ, ಪ್ರಣಯೋತ್ಸವ, ವಿರಹ ಎಲ್ಲವನ್ನೂ ಕಂಡರೂ ಚಂದ್ರ ತನ್ನ ನಗುವನ್ನು ಕಳಕೊಂಡಿಲ್ಲ ಅನ್ನುವುದೇ ಬದುಕುವುದಕ್ಕೆ ಸಕಾರಣ ಎಂದು ಕಾದಂಬರಿ ಆರಂಭಿಸಿ ಎಲ್ಲರನ್ನು ಬೆಚ್ಚಿಬೀಳಿಸಿದರೆ ಹೇಗೆ, ಬೆಳದಿಂಗಳ ಕತೆಗಳು ಅಂತ ಒಂದು ಸರಣಿ ಬರೆಯಬೇಕು. ಚಂದ್ರ ಹೇಳಿದ ಕತೆಗಳಾಗಿ ಅವು ಕಾಣಿಸಬೇಕು. ಹೀಗೆ ಯೋಚನೆ ದಿಕ್ಕು ತಪ್ಪುತ್ತಿರುವುದನ್ನು ಗಮನಿಸಿ ಚಿರಾಯುವಿಗೆ ಬೇಜಾರಾಯಿತು.
ಒಂದು ಸಾಲು ಸಿಕ್ಕರೆ ಕವಿತೆ ಬರೆದುಬಿಡುತ್ತೇನೆ ಅನ್ನುತ್ತಿದ್ದ ಗೆಳೆಯ ಗೋಪಿ. ಮೊದಲ ಸಾಲು ಹೊಳೆದರೆ ಸಾಕು ಕತೆ ತಾನಾಗೇ ಬೆಳೆಯುತ್ತಾ ಹೋಗುತ್ತದೆ ಅಂತ ನಾನು ಹೇಳುತ್ತಿದ್ದೆ. ಯಾವತ್ತೂ ಕತೆ ಬರೆಯುವುದಕ್ಕೆ ತಿಣುಕಿದವನೇ ಅಲ್ಲ. ಪೆನ್ನು ಪೇಪರು ಮುಂದಿಟ್ಟು ಕೂತರೆ ಹದಿನಾಲ್ಕು ಪುಟದ ಕತೆ ಬರೆದು ಮುಗಿಸಿಯೇ ಏಳುತ್ತಿದ್ದದ್ದು. ಅದನ್ನು ಯಾವತ್ತೂ ಮತ್ತೊಮ್ಮೆ ಓದಿದ್ದೂ ಇಲ್ಲ, ತಿದ್ದಿದ್ದೂ ಇಲ್ಲ. ಹಾಗೆ ತಿದ್ದುವವರನ್ನು ಕಂಡರೆ ಅಸೂಯೆ ಮತ್ತು ರೇಜಿಗೆ. ಬರಹವೆಂದರೆ ಸಂಭೋಗದ ಹಾಗೆ. ಆ ಕ್ಷಣಕ್ಕೆ ಮದನ ಎಷ್ಟು ಕರುಣಿಸುತ್ತಾನೋ ಅಷ್ಟು.
ಒಳಗೆ ಮೊಬೈಲು ಗುನುಗುನಿಸಿತು. ಯಾಮಿನಿಗೆ ಇಷ್ಟವಾದ ಹಾಡು ರಿಂಗ್-ಟೋನು. ಅವಳನ್ನು ನೆನಪಿಸಿಕೊಳ್ಳಲು ಎಷ್ಟೊಂದು ಮಾರ್ಗ. ರಿಂಗ್-ಟೋನು, ಸ್ಕ್ರೀನ್ ಸೇವರು, ಅವಳೇ ಕೊಟ್ಟ ವಾಚು.ಹಿಂದಿನ ಕಾಲದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಇಷ್ಟೊಂದು ಮಾರ್ಗಗಳೇ ಇರಲಿಲ್ಲ. ತನ್ನ ಬಾಲ್ಯದಲ್ಲೇನಿತ್ತು. ತುಂಬ ಭಾವುಕವಾಗಿ ಯೋಚಿಸಿದರೆ ಅವಳ ಜುಮುಕಿ, ಕಾಲುಗೆಜ್ಜೆ, ಉಂಗುರ- ಇಷ್ಟನ್ನು ಬಿಟ್ಟರೆ ಬೇರೆ ರೂಪಕಗಳೇ ಇರಲಿಲ್ಲ. ಅವಳು ಕಿಟಿಕಿಯಿಂದಲೋ ಬಾಗಿಲ ಸಂದಿಯಿಂದಲೋ ನೋಡುತ್ತಿರುವ ಚಿತ್ರ, ಮುಟ್ಟಾದಾಗ ಮೊಣಕಾಲಿಗೆ ಕೈ ಊರಿ ಕೂತ ಚಿತ್ರ. ಈಗ ರಹಸ್ಯಗಳೇ ಇಲ್ಲ.
ಶೇಷು ಫೋನ್ ತಂದು ಕೊಟ್ಟ. ಶ್ರದ್ಧಾ ಫೋನ್ ಮಾಡಿದ್ದಳು. ಕಾದಂಬರಿಯ ಸಾರಾಂಶ ಹೇಳಿದರೆ ತ್ರಿಲೋಕನ ಹತ್ತಿರ ಕವರ್ ಪೇಜ್ ಡಿಸೈನ್ ಮಾಡಿಸಿಬಿಡುತ್ತೇನೆ. ಈಗಿಂದೀಗಲೇ ಪ್ರಚಾರ ಶುರು ಮಾಡಿದರೆ ಚೆನ್ನಾಗಿರುತ್ತೆ. ಒಂದು ಹೈಪ್ ಕ್ರಿಯೇಟ್ ಆಗಬೇಕು. ನಿನ್ನೆ ಟೀವಿ ನೋಡಿದ್ಯಾ ಕೇಳಿದಳು. ಇಲ್ಲ ಅಂತ ಚಿರಾಯು. ನೋಡಬೇಕಿತ್ತು. ಬಿಬಿಸಿಯಲ್ಲಿ ನಿನ್ನ ಅಜ್ಞಾತವಾಸದ ಬಗ್ಗೆ ಒಂದು ರಿಪೋರ್ಟು ಬಂದಿತ್ತು. ಎಲ್ಲೋ ಕೂತು ಕಾದಂಬರಿ ಬರೆಯುತ್ತಿದ್ದೀಯ ಅಂತ ಸುದ್ದಿ ಮಾಡಿದ್ದಾರೆ ಅಂದಳು.
ಚಿರಾಯುವಿಗೆ ರೇಗಿತು. ಕಾದಂಬರಿಯ ಸಾರಾಂಶ ಹಾಗೆಲ್ಲ ಹೇಳುವುದಕ್ಕಾಗೋಲ್ಲ. ಏನಂತ ತಿಳ್ಕೊಂಡಿದ್ದೀಯಾ ಅಂತ ಬೈಯಬೇಕು ಅಂದುಕೊಂಡ. ಮನಸ್ಸಾಗಲಿಲ್ಲ. ಶ್ರದ್ಧಾ ಪಕ್ಕಾ ಪ್ರೊಫೆಷನಲ್. ಅವಳಿಗೆ ಸೃಜನಶೀಲ ಸಂಕಟಗಳ ಬಗ್ಗೆ ಗೊತ್ತಿಲ್ಲ. ನಿಮಿಷಕ್ಕೆ ನಲವತ್ತು ಪದ ಟೈಪ್ ಮಾಡಬಲ್ಲವನು ಗಂಟೆಗೆ 2400 ಪದ ಟೈಪ್ ಮಾಡುತ್ತಾನೆ. ದಿನಕ್ಕೆ ನಾಲ್ಕು ಗಂಟೆ ಬರೆದರೂ ಸುಮಾರು ಹತ್ತು ಸಾವಿರ ಪದಗಳಾಗುತ್ತವೆ. ಒಂದು ಕಾದಂಬರಿಗೆ ಹೆಚ್ಚೆಂದರೆ ಅರುವತ್ತು ಸಾವಿರ ಪದಗಳಿದ್ದರೆ ಸಾಕು. ಯೋಚಿಸಿ ಬರೆದರೂ ಇಪ್ಪತ್ತು ದಿನಗಳಲ್ಲಿ ಕಾದಂಬರಿ ಮುಗಿಯಬೇಕು. ಕಲಾವಿದರು ಚಿತ್ರ ಮಾಡುವುದಕ್ಕೆ ಹೆಚ್ಚು ಸಮಯ ತಗೊಳ್ಳುತ್ತಾರೆ. ಹೀಗೆ ಲೆಕ್ಕಾ ಹಾಕುತ್ತಾಳೆ ಅವಳು.
ಕೊನೆಗೆ ಹೋಗ್ಲಿ ಬಿಡೋ ಟೈಟಲ್ಲಾದ್ರೂ ಹೇಳು ಅಂದಳು. ಪ್ಲೀಸ್, ಒಂದೆರಡು ದಿನ ಏನೂ ಕೇಳಬೇಡ. ಕಾದಂಬರಿ ಹರಳುಗಟ್ಟುತ್ತಾ ಇದೆ. ನಾನೇ ಫೋನ್ ಮಾಡಿ ಹೇಳ್ತೀನಿ. ಪ್ರಚಾರ ಎಲ್ಲಾ ಮಾಡಿಸೋದಕ್ಕೆ ಹೋಗಬೇಡ ಅಂತ ಗೋಗರೆಯುವ ದನಿಯಲ್ಲಿ ಹೇಳಿದ ಚಿರಾಯು. ಶ್ರದ್ಧಾ ಅರ್ಥ ಮಾಡಿಕೊಂಡವಳಂತೆ ಸರಿ ಡಾರ್ಲಿಂಗ್. ನಿಧಾನಕ್ಕೆ ಬರಿ. ನಾನೇನೂ ಅವಸರ ಮಾಡೋಲ್ಲ ಅಂದಳು.
ಶೇಷು ಕೈಗೆ ಫೋನ್ ಕೊಡುತ್ತಾ ಇನ್ನು ಮೇಲೆ ಯಾರ ಫೋನ್ ಬಂದರೂ ನನಗೆ ಕೊಡಬೇಡ. ಅವರ ಹೆಸರು ಬರೆದಿಡು. ಒಂದು ಹೊತ್ತಲ್ಲಿ ನಾನೇ ಅವರಿಗೆ ಫೋನ್ ಮಾಡಿ ಮಾತಾಡ್ತೀನಿ ಅಂದ. ಶೇಷು ತಲೆಯಾಡಿಸಿದ.
ಮೋಡವೊಂದು ಚಂದ್ರನನ್ನು ಮರೆ ಮಾಡಿದ್ದರಿಂದಲೋ ಏನೋ ಬೆಳದಿಂಗಳು ಮಸುಕಾಗಿತ್ತು. ಗುಡ್ಡ ಬಯಲು ಒಂದಾಗಿತ್ತು. ಮತ್ತಷ್ಟು ನಿಗೂಢವಾಗಿತ್ತು. ಬೆಳದಿಂಗಳಿಗಿಂತ ಒಳ್ಳೆಯ ಕತೆಯಾಗಲೀ ಕವಿತೆಯಾಗಲೀ ಇರುವುದಕ್ಕೆ ಸಾಧ್ಯವೇ ಇಲ್ಲ ಅಂದುಕೊಳ್ಳುತ್ತಾ ಚಿರಾಯು ಎದ್ದು ನಿಂತ.
ಇದ್ದಕ್ಕಿದ್ದಂತೆ ಬೆಳದಿಂಗಳಲ್ಲಿ ಭಾಗೀರಥಿ ಚಿಕ್ಕಮ್ಮ ನಡೆದಾಡಿದಂತೆ ಕಾಣಿಸಿತು. ಶಶಿಧರ ಜೊತೆಗಿರಲಿಲ್ಲ.
ಮೈಯೆಲ್ಲ ಕಂಪಿಸಿದಂತಾಗಿ ಚಿರಾಯು ತಿರುಗಿ ನೋಡಿದ. ಮನೆಯೊಳಗೆ ಕತ್ತಲಿತ್ತು.

Friday, March 21, 2008

2. ಬರದೆ ಹೋದೆ ನೀನು

ಯಾಮಿನಿ ಬರಲಿಲ್ಲ.
ನಾಲ್ಕೇ ದಿನಕ್ಕೆ ಅಕ್ಕನ ಮದುವೆ. ಆಮೇಲೆ ಪ್ಯಾರಿಸ್ಸಿಗೆ ಹೋಗುವುದಿದೆ. ಗೆಳೆಯ ಹೋಗುತ್ತಿದ್ದಾನೆ. ಈ ಅವಕಾಶ ಬಿಟ್ಟರೆ ಮತ್ತೆ ಹೋಗುವುದಕ್ಕೆ ಆಗುವುದಿಲ್ಲ. ಪ್ಯಾರಿಸ್ಸಿನ ಮೇಲೆ ನನಗೇನೂ ಅಂತ ಮೋಹವಿಲ್ಲ. ಆದರೆ ಸೀನ್ ನದಿಯನ್ನೊಮ್ಮೆ ನೋಡಬೇಕು. ರಾಘವೇಂದ್ರ ಖಾಸನೀಸರ ಮೊನಾಲಿಸಾ ಕತೆಯನ್ನು ಓದಿದ ಮೇಲಂತೂ ಪ್ಯಾರಿಸ್ಸು ಮತ್ತಷ್ಟು ಹತ್ತಿರವಾಗಿದೆ. ಪ್ಲೀಸ್ ತಪ್ಪು ತಿಳೀಬೇಡ ಅಂತ ನಾನು ನಿನ್ನನ್ನು ಕೇಳಬೇಕಾಗಿಲ್ಲ. ನಾನು ಪರಸ್ಪರರ ಬಗ್ಗೆ ತಪ್ಪು ತಿಳಿಯಬಾರದು ಎಂದು ನಿರ್ಧರಿಸಿ ಬಹಳ ಕಾಲವಾಯಿತು. ಬಂದ ತಕ್ಷಣ ಬರುತ್ತೇನೆ ಅಂತ ಯಾಮಿನಿಯೇ ಫೋನಲ್ಲಿ ಮಾತಾಡಿದಳು. ಜಾಣೆ, ಮಾತಾಡುವ ಮೊದಲೇ ಎಸ್ಸೆಮ್ಮೆಸ್ಸು ಕಳುಹಿಸಿ ಮಾನಸಿಕವಾಗಿ ತನ್ನನ್ನು ಆ ಸುದ್ದಿಗೆ ಸಿದ್ಧಮಾಡಿಟ್ಟಿದ್ದಳು.
ಬರುವುದಿಲ್ಲ ಅಂತ ಗೊತ್ತಾದ ಮೇಲೆ ಏನು ಹೇಳಿದರೂ ಅದು ಬರೀ ನೆಪವಷ್ಟೇ. ಆ ನೆಪದಿಂದ ಇಬ್ಬರ ಮನಸ್ಸಿಗೂ ಸ್ವಲ್ಪ ಸಮಾಧಾನ ಆಗಬಹುದೇನೋ. ನೆಪ ಹೇಳಿಸಿಕೊಂಡವನಿಗಿಂತ ನೆಪ ಹೇಳಿದವಳಿಗೇ ಅದರಿಂದ ನೆಮ್ಮದಿ. ಆಕೆ ಈಗ ನಿರಾಳವಾಗಿದ್ದಾಳೆ. ಮುಂದೆ ಯಾವತ್ತಾದರೂ ಜಗಳ ಆದರೆ ಆವತ್ತು ನಾನು ನಿನಗೆ ಎಲ್ಲಾ ವಿವರವಾಗಿ ಹೇಳಿದ್ದೆ. ನಿನಗೆ ಅಷ್ಟು ಪ್ರೀತಿಯಿದ್ದರೆ ಆವತ್ತೇ ಸ್ಪಷ್ಟವಾಗಿ ಹೇಳಬೇಕಾಗಿತ್ತು-ನೀನು ಹೋಗಕೂಡದು ಅಂತ. ಹಾಗೆ ಕೇಳಿ ಕಟ್ಟಿಹಾಕಿಕೊಳ್ಳುವ ಧೈರ್ಯ ನಿನಗಿಲ್ಲ ಅಂತ ಮಾತು ತೆಗೆಯುತ್ತಾಳೆ.
ಯಾಮಿನಿ ಇಲ್ಲಿಗೆ ಬಂದಾದರೂ ಏನು ಮಾಡುವುದಿತ್ತು ಎಂದು ಚಿರಾಯು ಯೋಚಿಸಿದ. ಆಕೆ ಬಂದರೆ ಮತ್ತದೇ ಪ್ರೀತಿ, ತಬ್ಬುಗೆ, ಇಳಿಸಂಜೆಗಳಲ್ಲಿ ವಾಕಿಂಗು, ಸುಸ್ತಾಗಿ ಬಂದು ಮತ್ತೊಂದು ಸುತ್ತು ಪ್ರೀತಿ, ಮತ್ತೆ ಭಯಂಕರ ಸುಸ್ತು. ನಿದ್ದೆಯಿಂದ ಏಳುವ ಹೊತ್ತಿಗೆ ಯಾಮಿನಿ ವಾಕಿಂಗು ಹೋಗಿರುತ್ತಾಳೆ. ಮೊಬೈಲು ಫೋನ್ ಮಾಡಿದರೆ ಎಂಗೇಜು. ಆಕೆ ಬೆಳಗ್ಗೆ ವಾಕಿಂಗು ಹೋಗುವುದು ದೇಹದ ತೂಕ ಇಳಿಸುವುದಕ್ಕೋ ಮನಸ್ಸಿನ ಭಾರ ಇಳಿಸಿಕೊಳ್ಳುವುದಕ್ಕೋ ಎಂದು ಅನುಮಾನ. ಆದರೆ ಅದನ್ನು ಕೇಳುವಂತಿಲ್ಲ. ತನ್ನ ಭಾರತೀಯ ಮನಸ್ಸು ಅವಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಸಹಿಸಿಕೊಳ್ಳುವುದು ಸಾಧ್ಯವೇ ಇಲ್ಲ ಅಂತ ಚಿರಾಯುವಿಗೆ ಅನೇಕ ಸಾರಿ ಅನ್ನಿಸಿದ್ದಿದೆ. ಹೀಗಾಗಿ ಮತ್ತೆ ಮತ್ತೆ ಮನಸ್ಸಿಗೆ ಬರುವ ಮದುವೆಯ ಪ್ರಸ್ತಾಪವನ್ನು ಅವನೇ ತಳ್ಳಿ ಹಾಕುತ್ತಾನೆ. ಯಾಮಿನಿಯನ್ನು ಪ್ರೀತಿಸಬಹುದು, ಮುದ್ದಿಸಬಹುದು. ಆದರೆ ಅವಳನ್ನು ಮದುವೆಯಾಗಿ ಹೆಂಡತಿಯ ಸ್ಥಾನದಲ್ಲಿಟ್ಟು ನೋಡುವುದು ಸಾಧ್ಯವೇ ಇಲ್ಲ ಎಂದು ಅವನಿಗೆ ಅನೇಕ ಸಾರಿ ಅನ್ನಿಸಿದೆ.
ಹೆಂಡತಿ ಅಂದಾಗ ಅವನಿಗೆ ನೆನಪಾಗುವುದು ಶಿವಣ್ಣನ ಹೆಂಡತಿ ಮಾಲವಿಕಾ. ಇಷ್ಟಗಲ ಕುಂಕುಮ ಇಟ್ಟುಕೊಂಡು ತಾನುಟ್ಟ ಜರಿಸೀರೆಯ ಅಂಚನ್ನು ತಾನೇ ಮೆಚ್ಚುತ್ತಾ ಬನ್ನಿ ಅಂತ ಕರೆಯುವ ಆಹ್ವಾನದಲ್ಲಿ ಆಪ್ತವಾಗುತ್ತಾ, ಆ ಆಹ್ವಾನದಲ್ಲಿರುವುದು ಮಾದಕತೆಯೋ ಪ್ರೀತಿಯೋ ಗೌರವವೋ ಆದರವೋ ಆತ್ಮೀಯತೆಯೋ ಅನ್ನುವುದನ್ನು ಅವರವರ ಭಾವಕ್ಕೆ ಬಿಡುತ್ತಾ
ಮಾತಿನ ನಡುನಡುವೆ ಗಂಡನನ್ನು ಅತ್ಯಂತ ಸುಖೀ ಗೃಹಿಣಿಯಂತೆ ನೋಡುತ್ತಾ, ಅವನು ಬೈದಾಗ ಕಣ್ಣಲ್ಲೇ ಕ್ಷಮೆ ಕೇಳುತ್ತಾ, ಅವನು ತಪ್ಪು ಮಾಡಿದಾಗ ಛೇಡಿಸುತ್ತಾ, ತನಗೆ ಅವನು ಕೊಟ್ಟಂಥ ಸುಖವನ್ನು ಯಾರೂ ಕೊಡಲಾರರು, ಅವನಿಗೆ ನಾನು ಕೊಡುವ ಸುಖವನ್ನು ಜಗತ್ತಿನ ಯಾವ ಸುಖವೂ ಸರಿಗಟ್ಟಲಾರದು ಎಂಬಂತೆ ಓಡಾಡುವ ಮಾಲವಿಕಾ ಚಿರಾಯುವಿನ ಪಾಲಿಗೆ ಅಚ್ಚರಿ. ತನ್ನನ್ನು ಚಿರಾಯು ಸೂಕ್ಷ್ಮವಾಗಿ ಗಮನಿಸುತ್ತಾನೆ ಅಂತ ಗೊತ್ತಾದ ತಕ್ಷಣ ಅವಳು ಮತ್ತಷ್ಟು ಲವಲವಿಕೆ ತುಂಬಿಕೊಂಡಿದ್ದಳು. ಹಾಗಿದ್ದರೂ ಅವಳ ವರ್ತನೆಯಲ್ಲಿ ಪುಟ್ಟ ಮಗುವಿನ ಗುಣವೂ ಇದೆಯೇನೋ ಎಂದು ಅನುಮಾನಿಸುತ್ತಿದ್ದ ಚಿರಾಯು.
ಚಿರಾಯು ಹೀಗೆ ನಲುಗುವುದನ್ನು ಬರೆಯಲಾಗದೆ ಒದ್ದಾಡುವುದನ್ನು ಶೇಷು ಗಮನಿಸುತ್ತಾ ಕೂತಿದ್ದ. ತಾನಿಲ್ಲಿಂದ ಹೊರಟು ಬಿಡುತ್ತೇನೆ ಅಂತ ಅವನಿಗೆ ಅನ್ನಿಸೋದಕ್ಕೆ ಶುರುವಾಗಿರಬೇಕು ಅಂದುಕೊಂಡ ಚಿರಾಯು. ಹದಿನೈದು ವರುಷಗಳಿಂದ ತನ್ನ ಜೊತೆಗಿದ್ದಾನೆ. ತನ್ನ ಕಾಡುಹಂದಿಯಂಥ ವಿಚಿತ್ರ ಮತ್ತು ಅನೂಹ್ಯ ಆಲೋಚನೆಗಳು ಅವನಿಗೆ ಗೊತ್ತಾಗುತ್ತವೆ. ಯಾವಾಗ ತನ್ನ ಮುಂದೆ ನಿಲ್ಲಬೇಕು, ಯಾವಾಗ ಮಾತಾಡಬೇಕು, ಕಣ್ಸನ್ನೆ ಏನು ಹೇಳುತ್ತದೆ, ಮೈಮುರಿದರೆ ಏನರ್ಥ ಅನ್ನುವುದೆಲ್ಲ ಅವನಿಗೆ ಗೊತ್ತು. ಯಾವ ಹೆಂಡತಿಯೂ ಅರ್ಥ ಮಾಡಿಕೊಳ್ಳದಷ್ಟು ಚೆನ್ನಾಗಿ ತನ್ನನ್ನು ಅರ್ಥ ಮಾಡಿಕೊಂಡಿದ್ದಾನೆ ಅಂತ ಅನ್ನಿಸುವ ಹೊತ್ತಿಗೇ ಅದು ಅರ್ಥ ಮಾಡಿಕೊಂಡದ್ದಾ ಅವನ ಅನಿವಾರ್ಯತೆಯಾ ಎಂಬ ಪ್ರಶ್ನೆ ಎದುರಾಯಿತು. ಹೆಂಡತಿಗೆ ಸ್ವಂತದ್ದೊಂದು ವ್ಯಕ್ತಿತ್ವ ಇರುತ್ತೆ, ಇವನಿಗೆ ಅದಿರೋದಿಲ್ಲ. ವ್ಯಕ್ತಿತ್ವ ಇಲ್ಲದೇ ಇರುವವರು ಮಾತ್ರ ನಮ್ಮ ಅಹಂಕಾರಕ್ಕೆ ಹತ್ತಿರವಾಗಬಲ್ಲರು.
ಹಾಗಂತ ಹೊಳೆದದ್ದೇ ತಡ, ಅದನ್ನೊಂದು ಪಾತ್ರವಾಗಿಸಬಹುದೇನೋ ಎಂದುಕೊಂಡು ಚಿರಾಯು ಪುಟ್ಟ ಟಿಪ್ಪಣಿ ಗೀಚಿಕೊಂಡ.
ಪಕ್ಕದಲ್ಲೇ ತಾನು ಬರೆದಿಟ್ಟ ಐದು ಸಾಲುಗಳು ಮತ್ತೆ ಕಾಣಿಸಿದವು. ಅವುಗಳನ್ನು ಓದುತ್ತಿದ್ದಂತೆ ತುಂಬ ಕಳಪೆಯಾಗಿದೆ ಅನ್ನಿಸಿತು. ಮನಸ್ಸು ಮಾಡಿದರೆ ಅದಕ್ಕಿಂತ ತೀವ್ರವಾಗಿ ಬರೆಯುತ್ತೀಯಾ. ಇದರಲ್ಲೇನಿದೆ ಅಂತ ಯಾಮಿನಿ ಓದಿದ ತಕ್ಷಣ ಕಾಮೆಂಟ್ ಮಾಡುತ್ತಾಳೆ. ಇದನ್ನು ಅವಳಿಗೆ ತೋರಿಸುವುದೋ ಬೇಡವೋ ಫೋನ್ ಮಾಡಿ ಓದಿ ಹೇಳಿಬಿಡಲಾ..
ಚಿರಾಯು ಫೋನ್ ಕೈಗೆತ್ತಿಕೊಂಡ.
ಯಾಮಿನಿಯ ಫೋನ್ ಬಿಜಿಯಾಗಿತ್ತು.

Thursday, March 20, 2008

1. ಹಲಗೆ ಬಳಪವ ಪಿಡಿಯದೊಂದಗ್ಗಳಿಕೆ....

ತುಂಬ ದೊಡ್ಡ ಗಾತ್ರದ ಮೊಲೆಗಳಿಗಿಂತ ಅಂಗೈಯೊಳಗೆ ಹಿಡಿಯಬಹುದಾದ ಗುಬ್ಬಚ್ಚಿಯಂಥ ಮೊಲೆಗಳೇ ಅನುಕೂಲಕರ ಮತ್ತು ಕ್ಷೇಮ ಎಂದು ಅರಿವಾಗುವ ಹೊತ್ತಿಗೆ ಜಯದೇವನಿಗೆ ನಲವತ್ತು ದಾಟಿದೆ. ಹಾಗಿದ್ದರೂ ದೊಡ್ಡ ಮೊಲೆಗಳ ಕುರಿತ ವ್ಯಾಮೋಹವನ್ನು ಕಳೆದುಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲವಲ್ಲ ಎಂದು ಅವನಿಗೆ ಸಂತೋಷವಾಗುವುದುಂಟು. ತಾನೆಲ್ಲಿ ವಿರಾಗಿಯಾಗಿಬಿಡುತ್ತೇನೋ ಎಂಬ ಭಯದಿಂದ ತನ್ನನ್ನು ಪಾರುಮಾಡುವುದೇ ಈ ಸ್ಥನಗಳೇನೋ ಎಂದು ಅನ್ನಿಸಿದಾಗೆಲ್ಲ ಅವನ್ನು ತಾನು ಮುಟ್ಟಿ ಮುದ್ದಿಸಿದ ಮೊಲೆಗಳ ಬಗ್ಗೆ ಕೃತಜ್ಞನಾಗುತ್ತಾನೆ.’
ಆರು ದಿನಗಳ ಹಿಂದೆ ತಾನೇ ಬರೆದಿಟ್ಟ ಐದು ಸಾಲುಗಳನ್ನು ಚಿರಾಯು ಮತ್ತೊಮ್ಮೆ ಓದಿದ. ಕಳೆದಾರು ದಿನಗಳಲ್ಲಿ ಆ ಸಾಲುಗಳನ್ನು ಅವನು ನೂರಾರು ಸಲ ಓದಿದ್ದಾನೆ. ಕಾದಂಬರಿ ಆ ಸಾಲುಗಳಿಂದಲೇ ಯಾಕೆ ಶುರುವಾಯಿತು ಅನ್ನುವ ಪ್ರಶ್ನೆಗೆ ಅವನಿಗೆ ಉತ್ತರ ಸಿಗಲಿಲ್ಲ. ಅಷ್ಟು ಶೃಂಗಾರಮಯವಾಗಿಯೋ ಲಜ್ಜೆಗೇಡಿಯಂತೆಯೋ ಬರೆಯುವುದು ನವ್ಯದ ಶೈಲಿಯಾಯಿತಲ್ಲವೇ? ಈಗ ತೀರ ಹೊಸತೆನಿಸುವಂತೆ ಬರೆಯಲು ಹೊರಟವನನ್ನು ನವ್ಯದ ಅದೇ ಹಳೆಯ ಗುಂಗು ಯಾಕೆ ಕಾಡಬೇಕು? ವಿಮರ್ಶಕರು ಅದನ್ನು ಒಪ್ಪುತ್ತಾರಾ? ಹೋಗಲಿ, ಓದುಗರಿಗೆ ಅದರಲ್ಲಿ ಆಸಕ್ತಿ ಹುಟ್ಟಲು ಸಾಧ್ಯವಾ? ಓದುಗರೂ ತುಂಬ ಬೆಳೆದಿರುತ್ತಾರೆ. ಮಾಧ್ಯಮಗಳು ಬಂದಿವೆ. ಏನು ಬೇಕಾದರೂ ನೋಡುವ, ಪಡೆಯುವ ಸ್ವಾತಂತ್ರ್ಯ ಇದೆ. ಹೆಣ್ಮಕ್ಕಳೂ ಮೊದಲಿನ ಹಾಗೆ ಒಳಗೊಳಗೇ ಬೆಂದು ಬಳಲುವುದಿಲ್ಲ. ಎಲ್ಲಾ ಹೇಳಿಕೊಂಡು ಮಾಡಿಕೊಂಡು ಸುಖವಾಗಿರುತ್ತಾರೆ. ಅಂಥದ್ದರಲ್ಲಿ..
ಬೇರೆ ಯಾರಿಂದ ಶುರುಮಾಡಬಹುದು ಎಂದು ಯೋಚಿಸುತ್ತಾ ದೂರದಲ್ಲಿ ಕಾಣಿಸುವ ಬೋಳು ಬೋಳು ಗುಡ್ಡದತ್ತ ಕಣ್ಣು ಹಾಯಿಸಿದ ಚಿರಾಯು. ತಾನು ನಲವತ್ತು ವರುಷಗಳ ಹಿಂದೆ ನೋಡಿದ ಹಾಗೇ ಈಗಲೂ ಇದೆ. ಅದೇ ಪಾಳು ಗುಡಿ, ಅದೇ ಒಂಟಿಮರ. ಇದ್ದಕ್ಕಿದ್ದಂತೆ ಆ ಮರದಡಿಯಲ್ಲಿ ವಿಜಯ ಲಕ್ಷ್ಮಿ ಕಾಣಿಸಿಕೊಳ್ಳುತ್ತಾಳೆ. ರೆಂಜೆ ಮರದಡಿಯಲ್ಲಿ ಹೂವು ಹೆಕ್ಕುವ ಜಾಹ್ನವಿ ಕಣ್ಮುಂದೆ ಮೂಡುತ್ತಾಳೆ. ಅದೇ ರೆಂಜೆ ಮರಕ್ಕೆ ನೇಣುಹಾಕಿಕೊಂಡು ಸತ್ತ ಶಾನುಭೋಗರ ಹೆಂಡತಿಯ ಹಸಿರು ಸೀರೆ ನೆನಪಿಗೆ ಬರುತ್ತದೆ. ಅಷ್ಟು ದಪ್ಪದ ಹೆಂಗಸು ಮರ ಹತ್ತಿ ನೇಣು ಹಾಕಿಕೊಂಡದ್ದಾದರೂ ಹೇಗೆ ಅನ್ನುವ ಪ್ರಶ್ನೆ ಆವತ್ತು ಯಾರನ್ನೂ ಕಾಡಿರಲೇ ಇಲ್ಲವಲ್ಲ ಅಂದುಕೊಳ್ಳುತ್ತಾ ಚಿರಾಯು ನೋಟ್‌ಪ್ಯಾಡ್ ಕೈಗೆತ್ತಿಕೊಂಡ.
ಚಿರಾಯುವಿಗೆ ಕಾದಂಬರಿ ಬರೆದು ಮುಗಿಸಲು ಬಾಕಿ ಉಳಿದಿರುವುದು ಇಪ್ಪತ್ತೆಂಟು ದಿನಗಳು ಮಾತ್ರ. ಅಷ್ಟರಲ್ಲಿ ಮುಗಿಸದೇ ಹೋದರೆ ಅಗ್ರಿಮೆಂಟ್ ಮುಗಿದುಹೋಗುತ್ತದೆ. ಒಪ್ಪಂದ ಮುರಿದುಹೋದರೆ ಪೆಂಗ್ವಿನ್ ಸಂಸ್ಥೆ ಕೊಟ್ಟಿರುವ ಆರು ಲಕ್ಷ ರುಪಾಯಿ ಅಡ್ವಾನ್ಸನ್ನು ವಾಪಸ್ಸು ಕೊಡಬೇಕು. ಅದಕ್ಕಿಂತ ದೊಡ್ಡ ನಷ್ಟವೆಂದರೆ ಒಪ್ಪಂದದ ಪ್ರಕಾರ ಬರಬೇಕಾದ ಇಪ್ಪತ್ತನಾಲ್ಕು ಲಕ್ಷ ರುಪಾಯಿಯೂ ಕೈ ಬಿಟ್ಟು ಹೋಗುತ್ತದೆ. ಹಾಗಂತ ಏನೇನೋ ಬರೆದು ಕೊಡುವಂತಿಲ್ಲ. ಅಂತಾರಾಷ್ಟ್ರೀಯ ಸಾಹಿತ್ಯ ವಲಯದಲ್ಲಿ ತನ್ನ ಕಾದಂಬರಿ ಚರ್ಚೆಯಾಗುತ್ತದೆ. ಹಾಗೆ ಚರ್ಚೆಗೆ ಬಂದಾಗ ತನ್ನ ಕಾದಂಬರಿ ಜಗತ್ತಿನ ಇತರೇ ಕಾದಂಬರಿಕಾರರ ಸಾಲಲ್ಲಿ ನಿಲ್ಲುವಂತಾಗಬೇಕು. ತನ್ನ ಸರೀಕರ ಎದುರು ತಾನು ನಿಕೃಷ್ಠ ಅನ್ನಿಸಿಕೊಳ್ಳಬಾರದು.
ವಿಚಾರವಾದ ಕಡಿಮೆ ಇರಲಿ, ರೋಚಕವಾದ ಘಟನೆಗಳಿರಲಿ,ಅವಮಾನಿತನಾದದ್ದು, ಪ್ರೇಮರಾಹಿತ್ಯ. ಹಿಂಸೆ, ಹೆಣ್ಣಿನ ಶೋಷಣೆ, ಹೆಣ್ಣು ಅನುಭವಿಸುವ ಯಾತನೆ, ಅವಳು ಸುಖಕ್ಕಾಗಿ ಹಾತೊರೆಯುವುದು, ಗಂಡಿನ ಅಹಂಕಾರವನ್ನು ಆಕೆ ಮೀರುವುದಕ್ಕೆ ಮಾಡುವ ಪ್ರಯತ್ನ - ಇವೆಲ್ಲ ಕಾದಂಬರಿಯಲ್ಲಿ ದಟ್ಟವಾಗಿ ಬರಲಿ. ಕಾದಂಬರಿಯನ್ನು ಜೀವಂತವಾಗಿಡುವುದು ಇಂಥ ಸಂಗತಿಗಳೇ. ಅವು ನಿಮ್ಮ ಅನುಭವವೇ ಆಗಿರಬೇಕು ಅಂಥೇನಿಲ್ಲ. ಯಾರ ಅನುಭವವಾದರೂ ಸರಿಯೇ, ಕಂಡದ್ದು, ಕೇಳಿದ್ದು ಎಲ್ಲಾ ಸೇರಿಸಿ ಬರೆಯಿರಿ. ಭಾರತೀಯತೆ ಮುಖ್ಯ. ನಿಮ್ಮ ಊರು, ನಿಮ್ಮ ನೆಲ, ನೆಲೆ ಅದರಲ್ಲಿ ಮೂಡಬೇಕಾದದ್ದು ಮುಖ್ಯ ಅಂತ ವಿವರಿಸಿದ್ದಳು ಶ್ರದ್ಧಾ. ಆಕೆ ಪೆಂಗ್ವಿನ್ ಇಂಡಿಯಾದ ಏಜಂಟು. ಒಳ್ಳೆಯ ಕಾದಂಬರಿಕಾರರನ್ನು ಹುಡುಕಿ ಅವರಿಂದ ಕಾದಂಬರಿ ಬರೆಸುವುದು ಅವಳ ಕೆಲಸ.
ಹಾಗಂತ ತನಗೇ ಬುದ್ಧಿ ಹೇಳಲಿಕ್ಕೆ ಬರುತ್ತಾಳಲ್ಲ, ಅವಳು ಹೇಳಿದ ಹಾಗೆ ಕಾದಂಬರಿ ಯಾಕೆ ಬರೀಬೇಕು ನಾನು ಎಂದು ಚಿರಾಯು ರೇಜಿಗಿಗೊಳ್ಳುತ್ತಾ ಎದ್ದು ನಿಂತ. ಅವನು ಎದ್ದು ನಿಂತದ್ದನ್ನು, ಚಡಪಡಿಸುತ್ತಿರುವುದನ್ನೂ, ಬರೆಯದೇ ಅರ್ಧ ದಿನ ಸುಮ್ಮನೆ ಕೂತಿದ್ದನ್ನೂ ಹೊರಗೆ ಕೂತು ನೋಡುತ್ತಿದ್ದ ಶೇಷು ಒಳಗೆ ಬಂದು ನಿಂತ. ಚಿರಾಯು ಕಣ್ಣಲ್ಲೇ ಸೂಚಿಸಿದ ಹಾಗೆ ಒಂದು ಲಾರ್ಜ್ ವಿಸ್ಕಿಗೆ ಸ್ವಲ್ಪ ಸೋಡ, ಸ್ವಲ್ಪ ನೀರು ಬೆರೆಸಿ ತಂದು ಅವನ ಕೈಲಿಟ್ಟ.
ಚಿರಾಯು ಮೊದಲ ಸಿಪ್ ಹೀರುತ್ತಾ ಶೇಷುವಿಗೋ ತನಗೋ ಎನ್ನುವುದು ಇನ್ನೂ ಸ್ವಷ್ಟವಾಗದವನಂತೆ ಹೇಳಿಕೊಂಡ:
ಯಾಮಿನಿಗೆ ಬರೋದಕ್ಕೆ ಹೇಳಬೇಕು.’